ಶಿವಮೊಗ್ಗ: ರಾಜ್ಯದಲ್ಲಿ ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಯ ಸಂದರ್ಭದಲ್ಲಿ ಕೇಳಿಬಂದಿರುವ ಅಡ್ಡ ಮತದಾನ, ರೆಸಾರ್ಟ್ ರಾಜಕೀಯದಂತಹ ಬೆಳವಣಿಗೆಗಳು ಹಾಗೂ ರಾಜಕೀಯ ಭ್ರಷ್ಟಾಚಾರದ ಮೂಲಕ ಜನಪ್ರತಿನಿಧಿಗಳನ್ನು ಸೆಳೆಯುವ ಕುತಂತ್ರಗಳು ನಡೆಯುತ್ತಿರುವುದು ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆ ತರುತ್ತಿವೆ. ಈ ಹಿನ್ನೆಲೆಯಲ್ಲಿ, ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ರಾಜ್ಯಸಭಾ ಚುನಾವಣೆಗಳ ಮಾದರಿಯಲ್ಲೇ ರಾಜ್ಯದಲ್ಲಿ ವಿಧಾನಸಭೆಯ ಸದಸ್ಯರು (MLAಗಳು) ಮತ ಚಲಾಯಿಸಿ ವಿಧಾನಪರಿಷತ್ ಸದಸ್ಯರನ್ನು (MLCಗಳನ್ನು) ಆಯ್ಕೆ ಮಾಡುವ ಚುನಾವಣಾ ಪ್ರಕ್ರಿಯೆಯಲ್ಲೂ ರಹಸ್ಯ ಮತದಾನ ಪದ್ಧತಿಯನ್ನು ರದ್ದುಗೊಳಿಸಿ,ಮುಕ್ತ ಮತದಾನ (Open Ballot System) ಪದ್ಧತಿಯನ್ನು ಜಾರಿಗೆ ತರಬೇಕು ಎಂದು ವಿಧಾನಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಡಿ.ಎಸ್. ಅರುಣ್ ಅವರು ಪ್ರಬಲವಾಗಿ ಒತ್ತಾಯಿಸಿದ್ದಾರೆ.

ಐತಿಹಾಸಿಕ ಸುಧಾರಣೆ ಮತ್ತು ಸುಪ್ರೀಂ ಕೋರ್ಟ್ ಬೆಂಬಲ:
ಹಿಂದೆ ರಾಜ್ಯಸಭಾ ಚುನಾವಣೆಗಳಲ್ಲೂ ರಹಸ್ಯ ಮತದಾನ ಪದ್ಧತಿ ಇದ್ದಾಗ ಇಂತಹದ್ದೇ ಪಕ್ಷದ್ರೋಹ ಹಾಗೂ ಆಮಿಷಗಳ ದೂರುಗಳು ಕೇಳಿಬರುತ್ತಿದ್ದವು. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು 2003ರ ಆಗಸ್ಟ್ನಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಜನಪ್ರತಿನಿಧಿಗಳ ಕಾಯ್ದೆಗೆ (Representation of the People Act)ಐತಿಹಾಸಿಕ ತಿದ್ದುಪಡಿ ತಂದು ಮುಕ್ತ ಮತದಾನ ಪದ್ಧತಿಯನ್ನು ಜಾರಿಗೆ ತಂದಿತು. ಅಷ್ಟೇ ಅಲ್ಲದೆ, 2006 ರಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ಸಹ ಈ ಮುಕ್ತ ಮತದಾನ ವ್ಯವಸ್ಥೆಯನ್ನು ಎತ್ತಿಹಿಡಿಯಿತು. ಈ ಪದ್ಧತಿಯು ಚುನಾವಣಾ ಪ್ರಕ್ರಿಯೆಯ ಪವಿತ್ರತೆಯನ್ನು ಕಾಯ್ದುಕೊಳ್ಳಲು ಮತ್ತು ಭ್ರಷ್ಟಾಚಾರವನ್ನು ತಡೆಗಟ್ಟಲು ಅತ್ಯಗತ್ಯ ಎಂದು ದೇಶದ ಅತ್ಯುನ್ನತ ನ್ಯಾಯಾಲಯವೇ ಸ್ಪಷ್ಟಪಡಿಸಿದೆ ಎಂದು ಮಾನ್ಯ ಶಾಸಕರು ನೆನಪಿಸಿದರು.

ಆಮಿಷ ಹಾಗೂ ಬ್ಲಾಕ್ಮೇಲ್ ರಾಜಕೀಯಕ್ಕೆ ಬ್ರೇಕ್:
ಇತ್ತೀಚಿಗಷ್ಟೇ ನಡೆದ ವಿಧಾನ ಪರಿಷತ್ತಿನಂತಹ ಚುನಾವಣೆಗಳು ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಅಧಿಕಾರದಲ್ಲಿರುವ ಪಕ್ಷಗಳು ತಮ್ಮ ಅಧಿಕಾರ ಬಲವನ್ನು ಬಳಸಿ ವಿರೋಧ ಪಕ್ಷದ ಜನಪ್ರತಿನಿಧಿಗಳಿಗೆ ಆಮಿಷ ಒಡ್ಡುವುದು ಅಥವಾ ಅವರ ಮೇಲಿರುವ ಪ್ರಕರಣಗಳನ್ನು ಮುಂದಿಟ್ಟುಕೊಂಡು ಬ್ಲಾಕ್ಮೇಲ್ ಮಾಡುವ ಸಾಧ್ಯತೆಗಳಿರುತ್ತವೆ. ಇಂತಹ ಸಂದರ್ಭಗಳಲ್ಲಿ ಜನಪ್ರತಿನಿಧಿಗಳು ಕೇವಲ ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಪಕ್ಷದ ವಿಪ್ ಉಲ್ಲಂಘಿಸಿ ಅಡ್ಡ ಮತದಾನ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಕೆಲವೇ ಕೆಲವು ಜನರ ಇಂತಹ ನಡವಳಿಕೆಯಿಂದ ಇಡೀ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡುವಂತಾಗಿದೆ ಎಂದು ಡಿ.ಎಸ್ ಅರುಣ್ ಅವರು ಬೇಸರ ವ್ಯಕ್ತಪಡಿಸಿದರು.
ಒಟ್ಟಾರೆ ವ್ಯವಸ್ಥೆಯ ಸುಧಾರಣೆ
ಯಾವುದೇ ಒಬ್ಬ ಜನಪ್ರತಿನಿಧಿ ಪಕ್ಷದ ಚಿಹ್ನೆಯಡಿ ಅಥವಾ ಪಕ್ಷದ ಬೆಂಬಲದಿಂದ ಗೆದ್ದು ಬಂದ ಮೇಲೆ, ಆ ಪಕ್ಷದ ಸಿದ್ಧಾಂತ ಹಾಗೂ ಶಿಸ್ತಿಗೆ ಬದ್ಧನಾಗಿರಬೇಕು. ಮುಕ್ತ ಮತದಾನ ಪದ್ಧತಿ ಜಾರಿಗೆ ಬಂದರೆ, ಮತದಾನದ ವೇಳೆ ತಮ್ಮ ಪಕ್ಷದ ಅಧಿಕೃತ ಏಜೆಂಟರಿಗೆ ಮತಪತ್ರವನ್ನು ತೋರಿಸಿ ಮತ ಚಲಾಯಿಸಬೇಕಾಗುತ್ತದೆ (Whip). ಇದರಿಂದ ಆಮಿಷಗಳಿಗೆ ಒಳಗಾಗುವ ಅಥವಾ ಬ್ಲಾಕ್ಮೇಲ್ಗೆ ಹೆದರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇದು ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯ ಮತ್ತು ಜನಪ್ರತಿನಿಧಿಗಳ ಗೌರವವನ್ನು ಕಾಪಾಡುತ್ತದೆ. ಆದ್ದರಿಂದ ಚುನಾವಣಾ ಆಯೋಗ ಹಾಗೂ ಸರ್ಕಾರಗಳು ಈ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಡಿ.ಎಸ್. ಅರುಣ್ ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.