ರಾಜ್ಯದ ವಿವಿಧ ಭಾಗಗಳಲ್ಲಿ ಸಾರ್ವಜನಿಕವಾಗಿ ಪಾಕಿಸ್ತಾನ್ ಜಿಂದಾಬಾದ್ ಹಾಗೂ ಬಾಂಗ್ಲಾದೇಶ ಜಿಂದಾಬಾದ್ ಎಂಬ ರಾಷ್ಟ್ರವಿರೋಧಿ ಘೋಷಣೆಗಳನ್ನು ಕೂಗುತ್ತಿರುವ ದೇಶದ್ರೋಹಿ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ವಿಧಾನಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಡಿ.ಎಸ್. ಅರುಣ್ ಅವರು ಸದನದಲ್ಲಿ ಪ್ರಶ್ನಿಸಿದ್ದಾರೆ .
ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ವಿವಿಧೆಡೆ ಬರೋಬ್ಬರಿ 18 ಇಂತಹ ದೇಶವಿರೋಧಿ ಪ್ರಕರಣಗಳು ದಾಖಲಾಗಿದ್ದರೂ, ಈವರೆಗೂ ಒಬ್ಬನೇ ಒಬ್ಬ ಅಪರಾಧಿಗೆ ಶಿಕ್ಷೆಯಾಗದಿರುವುದು ಸರ್ಕಾರದ ತನಿಖಾ ವೈಫಲ್ಯ ಮತ್ತು ಮೃದು ಧೋರಣೆಯನ್ನು ಎತ್ತಿ ತೋರಿಸುತ್ತಿದೆ. ಇಂತಹ ಘಟನೆಗಳಿಂದ ನಾಡಿನ ದೇಶಭಕ್ತ ನಾಗರಿಕರ ಭಾವನೆಗಳಿಗೆ ತೀವ್ರ ಧಕ್ಕೆಯುಂಟಾಗುತ್ತಿದ್ದು, ಇದು ಸಮಾಜದಲ್ಲಿ ಅಸಹಿಷ್ಣುತೆ ಮತ್ತು ಕೋಮು ಸಂಘರ್ಷಕ್ಕೆ ಕಿಡಿಹಚ್ಚುವ ಅಪಾಯವಿದೆ ಎಂದು ಮಾನ್ಯ ಶಾಸಕರು ಎಚ್ಚರಿಸಿದರು.
ಕೇವಲ ಹೆಸರಿಗಷ್ಟೇ ಎಫ್ಐಆರ್ ದಾಖಲಿಸಿ ಪ್ರಕರಣವನ್ನು ತಣ್ಣಗಾಗಿಸುವ ತಂತ್ರ ಬಿಟ್ಟು, ದೇಶದ ಅಸ್ಮಿತೆಗೆ ಸವಾಲು ಹಾಕುವ ಇಂತಹ ದೇಶದ್ರೋಹಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಧೈರ್ಯವಿಲ್ಲವೇ? ಎಂದು ಹೇಳಿದರು, ಇಂತಹ ಚಟುವಟಿಕೆಗಳನ್ನು ಹತ್ತಿಕ್ಕಲು ತಕ್ಷಣವೇ ಅಸ್ತಿತ್ವದಲ್ಲಿರುವ ಕಾನೂನುಗಳಿಗೆ ಕಠಿಣ ತಿದ್ದುಪಡಿ ತರಬೇಕು ಅಥವಾ ಹೊಸದಾದ ಪ್ರಬಲ ಕಾನೂನನ್ನು ಜಾರಿಗೆ ತರಬೇಕು ಎಂದು ಅಭಿಪ್ರಾಯ ಪಟ್ಟರು. ರಾಷ್ಟ್ರಭಕ್ತಿಗಿಂತ ಓಟ್ ಬ್ಯಾಂಕ್ ರಾಜಕಾರಣವೇ ಮೇಲಾಯಿತೇ ಎಂದು ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿದ ಅವರು, ಶಾಂತಿ ಮತ್ತು ಸೌಹಾರ್ದತೆಯ ನೆಪದಲ್ಲಿ ದೇಶವಿರೋಧಿಗಳಿಗೆ ರಕ್ಷಣೆ ನೀಡುವುದನ್ನು ನಿಲ್ಲಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ರಾಜ್ಯ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದರು.