ಬೆಂಗಳೂರು/ಶಿವಮೊಗ್ಗ: ರಾಜ್ಯದಲ್ಲಿ ಸಾಲು ಸಾಲು ಹಗರಣಗಳಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಪ್ರಧಾನಿ ನರೇಂದ್ರ ಮೋದಿಜಿಯವರನ್ನು ಟೀಕಿಸುವ ನೈತಿಕ ಅರ್ಹತೆಯಿಲ್ಲ ಎಂದು ವಿಧಾನ ಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿ ಡಿ.ಎಸ್. ಅರುಣ್ ತೀವ್ರವಾಗಿ ಕಿಡಿ ಕಾರಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಾರತ-ಅಮೆರಿಕ ವ್ಯಾಪಾರ ಒಪ್ಪಂದವನ್ನು ಶರಣಾಗತಿ ಎಂದು ಕರೆದಿರುವುದು ಅವರ ಹತಾಶೆಯನ್ನು ತೋರಿಸುತ್ತದೆ,ಮೋದಿಜಿಯವರು ದೇಶದ ಹಿತಾಸಕ್ತಿಯನ್ನು ಬಲಿಗೊಟ್ಟು ಯಾವುದೇ ಒಪ್ಪಂದ

ಮಾಡಿಕೊಳ್ಳುವುದಿಲ್ಲ, ಬದಲಾಗಿ ಈ ಒಪ್ಪಂದವು ಭಾರತದ ಆರ್ಥಿಕತೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ದೂರದೃಷ್ಟಿ ಹೊಂದಿದೆ. ಅಸಮತೋಲಿತ ಸುಂಕ ಮತ್ತು ರೈತರ ಸಂಕಷ್ಟದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಸಿದ್ದರಾಮಯ್ಯನವರು ಜನರ ಹಾದಿ ತಪ್ಪಿಸುತ್ತಿದ್ದಾರೆ, ವಾಸ್ತವದಲ್ಲಿ ಮುಡಾ ಮತ್ತು ವಾಲ್ಮೀಕಿ ನಿಗಮದಂತಹ ಬೃಹತ್ ಹಗರಣಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಅವರು ಇಂತಹ ಹಗುರ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ತುರ್ತು ಪರಿಸ್ಥಿತಿಯ ಮೂಲಕ ಪ್ರಜಾಪ್ರಭುತ್ವದ ಕಂಠ ಹತ್ತಿಕ್ಕಿದ ಇತಿಹಾಸವಿರುವ ಕಾಂಗ್ರೆಸ್, ಇಂದು ಸಂಸತ್ತಿನ ಗೌರವದ ಬಗ್ಗೆ ಮಾತನಾಡುವುದು ಈ ಶತಮಾನದ ದೊಡ್ಡ ಹಾಸ್ಯವಾಗಿದ್ದು, ರಾಹುಲ್ ಗಾಂಧಿಯವರು ವಿದೇಶಿ ನೆಲದಲ್ಲಿ ಭಾರತದ ಘನತೆಯನ್ನು ಹರಾಜು ಹಾಕುತ್ತಿದ್ದರೆ, ಸಿದ್ದರಾಮಯ್ಯನವರು ಇಲ್ಲಿ ಸಾಕ್ಷ್ಯಾಧಾರಗಳಿಲ್ಲದ ಹಸಿ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಸಂಸದೀಯ ನಿಯಮಗಳ ಚೌಕಟ್ಟಿನಲ್ಲಿ ಸ್ಪೀಕರ್ ನೀಡಿದ ಎಚ್ಚರಿಕೆಯನ್ನು ಧ್ವನಿ ಹತ್ತಿಕ್ಕುವಿಕೆ ಎಂದು ಬಿಂಬಿಸುವುದು ಕಾಂಗ್ರೆಸ್ನ ಬೌದ್ಧಿಕ ದಿವಾಳಿತನವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದ ಅರುಣ್ ಅವರು, ಮೊದಲು ರಾಜ್ಯದ ಭ್ರಷ್ಟಾಚಾರ ಮತ್ತು ಆಡಳಿತ ವೈಫಲ್ಯಗಳ ಬಗ್ಗೆ ಕರ್ನಾಟಕದ ಜನತೆಗೆ ಉತ್ತರಿಸಿ, ಆಮೇಲೆ ವಿಶ್ವಮಾನ್ಯ ನಾಯಕ ಮೋದಿಜಿಯವರ ಬಗ್ಗೆ ಮಾತನಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.