ಶಿವಮೊಗ್ಗ : ಮಹಿಳಾ ಮೀಸಲಾತಿಯ ಹೈಡ್ರಾಮ ಸೇರಿದಂತೆ ಬಿಜೆಪಿಗರ ಸೈದ್ಧಾಂತಿಕ ವಿಷಯಗಳ ಬಗ್ಗೆ ಚರ್ಚೆಗೆ ನಾನು ಸಿದ್ಧ. ಸಂಸದ ಬಿ.ವೈ.ರಾಘವೇಂದ್ರ, ಶಾಸಕರುಗಳಾದ ಆರಗ ಜ್ಞಾನೇಂದ್ರ, ಬಿ.ವೈ.ವಿಜಯೇಂದ್ರ, ಎಸ್.ಎನ್. ಚನ್ನಬಸಪ್ಪ ಈ ನಾಲ್ವರು ಚರ್ಚೆಗೆ ಬರಲಿ. ನನ್ನ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪಂಥಾಹ್ವಾನ ನೀಡಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಗರಿಗೆ ಯಾವ ಮೂಲದಿಂದಲೂ ಮಹಿಳೆಯರ ಬಗ್ಗೆ ಗೌರವ ಇಲ್ಲ. ಮಹಿಳಾ ಮೀಸಲಾತಿ ಮಸೂದೆಯನ್ನು ರಾಜಕೀಯ ಸ್ವಾರ್ಥಕ್ಕಾಗಿ ಮಂಡಿಸಿದ್ದಾರೆ. ಮಹಿಳಾ ಮೀಸಲಾತಿ ಮಸೂದೆ ಒಂದನ್ನೇ ಮಂಡಿಸುವುದನ್ನು ಬಿಟ್ಟು ಅದರ ಜೊತೆಗೆ ಕ್ಷೇತ್ರ ಮರು ವಿಂಗಡಣೆಯ ಮಸೂದೆಯನ್ನು ಕೂಡ ಜೋಡಿಸಿದ್ದು ಎಷ್ಟರಮಟ್ಟಿಗೆ ಸರಿ. ಒಂದು ರೀತಿಯಲ್ಲಿ ಇವೆರಡಕ್ಕೂ ಮದುವೆಮಾಡಿ ಮಸೂದೆ ಮಂಡಿಸಿದ್ದಾರೆ. ಮಹಿಳಾ ಮೀಸಲಾತಿ ಮಸೂದೆ ಜೊತೆ ಇದನ್ನು ಜೋಡಿಸಿರುವುದೇ ಒಂದು ರೀತಿಯ ಅಪರಾಧವಾಗಿದೆ ಎಂದು ತೀಕ್ಷ್ಣವಾಗಿ ಟೀಕಿಸಿದ ಅವರು, ಮಹಿಳೆಯರಿಗೆ ಅನ್ಯಾಯ ಮಾಡಿದ್ದೇ ಬಿಜೆಪಿಯವರು ಎಂದು ಆರೋಪಿಸಿದರು.
ಎರಡೂ ಮಸೂದೆಗೆ ಒಂದೇ ಮತವನ್ನು ಹಾಕುವುದಾದರೂ ಹೇಗೆ ? ಒಂದು ಮಸೂದೆಗೆ ಒಪ್ಪಿಗೆ ಇರುತ್ತದೆ. ಮತ್ತೊಂದು ಮಸೂದೆಗೆ ಒಪ್ಪಿಗೆ ಇರುವುದಿಲ್ಲ. ಇದನ್ನು ಯಾವ ಮತದ ಆಧಾರದ ಮೇಲೆ ತೀರ್ಮಾನಿಸಲಾಗುತ್ತದೆ ಎಂದು ಸ್ಪಷ್ಟನೆ ನೀಡಬೇಕು. ಎರಡೂ ಮಸೂದೆಗೂ ಒಂದು ಮತಹಾಕುವುದು ಮೂರ್ಖತನದ ಮಾತು. ಮತ್ತು ಇದು ಟೋಪಿಹಾಕುವ ಪ್ಲಾನ್ ಆಗಿದೆ ಎಂದರು.

ಅಷ್ಟಕ್ಕೂ ಈ ಮಸೂದೆಯನ್ನು ಮೊನ್ನೆಯೇ ಏಕೆ ಮಂಡಿಸಬೇಕಿತ್ತು. ಪಂಚರಾಜ್ಯಗಳ ಚುನಾವಣೆ ಮುಗಿದ ಮೇಲೆ ಅಥವಾ ಫಲಿತಾಂಶ ಬಂದ ಮೇಲೂ ಮಂಡಿಸಬಹುದಿತ್ತಲ್ಲವೇ ? ಈ ಆತುರ ಯಾಕೆ ? ಬಿಜೆಪಿ ಮುಖಂಡರು ತಾವೇ ಬುದ್ಧಿವಂತರು ಉಳಿದವರೆಲ್ಲಾ ದಡ್ಡರು ಎಂದುಕೊಂಡಿದ್ದಾರೆ. ನಿಧಾನವಾದರೂ ದೇಶದ ಜನರಿಗೆ ಸತ್ಯ ಗೊತ್ತಾಗುತ್ತಿದೆ. ಕಾಂಗ್ರೆಸ್ನ ಮೇಲೆ ಗೂಬೆ ಕೂರಿಸಿರುವುದು ಎಷ್ಟರಮಟ್ಟಿಗೆ ಸರಿ ಎಂದು ಜನರೇ ಅರ್ಥಮಾಡಿಕೊಳ್ಳುತ್ತಾರೆ ಎಂದರು.
ಇದೇ ವೇಳೆ ಬಿಜೆಪಿ ಮುಖಂಡರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವುದು ಖಂಡನೀಯ. ಮಲ್ಲಿಕಾರ್ಜುನ ಖರ್ಗೆಯವರು ಆರ್ಎಸ್ಎಸ್ ವಿಷಜಂತುಗಳು ಅವರನ್ನು ಕೊಲ್ಲಬೇಕು ಎಂದಿರುವುದು ಸೈದ್ಧಾಂತಿಕ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತ್ರ. ಹಾಗಂತ ಮನುಷ್ಯರನ್ನು ಕೊಲ್ಲು ಎಂದು ಅರ್ಥವಲ್ಲ. ಖರ್ಗೆಯವರ ಹೇಳಿಕೆಯನ್ನು ನೂನು ಕೂಡ ಸಮರ್ಥಿಸುತ್ತೇನೆ. ವಿಷಜಂತು ಎಂದು ಕರೆದಿರುವುದರಲ್ಲಿ ತಪ್ಪೇನು ಇಲ್ಲ ಎಂದರು.

ಹಿಂದೂಗಳಲ್ಲಿ ದಲಿತರು ಹಿಂದುಗಳಲ್ಲವೇ ? ಅವರನ್ನು ಎಷ್ಟು ಶತಮಾನಗಳ ಕಾಲ ಇನ್ನೂ ಅಸ್ಪೃಶ್ಯವಾಗಿ ನೋಡುತ್ತೀರಾ ವರ್ಣಬೇಧವನ್ನು ಇನ್ನೇಷ್ಟು ಶತಮಾನಗಳ ಕಾಲ ಮುಂದುವರಿಸುತ್ತೀರಾ ? ಹಾಗಾಗಿ ಖರ್ಗೆಯವರ ಹೇಳಿಕೆ ಸರಿಯಾಗಿಯೇ ಇದೆ. ಅದನ್ನು ವಾಸ್ತವಕ್ಕೆ ಪದಶಃವಾಗಿ ಕಲ್ಪಿಸಿಕೊಳ್ಳುವ ಅವಶ್ಯಕತೆ ಇಲ್ಲ. ಕೊಲ್ಲುವುದು ಎಂದರೆ ಸಿದ್ಧಾಂತಗಳನ್ನೇ ಹೊರತು, ಮನುಷ್ಯರನ್ನಲ್ಲ. ದಲಿತ ಸಮಾಜಕ್ಕೆ ಇನ್ನೂ ಸಿಟ್ಟು ಬಂದಿಲ್ಲ. ಸಿಟ್ಟು ಬಂದರೆ ಇವರೆಲ್ಲಾ ಉಳಿಯುವುದೂ ಇಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಆರ್.ಪ್ರಸನ್ನಕುಮಾರ್, ಕಲಗೋಡು ರತ್ನಾಕರ್, ರಮೇಶ್ ಹೆಗ್ಡೆ, ಕೆಸ್ತೂರು ಮಂಜುನಾಥ್, ಆದರ್ಶ ಹುಂಚದಕಟ್ಟೆ, ಅಮರನಾಥ್ಶೆಟ್ಟಿ ಮತ್ತಿತರರು ಇದ್ದರು.