ಶಿವಮೊಗ್ಗ: ಹೃದಯ ಬಡಿತ ನಿರಂತರವಾಗಿ ಚಾಲನೆಯಲ್ಲಿ ಇರಬೇಕು. ಆಕಸ್ಮಿಕವಾಗಿ ಹೃದಯ ಬಡಿತ ನಿಂತರೆ ಗಂಡಾಂತರ ಎದುರಾಗುತ್ತದೆ. ಆ ಸಮಯದಲ್ಲಿ ಸಮೀಪ ಇರುವವರು ಧೈರ್ಯಗೆಡದೆ, ಸಾಹಸ ಮನೋಭಾವದಿಂದ ಕೌಶಲ್ಯ ಪ್ರದರ್ಶಿಸಿ ಜೀವ ಉಳಿಸಲು ಸಿಪಿಆರ್ ಬಗ್ಗೆ ತಿಳುವಳಿಕೆ ಹೊಂದುವುದು ಅಗತ್ಯ ಎಂದು ಭಾರತೀಯ ವೈದ್ಯಕೀಯ ಸಂಘದ ಶಿವಮೊಗ್ಗ ಶಾಖೆ ಅಧ್ಯಕ್ಷ ಡಾ. ರವೀಶ್ ಹೇಳಿದರು.
ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕ ಮತ್ತು ಭಾರತೀಯ ವೈದ್ಯಕೀಯ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಸಿಪಿಆರ್ ಪ್ರದರ್ಶಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ಹೃದಯಾಘಾತ ಆಗುತ್ತಿದೆ. ತಕ್ಷಣಕ್ಕೆ ಮುಂಜಾಗೃತಾ ಕ್ರಮ ಕೈಗೊಂಡರೆ ಜೀವ ರಕ್ಷಣೆ ಸಾಧ್ಯ. ಆದ್ದರಿಂದ ಎಲ್ಲರೂ ಈ ಸಿಪಿಆರ್ ಕ್ರಮವನ್ನು ಅರಿತುಕೊಂಡರೆ ಉತ್ತಮ. ಐಎಂಎ ಕ್ಲಬ್ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದು ತಿಳಿಸಿದರು.
ಡಾ. ಸಂಧ್ಯಾ ಡಿ.ಪಣಜಿ ಮಾತನಾಡಿ, ಯಾವುದೇ ವ್ಯಕ್ತಿ ತಕ್ಷಣಕ್ಕೆ ಮೂರ್ಚೆ ಹೋದರೆ, ಸಾಮಾನ್ಯರು ಅವರ ನಾಡಿಮಿಡಿತ ಗಮನಿಸಬೇಕು. ಕತ್ತಿನ ಧ್ವನಿ ಪೆಟ್ಟಿಗೆ ಸಮೀಪ ಮೂರು ಬೆರಳು ಹಿಡಿದು ನೋಡಿದಾಗ ಹೃದಯ ಬಡಿತದ ಅರಿವು ಮೂಡುತ್ತದೆ. ಬಡಿತದ ಕುರುಹು ತಿಳಿಯದೇ ಇದ್ದ ಪಕ್ಷದಲ್ಲಿ ತಕ್ಷಣವೇ ಸಮಿಪ ಇರುವವರು ಕಾಯೋನ್ಮುಖರಾಗಿ ಸಿಪಿಆರ್ ಮುಖಾಂತರ ಜೀವ ಉಳಿಸುವ ಸಾಧ್ಯತೆ ಹೆಚ್ಚು ಇರುತ್ತದೆ ಎಂದರು.

ಹೃದಯದ ಸಮೀಪ ಇರುವ ಮೂಳೆಯ ಮೇಲೆ ಎರಡೂ ಕೈ ಜೋಡಿಸಿ, ನೇರವಾಗಿ ಇಟ್ಟುಕೊಂಡು ಐದು ಸೆಂಟಿಮೀಟರ್ ಒಳಹೋಗುವ ರೀತಿ, ಮೂವತ್ತು ಬಾರಿ ಒಮ್ಮೆಗೆ ಒತ್ತಬೇಕು. ವೇಗ ನಿಮಿಷಕ್ಕೆ ನೂರು ಬಾರಿ ಒತ್ತುವಂತಿರಬೇಕು. ಮೂವತ್ತು ಬಾರಿಯ ನಂತರ, ಮತ್ತೊಬ್ಬರು ಈ ಕಾರ್ಯ ಮಾಡಬಹುದು. ಎಚ್ಚರ ಆಗುವವರೆಗೆ ಈ ಕಾರ್ಯ ಮುಂದುವರಿಸಬೇಕು ಆಂಬುಲೆನ್ಸ್ ಬಂದ ತಕ್ಷಣ ಆಸ್ವತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಬೇಕು. ಸಿಪಿಆರ್ ಚಿಕಿತ್ಸೆಯಿಂದ ಹಲವರ ಜೀವ ರಕ್ಷಣೆ ಮಾಡಲಾಗಿದೆ. ಎಲ್ಲರೂ ಈ ಕ್ರಮದ ತಿಳುವಳಿಕೆ ಇದ್ದಲ್ಲಿ ಇನ್ನೂ ಅನೇಕ ಜೀವ ಉಳಿಸಬಹುದು ಎಂದರು.
ಯೂತ್ ಹಾಸ್ಟೆಲ್ ತರುಣೋದಯ ಘಟಕದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಚಾರಣಕ್ಕೆ ಹೋಗುವವರು ಈ ಚಿಕಿತ್ಸೆ ಅರಿತರೆ, ಪ್ರಯಾಣದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಸಂಭವಿಸಬಹುದಾದ ಅನಾಹುತ ತಪ್ಪಿಸಬಹುದು ಎಂದು ಹೇಳಿದರು.
ಅ.ನಾ.ವಿಜಯೇಂದ್ರ ಮಾತನಾಡಿ, ಚಾರಣಕ್ಕೆ ಹೋದ ಸಂದರ್ಭದಲ್ಲಿ ಇತ್ತಿಚೆಗೆ ಈ ರೀತಿಯಾಗಿದ್ದು, ಸ್ಥಳದಲ್ಲಿದ್ದ ವೈದ್ಯರು ಅವರ ಜೀವ ಉಳಿಸಿ ಕರೆದುಕೊಂಡು ಬಂದ ನಿರ್ದರ್ಶನ ನಮ್ಮ ಕಣ್ಣ ಮುಂದೆ ಇದೆ ಎಂದರು. ಘಟಕದ ಚೇರ್ಮನ್ ಎಸ್.ಎಸ್. ವಾಗೇಶ್, ಕಾರ್ಯದರ್ಶಿ ಸುರೇಶ್ ಕುಮಾರ್, ಜಿ.ವಿಜಯಕುಮಾರ್, ರಾಜು, ಮಂಜಪ್ಪ, ಮಮತಾ, ರವಿಕುಮಾರ್, ನಾಗಲಾಂಬಿಕ, ಮಂಜಪ್ಪ, ಅರುಣ್ ರಾಜ್ ಇತರರಿದ್ದರು.