ಶಿವಮೊಗ್ಗ: ಸಮಾಜದ ಸುರಕ್ಷತೆಗಾಗಿ ಪೋಕ್ಸೋ ಕಾನೂನಿನ ಅರಿವು ಅಗತ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶ ಎಂ.ಎಸ್.ಸಂತೋಷ್ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್ ಮತ್ತು ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಮ್ಯಾನೇಜ್ಮೆಂಟ್ ಸ್ಟಡೀಸ್ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶೇಷ ಕಾನೂನು ಜಾಗೃತಿ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳ ರಕ್ಷಣೆ ವಿಷಯದಲ್ಲಿ ಸಮಾಜದ ಪ್ರತಿಯೊಬ್ಬರೂ ಹೊಣೆಗಾರರಾಗಿರಬೇಕು. ಕಾನೂನು ಮಾತ್ರವಲ್ಲ, ಸಮಾಜದ ಜವಾಬ್ದಾರಿಯೂ ಮುಖ್ಯ. ಒಂದು ಮೈನರ್ ಬಾಲಕಿ ವಿರುದ್ಧ ಅಸಭ್ಯ ವರ್ತನೆ ನಡೆಸಿದರೂ ಅದು ಪೋಕ್ಸೋ ಕಾಯ್ದೆಯಡಿ ಕಠಿಣ ಶಿಕ್ಷೆಗೆ ಕಾರಣವಾಗುತ್ತದೆ. ಇಂತಹ ಪ್ರಕರಣಗಳಲ್ಲಿ ಕೇವಲ ದೈಹಿಕ ಹಾನಿ ಮಾತ್ರವಲ್ಲ, ಮಾನಸಿಕ ಹಾನಿಗೂ ಕಾನೂನು ಗಂಭೀರವಾಗಿ ನೋಡುತ್ತದೆ ಎಂದು ತಿಳಿಸಿದರು.
ಲೈಂಗಿಕ ಕಿರುಕುಳ ನೀಡಿದಲ್ಲಿ ಕನಿಷ್ಠ 3 ವರ್ಷ ಜೈಲು. ಗಂಭೀರವಾದ ದೌರ್ಜನ್ಯ ಕೇಸುಗಳಲ್ಲಿ 5 ರಿಂದ 7 ವರ್ಷ ಜೈಲು, ಅತ್ಯಾಚಾರ 10 ವರ್ಷದಿಂದ ಜೀವಾವಧಿ ಜೈಲು ಶಿಕ್ಷೆ ಹಾಗೂ ಸಹಕರಿಸಿದವರಿಗೂ ಸಮಾನ ಶಿಕ್ಷೆ ನೀಡಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪಿಪಿಟಿ ಮುಖಾಂತರ ನೈಜ ಉದಾಹರಣೆಗಳು, ಪ್ರಶ್ನೋತ್ತರ ಮಾದರಿಯಲ್ಲಿ ಚರ್ಚೆ ನಡೆಸಲಾಯಿತು. ಮಕ್ಕಳಿಂದಲೇ ಪ್ರಶ್ನೆಗಳನ್ನು ಕೇಳಿಸಿ, ಉತ್ತರಗಳನ್ನು ಪಡೆಯಲಾಯಿತು.
ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್ ಅಧ್ಯಕ್ಷ ಕೆ.ಎಸ್.ವಿಶ್ವನಾಥ ನಾಯಕ ಮಾತನಾಡಿ, ರೋಟರಿಯ ಪ್ರಮುಖ ಕರ್ತವ್ಯ ಎಂದರೆ ಸಮಾಜಕ್ಕೆ ಅರಿವು ಮೂಡಿಸುವುದು. ಕಾನೂನು ಜಾಗೃತಿಯಿಂದ ಮಕ್ಕಳ ರಕ್ಷಣೆ ಮಾಡಲು ಸಾಧ್ಯವಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಸುದರ್ಶನ್, ಉಪನ್ಯಾಸಕರಾದ ಡಾ. ಅನಿತಾ, ಉಮಾ, ರೋಟರಿ ಸಹಾಯಕ ಗವರ್ನರ್ ಕೆ.ಪಿ.ಶೆಟ್ಟಿ, ಝೋನಲ್ ಲೆಫ್ಟಿನೆಂಟ್ ಎಸ್.ಪಿ.ಶಂಕರ್, ಎಂ.ಪಿ.ಆನಂದ್ ಮೂರ್ತಿ, ಬಿ.ಜಿ.ಧನರಾಜ್, ಎಲ್.ಪ್ರತಾಪ್, ದೇವೇಂದ್ರಪ್ಪ ಹಾಗೂ ಸಿ.ಎನ್. ಮಲ್ಲೇಶ್ ಅನೇಕ ರೋಟರಿ ಸದಸ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.