ಸಾಗರ : ತಾಯಿ ಮಾರಿಕಾಂಬೆ ದರ್ಶನದಿಂದ ಮನಸ್ಸಿಗೆ ನೆಮ್ಮದಿ ದೊರೆತಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಗ್ರಾಮದೇವತೆ ಮಾರಿಕಾಂಬಾ ಜಾತ್ರೆಯಲ್ಲಿ ಪಾಲ್ಗೊಳ್ಳುವುದು ಅತ್ಯಂತ ಸಂತೋಷದ ಸಂಗತಿ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಇಲ್ಲಿನ ಮಾರಿಕಾಂಬಾ ಗಂಡನಮನೆ ದೇವಸ್ಥಾನದಲ್ಲಿ ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ಶ್ರೀದೇವಿಯ ದರ್ಶನ ಪಡೆದು ಮಾತನಾಡಿದ ಅವರು, ನಮ್ಮ ಸಂಸ್ಕೃತಿ, ಧi, ಪರಂಪರೆಯನ್ನು ಉಳಿಸುವಲ್ಲಿ ಇಂತಹ ಜಾತ್ರೆ ಉತ್ಸವಗಳು ಪ್ರಮುಖಪಾತ್ರ ವಹಿಸುತ್ತದೆ ಎಂದು ಹೇಳಿದರು.
ಸಾಗರ ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ಅಮ್ಮನವರ ದರ್ಶನಕ್ಕೆ ಲಕ್ಷಾಂತರ ಜನ ಭಕ್ತರು ಆಗಮಿಸಿದ್ದಾರೆ. ಅಮ್ಮನವರಿಗೆ ಪ್ರಾರ್ಥಿಸಿ ತಮ್ಮ ಬೇಡಿಕೆ ಈಡೇರಿಸಲು ಹರಕೆ ಕಟ್ಟಿಕೊಳ್ಳುತ್ತಾರೆ. ನಾನು ಸಹ ರಾಜ್ಯದಲ್ಲಿ ಉತ್ತಮ ಮಳೆಬೆಳೆಯಾಗಬೇಕು. ಜನರು ಸಮೃದ್ದವಾಗಿ, ನಿಶ್ಚಿಂತೆಯಿಂದ ಇರಬೇಕು ಎಂದು ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದ್ದೇನೆ. ನನ್ನ ಭಾಗ್ಯ ಎನ್ನುವಂತೆ ಅಂಕೆ ಹಾಕುವ ಶಾಸ್ತ್ರದಲ್ಲಿ ಸಹ ನಾನು ಭಾಗವಹಿಸಿದ್ದೇನೆ. ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ವಿಶೇಷ ರೈಲಿನ ವ್ಯವಸ್ಥೆ ಬೇಕು ಎಂದು ಕೇಂದ್ರ ಸಚಿವರಿಗೆ ಬೇಡಿಕೆ ಇರಿಸಿದಾಗ ತಕ್ಷಣ ಸ್ಪಂದಿಸಿದ್ದಾರೆ. ವಿಶೇಷ ರೈಲು ಬೆಂಗಳೂರಿನಿಂದ ಸಾಗರಕ್ಕೆ ಸಂಚರಿಸುತ್ತಿದೆ. ವಿಶೇಷ ರೈಲು ವ್ಯವಸ್ಥೆ ಮಾಡಿದ ಕೇಂದ್ರ ಸಚಿವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು.

ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ರಾಜ್ಯವು ಸುಭೀಕ್ಷವಾಗಿರಲಿ, ನಮ್ಮ ಕ್ಷೇತ್ರವು ಉತ್ತಮವಾಗಿರಲಿ ಎಂದು ಮಾರಿಕಾಂಬಾ ದೇವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದೇನೆ. ಜಾತ್ರೆಯು ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಸಾರ್ವಜನಿಕರು ಶ್ರದ್ದಾಭಕ್ತಿಯಿಂದ ಜಾತ್ರೆಯಲ್ಲಿ ಪಾಲ್ಗೊಂಡು ಅಮ್ಮನವರ ದರ್ಶನ ಪಡೆಯಬೇಕು. ಆರನೇ ದಿನದ ಜಾತ್ರೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ದೇವಸ್ಥಾನ ಸಮಿತಿಯ ಕೆ.ಎನ್.ನಾಗೇಂದ್ರ, ಬಿಜೆಪಿ ಪ್ರಮುಖರಾದ ಕೆ.ಆರ್.ಗಣೇಶಪ್ರಸಾದ್, ದೇವೇಂದ್ರಪ್ಪ, ಮಲ್ಲಿಕಾರ್ಜುನ ಹಕ್ರೆ, ರತ್ನಾಕರ ಹೊನಗೋಡು, ಕೊಟ್ರಪ್ಪ ನೇದರವಳ್ಳಿ, ಆರ್.ಶ್ರೀನಿವಾಸ್, ಸತೀಶ್ ಆರ್., ಸುವರ್ಣ ಟೀಕಪ್ಪ, ಮೈತ್ರಿ ಪಾಟೀಲ್, ಸವಿತಾ ವಾಸು, ಸಂತೋಷ್ ಶೇಟ್ ಇನ್ನಿತರರು ಹಾಜರಿದ್ದರು.