ಶಿವಮೊಗ್ಗ : ಸ್ಮಾರ್ಟ್ಸಿಟಿಯ ಎಬಿಡಿ ಪ್ರದೇಶದಲ್ಲಿನ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವ ಸಂಬಂಧವಾಗಿ ಮೆಸ್ಕಾಂ ಅಧಿಕಾರಿಗಳೊಂದಿಗೆ ಸಭೆ ನಡೆಸುವುದಾಗಿ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ತಿಳಿಸಿದರು.
ಪಾಲಿಕೆ ಸಭಾಂಗಣದಲ್ಲಿ ಇಂದು ನಾಗರಿಕಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಸದಸ್ಯರೊಂದಿಗೆ ಆಯೋಜಿಸಿದ್ದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಯುಜಿ ಕೇಬಲ್ ಕೆಲಸ ಸ್ಮಾರ್ಟ್ಸಿಟಿ ಕಂಪನಿ ಮಾತ್ರ ಮಾಡಿಲ್ಲ. ನಗರ ಪಾಲಿಕೆ, ಸ್ಮಾರ್ಟ್ ಸಿಟಿ ಹಾಗೂ ಮೆಸ್ಕಾಂನವರು ಯುಜಿ ಕೇಬಲ್ ಕೆಲಸ ಮಾಡಿದ್ದಾರೆ. ಅವರವರು ಕೆಲಸ ಮಾಡಿರುವ ಪ್ರದೇಶಗಳಲ್ಲಿ ಅವರೇ ವಿದ್ಯುತ್ ಕಂಬಗಳನ್ನು ತೆಗೆಯಬೇಕಿದೆ. ಹೀಗಾಗಿ ಮೂರು ಇಲಾಖೆಗಗಳ ಅಧಿಕಾರಿಗಳೊಂದಿಗೆ ಸಭೆ ನಡೆಸುವುದಾಗಿ ಹೇಳಿದರು.

ಇ-ಆಸ್ತಿ ಅಪ್ ಲೋಡ್ ಪ್ರಗತಿಯಲ್ಲಿದ್ದು, ತ್ವರಿತವಾಗಿ ಅರ್ಜಿಗಳನ್ನು ಅಪ್ ಲೋಡ್ ಮಾಡಲಾಗುತ್ತಿದೆ. ಪ್ರತಿ ದಿನ ಅರ್ಜಿಗಳ ಅಪ್ ಲೋಡ್ ಮಾಡಲಾಗುತ್ತದೆ. ಆ ಅರ್ಜಿಗಳು ವಲಯವಾರು ಸ್ವಯಂಚಾಲಿತ ಅಪ್ ಲೋಡ್ ಆಗುತ್ತವೆ. ನವೆಂಬರ್ ಡಿಸೆಂಬರ್ ಹೊತ್ತಿಗೆ 50 ಸಾವಿರ ಆಸ್ತಿ ಇ-ಖಾತೆ ಮಾಡಲಾಗುತ್ತದೆ ಎಂದು ಆಯುಕ್ತರು ಮಾಹಿತಿ ನೀಡಿದರು. 50 ಸಾವಿರ ಆಸ್ತಿ ಇ ಖಾತೆಯಾದ ಬಳಿಕ ಅಸ್ತಿ ಮಾಲೀಕರ ಸಭೆ ನಡೆಸಿ ಮಾಹಿತಿ ನೀಡಲು ಕ್ರಮವಹಿಸಲಾಗುತ್ತದೆ. ಈಗಾಗಲೇ 30 ಸಾವಿರ ಆಸ್ತಿ ಇ ಖಾತೆಯಾಗಿದೆ. ಇದನ್ನು ಇನ್ನಷ್ಟು ಚುರುಕು ಮಾಡಲಾಗುತ್ತದೆ ಎಂದರು.

ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷ ಡಾ. ಸತೀಶ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕೆ.ವಿ. ವಸಂತಕುಮಾರ್, ಕೋಟೆ ರಾಜು, ಎಸ್.ಬಿ.ಅಶೋಕ್ ಕುಮಾರ್, ಲೋಕೇಶ್ ಹಾಗೂ ಪಾಲಿಕೆಯ ಅಧಿಕಾರಿಗಳು ಇದ್ದರು.