ವಿಶೇಷ ವರದಿಗಾರ, ತುಂಗಾತರಂಗ
ಹೊಳೆಹೊನ್ನೂರು,ಆ.04: ಸಮೀಪದ ಅರಹತೊಳಲಿನಲ್ಲಿ ಕಳೆದ ನಾಲ್ಕು ದಿನಗಳಿಂದ ಜನರ ನಿದ್ದೆಗೆಡಿಸಿದ್ದ ಕೋತಿ (ಮುಷ್ಯ)ಯನ್ನು ಹಿಡಿಯುವಲ್ಲಿ ಬನವಾಸಿಯಿಂದ ಬಂದ ತಂಡ ಈಗ ಯಶಸ್ವಿಯಾಗಿದೆ.


ಕಳೆದ ಭಾನುವಾರ ಈ ಕೋತಿಯು ಗ್ರಾಮದ ಓರ್ವ ಬಾಲಕನ ಮೇಲೆ ದಾಳಿ ಮಾಡಿದ್ದರಿಂದ ಆ ಹುಡುಗ ತೀವ್ರವಾಗಿ ಗಾಯಗೊಂಡು ಅಸ್ವಸ್ಥನಾಗಿದ್ದ. ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.
ಹೆಂಗಸರು, ಮಕ್ಕಳು ಸೇರಿದಂತೆ ಒಂಟಿಯಾಗಿ ಯಾರೇ ಕಂಡರೂ ಕೂಡ ಕೋತಿ ( ಮುಷ್ಯ) ದಾಳಿಗೆ ಮುಂದಾಗುತ್ತಿತ್ತು. ಇದರಿಂದ ಗಾಬರಿಗೊಂಡ ಜನರು ಮನೆಯ ಹೊರಗೆ ಬರಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದ್ದರಿಂದ ಕೋತಿಯನ್ನು ಆದಷ್ಟು ಬೇಗ ಸೆರೆ ಹಿಡಿಯಬೇಕೆಂಬುದು ಗ್ರಾಮಸ್ಥರ ಒತ್ತಾಯವಾಗಿತ್ತು.




ತಕ್ಷಣ ಸ್ಪಂದಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸ್ಥಳೀಯ ಗ್ರಾಮ ಪಂಚಾಯತಿ ಮಂಗಳವಾರ ಬನವಾಸಿಯಿಂದ ಕೋತಿಯನ್ನು ಸೆರೆಹಿಡಿಯುವ ತಂಡವನ್ನು ಕರೆಸಿ ಕಾರ್ಯಾಚರಣೆ ಆರಂಭಿಸಿದ್ದು, ವೀರಯ್ಯ ಸಗಣಚಾರಿ ಮತ್ತು ತಂಡದಿಂದ ಮಂಗಳವಾರ ಬೆಳಿಗ್ಗೆಯಿಂದಲೇ ಕೋತಿ ಸೆರೆಗೆ ಮುಂದಾಯಿತು.

ಕೋತಿಯನ್ನು ಬೋನಿನೊಳಗೆ ಕಳುಹಿಸಲು ಬ್ರೆಡ್, ಬಾಳೆಹಣ್ಣು, ಮುಸುಕಿನ ಜೋಳ ಮತ್ತು ಕಡ್ಲೆಕಾಯಿಗಳನ್ನು ಬೋನಿನಲ್ಲಿಟ್ಟು ಸಾಕಷ್ಟು ಪ್ರಯತ್ನ ಪಟ್ಟರೂ ಆದರ ಚಾಲಕಿತನದಲಿ ಇದಾವುದರ ಆಸೆಗೂ ಒಳಪಡದೆ ಚಳ್ಳೆಹಣ್ಣು ತಿನಿಸುತ್ತಿತ್ತು. ಕಡೆಗೆ ಉಪಾಯ ಮಾಡಿ ಮನೆಯೊಂದರ ಒಳಗಡೆ ಕೋತಿ ಹೋಗುವಂತೆ ಮಾಡಿ ಸೆರೆ ಹಿಡಿಯಲಾಯಿತು. ನಂತರ ದೂರದ ದಟ್ಟ ಅರಣ್ಯದಲ್ಲಿ ಬಿಡುವುದಾಗಿ ಅರಣ್ಯ ಅಧಿಕಾರಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ಉಪ ವಲಯ ಅರಣ್ಯಧಿಕಾರಿ ಮನೋಹರ್, ಗಸ್ತು ಅರಣ್ಯ ಪಾಲಕ ಕೆ.ಹನುಮಂತಪ್ಪ, ಪಿಡಿಓ ಎನ್.ದೊರೆ ಇದ್ದರು.