‘
ಶಿವಮೊಗ್ಗ, ನ.07:
ಭಾರತ ದೇಶದ ರಾಷ್ಟ್ರಗೀತೆ ‘ಜನಗಣ ಮನ’ವನ್ನು ಬ್ರಿಟೀಷರ ಸ್ವಾಗತಕ್ಕೆ ರಚಿಸಿದ್ದು, ಅದನ್ನು ರಾಷ್ಟ್ರಗೀತೆಯನ್ನಾಗಿ ಮಾಡಿದ್ದು ಸರಿಯಲ್ಲ ಎಂದು ಹೇಳುವ ಮೂಲಕ ನೂರಾನಲವತ್ತು ಕೋಟಿ ಭಾರತೀಯರ ಅಸ್ಮಿತೆಯಾಗಿರುವ ರಾಷ್ಟ್ರಗೀತೆಗೆ ಅಪಮಾನವೆಸಗಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಸಂಸದ ಸ್ಥಾನದಿಂದ ವಜಾಗೊಳಿಸಬೇಕೆಂದು ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ. ಒತ್ತಾಯಿಸುತ್ತಿದೆ.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಹೊನ್ನಾವರದಲ್ಲಿ ಆಯೋಜಿಸಿದ್ದ ‘ಏಕತೆಗಾಗಿ ನಡಿಗೆ’ ಕಾರ್ಯಕ್ರಮದಲ್ಲಿ ‘ವಂದೇ ಮಾತರಂ’ ಗೀತೆಯು ರಾಷ್ಟ್ರಗೀತೆಯಾಗಬೇಕೆಂದು ಪ್ರತಿಪಾದಿಸುತ್ತಾ ಭಾರತೀಯರೆಲ್ಲರೂ ಒಪ್ಪಿಕೊಂಡಿರುವ ‘ಜನಗಣಮನ’ ರಾಷ್ಟ್ರಗೀತೆಯಾಗಿರುವುದು ಸರಿಯಲ್ಲ, ಅದನ್ನು ಬ್ರಿಟೀಷರ ಸ್ವಾಗತಕ್ಕೆ ರಚಿಸಿದ್ದು ಎಂದು ಹೇಳುವ ಮೂಲಕ ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದಾರೆ. ಇದನ್ನು ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ. ತೀವ್ರವಾಗಿ ಖಂಡಿಸುತ್ತದೆ.

ವಿಶ್ವೇಶ್ವರ ಹೆಗಡೆ ಕಾಗೇರಿಯವರು ರಾಜ್ಯದ ಶಿಕ್ಷಣ ಸಚಿವರಾಗಿದ್ದವರು, ವಿಧಾನಸಭೆಯ ಸ್ಪೀಕರ್ ಹುದ್ದೆಯಂತಹ ಸಾಂವಿಧಾನಿಕ ಹುದ್ದೆಯನ್ನು ನಿಭಾಯಿಸಿದ್ದವರು. ಆದರೆ, ಸಂಸದರಾಗಿ ಜನರಲ್ಲಿ ರಾಷ್ಟ್ರಗೀತೆ, ಸಂವಿಧಾನಗಳ ಬಗ್ಗೆ ಗೌರವ ಭಾವನೆ ಮೂಡಿಸುವಂತಹ ಮಾತುಗಳನ್ನಾಡುವ ಬದಲು, ಮನುವಾದಿಗಳಿಂದ ಪ್ರೇರಿತವಾದ ಪೂರ್ವಾಗ್ರಹ ಪೀಡಿತರಾಗಿ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಾ ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದಾರೆ. ಮನುವಾದಿ ಮನೋಭಾವದವರು ದೇಶದ ಸಂವಿಧಾನವನ್ನೂ ಒಪ್ಪುತ್ತಿಲ್ಲ, ರಾಷ್ಟ್ರ ಧ್ವಜ, ರಾಷ್ಟ್ರಗೀತೆ ಯನ್ನು ಒಪ್ಪುತ್ತಿಲ್ಲ. ದೇಶದಲ್ಲಿ ಆಂತರಿಕವಾಗಿರುವ ನಿಜವಾದ ದೇಶದ್ರೋಹಿಗಳೆಂದರೆ ಇವರೆ ಆಗಿದ್ದಾರೆ. ಗೌರವಾನ್ವಿತ ರಾಷ್ಟ್ರಪತಿಗಳು ಕೂಡಲೇ ರಾಷ್ಟ್ರಗೀತೆಗೆ ಅಪಮಾನ ಮಾಡಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಸಂಸದ ಸ್ಥಾನದಿಂದ ವಜಾಗೊಳಿಸಬೇಕು. ರಾಷ್ಟ್ರಗೀತೆಗೆ ಅಪಮಾನ ಮಾಡಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ದೇಶದ ಜನತೆಯಲ್ಲಿ ಕ್ಷಮೆಯಾಚಿಸಬೇಕು ಎಂದು ಈ ಮೂಲಕ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಜವಳಿ ಮೂಲ ಸೌಕರ್ಯ ಅಭಿವೃದ್ಧಿ ನಿಲಯದ ಅಧ್ಯಕ್ಷರಾದ ಚೇತನ್ ಕೆ, ಯುವ ಮುಖಂಡರಾದ ಮಧುಸೂದನ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಅಡ್ಡು ಎನ್ಎಸ್ ಯುಐ ಜಿಲ್ಲಾ ಅಧ್ಯಕ್ಷರಾದ ವಿಜಯ್ , ಕಾರ್ಯಾಧ್ಯಕ್ಷರಾದ ರವಿ ಕಾಟಿಕೆರೆ ನಗರ ಅಧ್ಯಕ್ಷರಾದ ರವಿ ಕುಮಾರ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರೋಜಿರಾವ್, ವರುಣ್, ಅಭಿ, ನಗರ ಉಪಾಧ್ಯಕ್ಷರುಗಳಾದ ಆದಿತ್ಯ, ಸುಭಾನ್. ಫರಾಜ್, ಲೋಹಿತ್, ಯೂಸುಫ್ ರಿಹಾನ್, ಅಲ್ಹಾನ್ ಉಮ್ಮಾರ್, ಫಾರೂಕ್ ಸಮೀರ್, ಅಭಿಷೇಕ್, ಶ್ರೀಕಾಂತ್, ಅಂಜನ್, ಸೃಜನ್, ಪ್ರಸನ್ನ, ಆಕಾಶ್, ನಂದನ್, ನವೀನ್ ಹಾಗೂ ಹಲವಾರು ಎನ್ಎಸ್ ಯುಐ ನ ಕಾರ್ಯಕರ್ತರು ಭಾಗಿಯಾಗಿದ್ದರು