ಶಿವಮೊಗ್ಗದ ಸುಶೋಧಾ ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿಯಲ್ಲಿ ಇಂದು ನಡೆದ ಅಂಗಾಂಗ ದಾನ ಜಾಗೃತಿ ಕಾರ್ಯಕ್ರಮದಲ್ಲಿ ಅಪೋಲೋ ಹಾಸ್ಪಿಟಲ್ಸ್, ಬೆಂಗಳೂರಿನ ಹಿರಿಯ ಕನ್ಸಲ್ಟೆಂಟ್ ಡಾ. ಪ್ರದೀಪ್ ಕೃಷ್ಣ ಪಿ.ವಿ .; ಸುಶೋಧಾ ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿಯ ಡಾ. ಪ್ರದೀಪ್ ಕುಮಾರ್ ಜೆ.ಕೆ.; ಶಿವಮೊಗ್ಗದ ಎಂಎಲ್ಸಿ ಡಾ. ಧನಂಜಯ ಸರ್ಜಿ ; ಅಪೋಲೋ ಹಾಸ್ಪಿಟಲ್ಸ್ನ ಜನರಲ್ ಮ್ಯಾನೇಜರ್ ರಾಘವೇಂದ್ರ ಕುಲಕರ್ಣಿ ; ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಹಾಗೂ ಅಂಗಾಂಗ ದಾನಿಗಳು ಮತ್ತು ಫಲಾನುಭವಿಗಳು ಉಪಸ್ಥಿತರಿದ್ದರು.
ಶಿವಮೊಗ್ಗ, ಆ.23: ಅಂಗಾಂಗ ದಾನದ ಮಹತ್ವ ಹಾಗೂ ಅಂಗಾಂಗಗಳ ಕೊರತೆಯಿಂದ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಅಪೋಲೋ ಹಾಸ್ಪಿಟಲ್ಸ್ ಬೆಂಗಳೂರು ಹಾಗೂ ಶಿವಮೊಗ್ಗದ ಸುಶೋಧಾ ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿ ಸಹಯೋಗದಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸುಶೋಧಾ ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವೈದ್ಯರು, ರೋಗಿಗಳು, ಕುಟುಂಬಸ್ಥರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು. ಅಂಗಾಂಗ ದಾನದ ಕುರಿತು ಇರುವ ತಪ್ಪು ಕಲ್ಪನೆಗಳು, ಮೆದುಳು ನಿಷ್ಕ್ರಿಯತೆ, ಅಂಗಾಂಗ ಹಂಚಿಕೆ ಹಾಗೂ ಕಸಿ ಚಿಕಿತ್ಸೆಯ ಕುರಿತು ತಜ್ಞರು ಮಾಹಿತಿ ನೀಡಿದರು.

ಭಾರತದಲ್ಲಿ 2025ರಲ್ಲಿ 20,000ಕ್ಕೂ ಹೆಚ್ಚು ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗಳು ನಡೆದಿವೆ. ಆದರೆ ಅಂಗಾಂಗಗಳ ಬೇಡಿಕೆ ಮತ್ತು ಲಭ್ಯತೆಯ ನಡುವೆ ದೊಡ್ಡ ಅಂತರವಿದೆ. ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (NOTTO) ಪ್ರಕಾರ, ಮಾರ್ಚ್ 3, 2026ರ ವೇಳೆಗೆ ಪ್ರಮುಖ ಅಂಗಾಂಗ ಕಸಿಗಾಗಿ ಸುಮಾರು 90,000 ರೋಗಿಗಳು ಕಾಯುವಿಕೆ ಪಟ್ಟಿಯಲ್ಲಿದ್ದರು. ಹೀಗಾಗಿ ಸಮುದಾಯ ಮಟ್ಟದಲ್ಲಿ ಅಂಗಾಂಗ ದಾನದ ಕುರಿತು ಹೆಚ್ಚಿನ ಜಾಗೃತಿ ಅಗತ್ಯವಾಗಿದೆ ಎಂದು ತಜ್ಞರು ಹೇಳಿದರು.

ಅಪೋಲೋ ಆಸ್ಪತ್ರೆ ಬೆಂಗಳೂರಿನ HPB ಸರ್ಜರಿ ಮತ್ತು ಲಿವರ್ ಟ್ರಾನ್ಸ್ಪ್ಲಾಂಟೇಶನ್ ವಿಭಾಗದ ಹಿರಿಯ ಕನ್ಸಲ್ಟೆಂಟ್ ಡಾ. ಪ್ರದೀಪ್ ಕೃಷ್ಣ ಆರ್.ವಿ. ಮಾತನಾಡಿ, ಅಂಗಾಂಗ ದಾನವು ಮಾನವೀಯತೆಯ ಮಹತ್ವದ ಸೇವೆಯಾಗಿದ್ದು, ರೋಗಿಗಳಿಗೆ ಜೀವನದಲ್ಲಿ ಮತ್ತೊಂದು ಅವಕಾಶ ನೀಡುತ್ತದೆ. ಕಸಿ ಚಿಕಿತ್ಸೆಯಲ್ಲಿ ಸಾಕಷ್ಟು ಪ್ರಗತಿಯಾಗಿದ್ದರೂ ಅಂಗಾಂಗಗಳ ಕೊರತೆ ಇನ್ನೂ ದೊಡ್ಡ ಸವಾಲಾಗಿದೆ. ಜಾಗೃತಿ ಕಾರ್ಯಕ್ರಮಗಳ ಮೂಲಕ ತಪ್ಪು ಕಲ್ಪನೆಗಳನ್ನು ನಿವಾರಿಸಿ, ಕುಟುಂಬಗಳಲ್ಲಿ ಅಂಗಾಂಗ ದಾನದ ಕುರಿತು ಚರ್ಚೆ ಹೆಚ್ಚಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಂಗಾಂಗ ಕಸಿ ಮೂಲಕ ಚೇತರಿಸಿಕೊಂಡ ಲೋಕೇಶ್ ಮತ್ತು ರಾಜಶೇಖರ್ ಅವರ ಅನುಭವಗಳನ್ನು ಹಂಚಿಕೊಳ್ಳಲಾಯಿತು. ಮೆದುಳು ನಿಷ್ಕ್ರಿಯಗೊಂಡ ದಾನಿಯಿಂದ ಯಕೃತ್ತನ್ನು ಪಡೆದ ಲೋಕೇಶ್ ಇದೀಗ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಮೃತ ದಾನಿಯಿಂದ ಯಕೃತ್ತು ಲಭ್ಯವಾಗದ ಸಂದರ್ಭದಲ್ಲಿ ರಾಜಶೇಖರ್ ಅವರ ಪುತ್ರಿ ಅಮೆರಿಕದಿಂದ ಭಾರತಕ್ಕೆ ಆಗಮಿಸಿ ಜೀವಂತ ದಾನಿಯಾಗಿ ತನ್ನ ಯಕೃತ್ತಿನ ಒಂದು ಭಾಗವನ್ನು ತಂದೆಗೆ ದಾನ ಮಾಡಿದ್ದರು.


ಸುಶೋಧಾ ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿಯ ಗ್ಯಾಸ್ಟ್ರೋಎಂಟರಾಲಜಿಸ್ಟ್ ಹಾಗೂ ಹೆಪಟಾಲಜಿಸ್ಟ್ ಡಾ. ಪ್ರದೀಪ್ ಕುಮಾರ್ ಜೆ.ಕೆ. ಮಾತನಾಡಿ, “ಪ್ರತಿಯೊಂದು ಅಂಗಾಂಗ ಕಸಿಯೂ ಹೊಸ ಭರವಸೆಯ ಕಥೆಯಾಗಿದೆ. ಒಬ್ಬ ವ್ಯಕ್ತಿಯ ಅಂಗಾಂಗ ದಾನದಿಂದ ಹಲವು ಜೀವಗಳಿಗೆ ನೆರವಾಗಬಹುದು. ಆದ್ದರಿಂದ ಅಂಗಾಂಗ ದಾನದ ಕುರಿತು ಪ್ರತಿಯೊಂದು ಕುಟುಂಬದಲ್ಲೂ ಮುಕ್ತ ಚರ್ಚೆ ನಡೆಯಬೇಕು,” ಎಂದರು.
ಅಂಗಾಂಗ ದಾನವು ವೈದ್ಯಕೀಯ, ನೈತಿಕ ಹಾಗೂ ಕಾನೂನು ನಿಯಮಾವಳಿಗಳ ಪ್ರಕಾರ ನಡೆಯುತ್ತದೆ ಎಂದು ತಜ್ಞರು ಸ್ಪಷ್ಟಪಡಿಸಿದರು. ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಜನರು ಅಂಗಾಂಗ ದಾನದ ಕುರಿತು ಅರಿವು ಪಡೆದು, ಕುಟುಂಬದೊಂದಿಗೆ ಚರ್ಚಿಸಿ ದಾನಕ್ಕೆ ಮುಂದಾಗಬೇಕು ಎಂದು ಕರೆ ನೀಡಲಾಯಿತು.
ಸಂಪರ್ಕ:
ಅಪೋಲೋ ಆಸ್ಪತ್ರೆಗಳು – ದೀಪಕ್: 6363238510
ಮಾಧ್ಯಮ ಸಂಪರ್ಕ – ರವಣನ್ ರಾಘವ್: 7795213926


