ಶಿವಮೊಗ್ಗ : ಹಿಂದುಳಿದ ವರ್ಗಗಳು ಕಾಂಗ್ರೆಸ್ ಪಕ್ಷದ ಬೆನ್ನೆಲುಬು. ಅವರೇ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿಯಾಲಿದ್ದಾರೆ. ಹಾಗಾಗಿ ಹಿಂದುಳಿದ ವರ್ಗಗಳ ಪ್ರಗತಿಗೆ, ಏಳಿಗೆಗೆ, ಅಭಿವೃದ್ದಿಗೆ ಕಾಂಗ್ರೆಸ್ ಸರ್ಕಾರ ಬದ್ದವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ಹಿಂದುಳಿದ ವರ್ಗಗಳ ಸಮಾವೇಶ ಹಾಗೂ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವಿಭಾಗದ ನೂತನ ಅಧ್ಯಕ್ಷ ರಮೇಶ್ ಶಂಕರಘಟ್ಟ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ದಿ. ಬಂಗಾರಪ್ಪನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಮತ್ತು ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ ಶಕ್ತಿ ತುಂಬುತ್ತಾ ಬಂದಿದೆ. ಹಿಂದುಳಿದ ವರ್ಗಗಳಿಗೆ ಶಕ್ತಿ ತುಂಬ ಬೇಕೆಂದು ರಾಹುಲ್ ಗಾಂಧಿ ಅವರು ಹೇಳಿದ್ದಾರೆ. ಅದು ನನಗೆ ತಡವಾಗಿ ಅರ್ಥವಾಗಿದೆ. ಆ ನಿಟ್ಟಿನಲ್ಲಿ ಪಕ್ಷ ಸಂಘಟನೆಗೆ ಆದ್ಯತೆ ನೀಡಲಾಗುತ್ತಿದೆ ಎಂದರು.

ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವು ಹಿಂದುಳಿದ ವರ್ಗಗಳಿಗೆ ಶಕ್ತಿ ತುಂಬಲು ಮತ್ತು ಅವರನ್ನು ಸಂಘಟಿಸಲು ‘ವಾಯ್ಸ್ ಆಫ್ ಓಬಿಸಿ’ ಕಾರ್ಯಕ್ರಮ ಶುರುಮಾಡಿದೆ. ನೂರು ದಿನದಲ್ಲಿ ನೂರು ಕಾರ್ಯಕ್ರಮ ಮಾಡಲು ಸೂಚನೆ ನೀಡಲಾಗಿದೆ. ಆದರೆ ನಾವು ೨೫ ದಿನಗಳಲ್ಲಿಯೇ ವಾಯ್ಸ್ ಆಫ್ ಓಬಿಸಿ ಸಮಾವೇಶ ಆರಂಭಿಸಿದ್ದೇವೆ, ಅದು ಶಿವಮೊಗ್ಗದಿಂದಲೇ ಆರಂಭವಾಗಿದೆ. ಶಿವಮೊಗ್ಗ ಚಳವಳಿಯ ತವರೂರು. ಇಲ್ಲಿಂದಲೇ ಈ ಕಾರ್ಯಕ್ರಮ ಶುರುವಾಗಿರುವುದು ವಿಶೇಷವಾಗಿದೆ ಎಂದರು.
ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಮಾತನಾಡಿ, ಸಚಿವ ಮಧು ಬಂಗಾರಪ್ಪ ಐದು ವರ್ಷವೂ ಮಂತ್ರಿಯಾಗಿ ಮುಂದುವರಿಯುತ್ತಾರೆ. ಇಲ್ಲಿ ಅವರಿಂದಲೇ ಕೆಲಸ ಮಾಡಿಸಿಕೊಂಡು ಅವರ ಹಿಂದೆಯೇ ಮಾತನಾಡುತ್ತಾರೆ, ಇದು ಸರಿಯಲ್ಲ. ಮಧು ಬಂಗಾರಪ್ಪ ಶಿಕ್ಷಣ ಇಲಾಖೆಯಲ್ಲಿ ತಂದ ಯೋಜನೆಗಳನ್ನು ಯಾವ ಶಿಕ್ಷಣ ಮಂತ್ರಿಯೂ ಮಾಡಿಲ್ಲ. ಇವರು ಶಿಕ್ಷಣದಲ್ಲಿ ಕ್ರಾಂತಿ ತಂದಿದ್ದಾರೆ’ ಎಂದು ಹೇಳಿದರು.

ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಮಾತನಾಡಿ, ತುಳಿತಕ್ಕೆ ಒಳಗಾಗಿದ್ದ ಹಿಂದುಳಿದ ವರ್ಗದವರನ್ನು ಕಾಂಗ್ರೆಸ್ ಮುನ್ನಲೆಗೆ ತಂದಿದೆ. ಇಲ್ಲಿ ಬಿಜೆಪಿಯು ಜಾತಿ-ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುವ ಕಾರ್ಯ ಮಾಡುತ್ತಿದೆ ಎಂದು ದೂರಿದರು.
ಬಿಜೆಪಿಯನ್ನು ಎದುರಿಸಲು ನಾವು ಈಗಿನಿಂದಲೇ ಸಜ್ಜಾಗಬೇಕಿದೆ. ಎಲ್ಲರೂ ಒಗ್ಗೂಡಬೇಕಿದೆ. ಪಕ್ಷವನ್ನು ಸದೃಡಗೊಳಿಸುವ ಮೂಲಕ ಬಿಜೆಪಿ ಎದುರಿಸಬೇಕಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ. ಶ್ರೀಕಾಂತ್ ಹೇಳಿದರು.
ಮಾಜಿ ಸಂಸದ ಆಯನೂರು ಮಂಜುನಾಥ ಮಾತನಾಡಿ, ಕಾಂಗ್ರೆಸ್ ಪಕ್ಷದ ಸಂಘಟಿತವಾಗುವ ಕಾಲ ಬಂದಿದೆ. ಪ್ರತಿಯೊಬ್ಬರು ಜವಾಬ್ದಾರಿ ಅರಿಬೇಕಿದೆ. ಗುಂಪು ಆಗಬಾರದು, ಇಡೀ ಸಮೂಹ ಒಟ್ಟಾಗಿ ಪಕ್ಷ ಸಂಘಟನೆಗೆ ಎಕೆಲಸ ಮಾಡಬೇಕಿದೆ ಎಂದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್. ಎಂ. ಮಂಜುನಾಥ ಗೌಡ ಮಾತನಾಡಿ, ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಈಗಿನಿಂದಲೇ ಆಗಬೇಕಿದೆ ಎಂದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಜಿಲ್ಲಾ ಮಟ್ಟದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಪ್ರಮುಖರಾದ ಕಲಗೋಡು ರತ್ನಾಕರ, ನಾಗರಾಜ ಗೌಡ, ಎಂ.ಶ್ರೀಕಾಂತ್, ವೈ.ಹೆಚ್. ನಾಗರಾಜ್, ಶರತ್ ಮರಿಯಪ್ಪ, ಯು. ಶಿವಾನಂದ್, ಜಿ.ಪಲ್ಲವಿ, ಶ್ವೇತಾಭಂಡಿ, ಗೋಣಿ ಮಾಲತೇಶ್, ಶ್ರೀನಿವಾಸ ಕರಿಯಣ್ಣ, ಕಲೀಂ ಪಾಶಾ, ಎಸ್.ಪಿ.ಶೇಷಾದ್ರಿ, ಇಕ್ಕೇರಿ ರಮೇಶ್, ಜಿ.ಡಿ.ಮಂಜುನಾಥ, ಪುಷ್ಪಾ ಶಿವಕುಮಾರ್, ಕಾಶಿ ವಿಶ್ವನಾಥ, ಬಿ.ಕೆ.ಮೋಹನ್, ಉಮಾಪತಿ ಇದ್ದರು.