ಶಿವಮೊಗ್ಗ : ರಾಜ್ಯ ಸರ್ಕಾರದ ರೈತ ವಿರೋಧಿ ಭೂ ಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಹಾಗೂ ಬಿಡದಿ ರೈತರ ಭೂ ಸ್ವಾಧೀನ ವಿರೋಧಿ ಹೋರಾಟ ಬೆಂಬಲಸಿ ಜುಲೈ೧೧ ರಂದು ಶನಿವಾರ ರೈತ ಸಂಘಟನೆಗಳ ಸಾಮೂಹಿಕ ನಾಯಕತ್ವ ದಲ್ಲಿ” ಬಿಡದಿ ಚಲೋ” ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ರೈತ ನಾಯಕ ಕೆ.ಟಿ. ಗಂಗಾಧರ್ ತಿಳಿಸಿದ್ದಾರೆ.
ಅವರು ಇಂದು ಪತ್ರಿಕಾಗೋಷ್ಟಿ ಯಲ್ಲಿ ಮಾತನಾಡಿ, ಅಭಿವೃದ್ಧಿ ಹೆಸರಲ್ಲಿ ರಾಜ್ಯ ಸರ್ಕಾರ ವು ಫಲವತ್ತಾದ ಕೃಷಿ ಭೂಮಿಗಳನ್ನು ಟೌನ್ ಶಿಪ್ ನಿರ್ಮಾಣಕ್ಕೆ ಭೂ ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ಯನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತೀವ್ರವಾಗಿ ಖಂಡಿಸುತ್ತದೆ ಎಂದರು.

ರಾಜ್ಯ ರೈತ ಸಂಘ ಅಭಿವೃದ್ಧಿ ಯ ವಿರೋಧಿಯಲ್ಲ, ಅದರೆ ರೈತರ ಕೃಷಿ ಭೂಮಿಗಳನ್ನು ರಿಯಲ್ ಎಸ್ಟೇಟ್ ನಂತಹ ವಾಮಾಚಾರದ ದಂಧೆಗೆ ಭೂ ಸ್ವಾಧೀನ ಪಡಿಸಿ ಕೊಳ್ಳುತ್ತಿರುವುದನ್ನು ಸಂಘವು ವಿರೋಧಿಸುತ್ತದೆ. ಇದೇ ನಿಟ್ಟಿನಲ್ಲಿ ಬಿಡದಿಯಲ್ಲಿನ ೭೪೮೧ ಎಕರೆ ಮತ್ತು ಸರ್ಜಾಪುರ ಹೋಬಳಿ ಜಂಗಮನಕಟ್ಟೆಯ ೧೮೦೦ ಎಕರೆ ಭೂ ಸ್ವಾಧೀನ ಪ್ರಕ್ರಿಯೆಯನ್ನು ಖಂಡಿಸುತ್ತದೆ. ಈ ಹಿನ್ನೆಲೆಯಲ್ಲಿ ಬಿಡದಿ ರೈತರ ಭೂ ಸ್ವಾಧೀನ ವಿರೋಧಿ ಹೋರಾಟವನ್ನು ಬೆಂಬಲಿಸಿ ಜು.೧೧ ರಂದುಬಿಡದಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ರಾಜಕೀಯ ಪಕ್ಷಗಳು ಹಳ್ಳಿಗಳಲ್ಲಿ ಭೂಮಿಯನ್ನು ಮಾರಾಟ ಮಾಡುವಂತಹ ವ್ಯವಹಾರಗಳಿಗೆ ಪ್ರೋತ್ಸಾಹ ನೀಡಬಾರದು. ಬದಲಿಗೆ, ವಿದ್ಯಾವಂತ ಯುವಕರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಮತ್ತು ಕೃಷಿಯನ್ನು ಲಾಭದಾಯಕವಾಗಿಸಲು ಗಮನ ಹರಿಸಬೇಕು , ಹಾಗೆಯೇ ಟೌನ್ಶಿಪ್ಗಳ ನಿರ್ಮಾಣದಿಂದ ಆ ಭಾಗದ ಜನರ ಬದುಕು ನಾಶವಾಗುವ ಸಾಧ್ಯತೆಯಿದ್ದು, ಇದನ್ನು ತಪ್ಪಿಸಬೇಕು.ಕಾಂಕ್ರೀಟ್

ಟೌನ್ಶಿಪ್ಗಳನ್ನು ನಿರ್ಮಿಸುವ ಬದಲು, ಎಲ್ಲಾ ಜಿಲ್ಲೆಗಳಲ್ಲಿ ಅಭಿವೃದ್ಧಿಯನ್ನು ವಿಕೇಂದ್ರೀಕರಿಸಿ ಕೈಗೊಳ್ಳಬೇಕೆಂದುಅವರು ಒತ್ತಾಯಿಸಿದರು.
ರಾಜ್ಯದಲ್ಲಿ ರೈತರ ಜಮೀನು, ನೀರಿನ ಹಕ್ಕು ಹಾಗೂ ಕೃಷಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತುವ ಉದ್ದೇಶದಿಂದ ಈ ಪ್ರತಿಭಟನೆ ಆಯೋಜಿಸಲಾಗಿದೆ.ಪ್ರತಿಭಟನೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿಮಾಡಿದರು. ಪತ್ರಿಕಾಗೋಷ್ಟಿಯಲ್ಲಿ ರೈತ ಮುಖಂಡರಾದ ಯಶವಂತ್ ರಾವ್ ಘೋರ್ಪಡೆ, ಸೀನಪ್ಪ, ಮಂಜುನಾಥ್,ಮಂಜುನಾಥೇಶ್ವರ್ ಇದ್ದರು.
ಭೂ ಸ್ವಾಧೀನ ವಿರೋಧಿ ದಿನ
ಜು.೨೧ರಂದು ಪ್ರತಿವರ್ಷ ನರಗುಂದ-ನವಲಗುಂದ ರೈತರ ಬಂಡಾಯದ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ವರ್ಷ ಜು.೨೧ರಂದು ರಾಜ್ಯ ಸರ್ಕಾರದ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಜಿಲ್ಲಾ ಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ರೈತನಾಯಕ ಕೆ.ಟಿ.ಗಂಗಾಧರ್ ತಿಳಿಸಿದರು.