ಶಿವಮೊಗ್ಗ: ಸುಗಮ ಸಂಗೀತ ಕ್ಷೇತ್ರಕ್ಕೆ ಶಿವಮೊಗ್ಗ ಜಿಲ್ಲೆಯ ಸಾಕಷ್ಟು ಕಲಾವಿದರು ವಿಶೇಷವಾದ ಕೊಡುಗೆ ನೀಡಿದ್ದಾರೆ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ ಗೌರವಾಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.

ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮೈಸೂರಿನಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಸುಗಮ ಸಂಗೀತ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವ ಕಲಾವಿದರನ್ನು ಬೀಳ್ಕೊಟ್ಟು ಮಾತನಾಡಿ, ಸುಗಮ ಸಂಗೀತ ಪರಿಷತ್ ರಾಷ್ಟ್ರ ಮಟ್ಟದ ಕಲಾವಿದರನ್ನು ಗೌರವಿಸುವುದರ ಮುಖಾಂತರ ಬೇರೆ ಬೇರೆ ಕಲಾವಿದರಿಗೆ ಸ್ಪೂರ್ತಿಯಾಗಿದೆ. ಸಂಗೀತ ಕ್ಷೇತ್ರದಲ್ಲಿ ಸುಗಮ ಸಂಗೀತ ತಾಯಿ ಬೇರು. ಚಿತ್ರರಂಗಕ್ಕೂ ಸಹ ವಿಶೇಷವಾದ ಕೊಡುಗೆ ನೀಡಿದಂತಹ ಮಹನೀಯರು ಜಿಲ್ಲೆಯಲ್ಲಿದ್ದಾರೆ ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲಾ ಸುಗಮ ಸಂಗೀತ ಪರಿಷತ್ ಸಾಕಷ್ಟು ಕಾರ್ಯಗಳನ್ನು ಮಾಡುತ್ತಿದ್ದು, ಶಾಂತಾ ಶೆಟ್ಟಿ ಅವರ ನೇತೃತ್ವದಲ್ಲಿ ಪ್ರತಿಭೆಗಳಿಗೆ ಅವಕಾಶವನ್ನು ಕಲ್ಪಿಸುವುದರ ಮುಖಾಂತರ ತನ್ನದೇ ಆದ ಚಾಪು ಮೂಡಿದೆ. ಮೈಸೂರಿನಲ್ಲಿ ನಡೆಯುತ್ತಿರುವ ಸುಗಮ ಸಂಗೀತ ಗೀತೋತ್ಸವದಲ್ಲಿ ನಮ್ಮ ಕಲಾವಿದರಿಗೆ ಹಾಡಲು ಅವಕಾಶ ಸಿಕ್ಕಿರುವುದು ತುಂಬಾ ಹೆಮ್ಮೆಯಾಗಿದೆ ಎಂದು ಹೇಳಿದರು.

ಮೈಸೂರು ಕಲಾಮಂದಿರದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಸುಗಮ ಸಂಗೀತ ಸಮ್ಮೇಳನದಲ್ಲಿ ಭಾಗವಹಿಸಿ ಹಾಡುತ್ತಿರುವ ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕದ ಸದಸ್ಯರು ಹಾಗೂ ಕಲಾವಿದರನ್ನು ಬೀಳ್ಕೊಡಲಾಯಿತು.

ಸಮ್ಮೇಳದಲ್ಲಿ ಭಾಗವಹಿಸುತ್ತಿರುವ ಕಲಾವಿದರಾದ ಆಕಾಶವಾಣಿ ದೂರದರ್ಶನ ಕಲಾವಿದರಾದ ಉಮಾ ದಿಲೀಪ್, ಜಯಶ್ರೀ ಶ್ರೀಧರ್, ರಮಾ ಸುಬ್ರಹ್ಮಣ್ಯ, ಧನಪಾಲ್ ಸಿಂಗ್, ಸುದೀ ಗೌಡ, ರೋಟರಿ ಜಿ.ವಿಜಯಕುಮಾರ್, ಶುಭ ಹರ್ಷ, ಬಿಂದು ವಿಜಯಕುಮಾರ್, ಶೋಭಾ ಸತೀಶ್, ಮುರಳಿ, ಸಾಕೇತ್, ಲಕ್ಷ್ಮೀ ಮಹೇಶ್ ಇದ್ದರು.