ಶಿವಮೊಗ್ಗ: ಉತ್ತರ ಪ್ರದೇಶ ಮಾಜಿ ಸಿಎಂ, ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ನಿಧನಕ್ಕೆ ಶಾಸಕ ಕೆ.ಎಸ್. ಈಶ್ವರಪ್ಪ ಸಂತಾಪ ಸೂಚಿಸಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಲಾಯಂ ಸಿಂಗ್ ಯಾದವ್ ಅವರು ಯುಪಿ ಸಿಎಂ ಆಗಿದ್ದ ಸಂದರ್ಭ ಸಾಕಷ್ಟು ಚಟುವಟಿಕೆ ಮಾಡಿದ್ರು. ರಾಷ್ಟ್ರನಾಯಕನನ್ನು ಕಳೆದುಕೊಂಡಿದ್ದೇವೆ. ಅವರು ಸಿಎಂ ಆಗಿದ್ದಾಗ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸಂಬಂಧ ಅವರ ಭೇಟಿಗೆ ಹೋಗಿದ್ವಿ. ಆದರೆ ಒಂದು ಸೊಳ್ಳೆನೂ ಒಳಗೆ ಹೋಗಲು ಬಿಡೊಲ್ಲ ಅಂದಿದ್ದರು ಎಂದರು.

ಇಡೀ ದೇಶದಲ್ಲಿ ಎಲ್ಲ ಪುಣ್ಯಕ್ಷೇತ್ರಗಳಿಗೆ ಮುಕ್ತಿ ಸಿಗುವ ಸಂದರ್ಭವಿದು. ಪುಣ್ಯ ಕ್ಷೇತ್ರಗಳಿಗೆ ಅಡ್ಡಿ ಬಂದಿದ್ದರೋ ಅವರನ್ನು ನೆನಪಿಸಿಕೊಳ್ಳಬೇಕು. ಧರ್ಮ, ಸಂಸ್ಕೃತಿಯ ದೇಶ ಅನೇಕ ವರ್ಷ ಗುಲಾಮಗಿರಿಯಲ್ಲಿತ್ತು. ಆ ವೇಳೆ ನಮ್ಮ ಧರ್ಮಕ್ಕೆ, ದೇಗುಲ, ಹೆಣ್ಣುಮಕ್ಕಳಿಗೆ ರಕ್ಷಣೆ ಇರಲಿಲ್ಲ. ಈಗ ಸಾಕಷ್ಟು ರಕ್ಷಣೆ ಸಿಗುತ್ತಿದೆ. ಮುಲಾಯಂ ಸಿಂಗ್ ಯಾದವ್ ಪಕ್ಷ ಕಟ್ಟಲು ಹೋರಾಟ ಮಾಡಿದ್ರು.

ಆದರೆ ಅವರ ಮಗ ಅಖಿಲೇಶ್ ವಿಫಲರಾಗಿದ್ದಾರೆ. ವ್ಯಕ್ತಿಯ ಮೇಲೆ ಪಕ್ಷ ನಿಲ್ಲೋದು ಕಷ್ಟ. ರಾಮ ಲೋಹಿಯಾ ನಿಧನದ ನಂತರ ಅವರ ಪಕ್ಷವೂ ಹೋಯ್ತು. ದೇಶ, ಸಂಸ್ಕೃತಿಯ ರಕ್ಷಣೆ ಉದ್ದೇಶದಲ್ಲಿ ಪಕ್ಷ ಕಟ್ಟಿದರೆ ಆ ಪಕ್ಷ ಉಳಿಯುತ್ತೆ ಎಂದರು