ಶಿವಮೊಗ್ಗ : ಮುಸಲ್ಮಾನರ ತುಷ್ಠೀಕರಣ ಮಿತಿಮೀರಿ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ, ಮುಂದಿನ ಅಧಿವೇಶನದಲ್ಲಿ ಬಿಜೆಪಿ ಹೋರಾಟದ ಸಂಕಲ್ಪ ಮಾಡಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಇಂದಿಲ್ಲಿ ಗುಡುಗಿದರು.
ರಾಜ್ಯ ಸರ್ಕಾರದ ಮುಸ್ಲಿಮರ ಓಲೈಕೆ ಮುಂದುವರಿಸುತ್ತಿದೆ. ಈಗಾಗಲೇ ಸಾಕಷ್ಟು ಅನುದಾನಗಳನ್ನು ಮೀಸಲಾತಿಯನ್ನು ನೀಡಿದ್ದರೂ ಕೂಡ. ಈಗ ಮತ್ತೊಮ್ಮೆ ವಸತಿ ಯೋಜನೆಗಳನ್ನು ಶೇ.15ರಷ್ಟು ಮೀಸಲಾತಿಯನ್ನು ಹೆಚ್ಚಿಸಿದೆ. ಇದೊಂದು ಘೋರ ಅಪರಾಧವಾಗಿದೆ ಎಂದು ದೂರಿದರು.

ಒಂದು ಕಡೆ ತುಷ್ಠೀಕರಣ ನೀತಿಯಾದರೆ ಮತ್ತೊಂದು ಕಡೆ ರಾಜ್ಯ ಸರ್ಕಾರ ಬ್ರಹ್ಮಾಂಡ ಭ್ರಷ್ಠಾಚಾರ ನಡೆಯುತ್ತಿದೆ. ವಸತಿ ಯೋಜನೆಗಳಲ್ಲಿ ಎದ್ದು ಕಾಣುತ್ತಿದೆ. ಕಾಂಗ್ರೆಸ್ ಶಾಸಕರೇ ಆದ ಬಿ.ಆರ್. ಪಾಟೀಲ್ರವರು ಈಗಾಗಲೇ ತಮ್ಮ ನೋವುಗಳನ್ನು ಹಂಚಿಕೊಂಡಿದ್ದಾರೆ. ಇಲಾಖೆಯಲ್ಲಿ ಭ್ರಷ್ಟಾಚಾರವಾಗಿದೆ ಎಂದು ಸಾರ್ವಜನಿಕರ ಮುಂದೆಯೇ ಹೇಳಿದ್ದಾರೆ. ಇಷ್ಟಾದರೂ ಕೂಡ ಮುಖ್ಯಮಂತ್ರಿಗಳು ತುಟಿಕ್ಪಿಟಿಕ್ ಎನ್ನುತ್ತಿಲ್ಲ. ಇಲಾಖೆಯ ಸಚಿವರ ಬಗ್ಗೆಯೂ ಈ ಬಗ್ಗೆ ಕೇಳಿಲ್ಲ. ತಿಪ್ಪೇಸಾರುವ ಕೆಲಸ ನಡೆಯುತ್ತಿದೆ ಎಂದು ದೂರಿದರು.
ರಾಜ್ಯ ಸರ್ಕಾರ ಭ್ರಷ್ಟಾಚಾರವನ್ನು ಸಾಕುತ್ತಿದೆ ಎಂಬುದು ಈಗಾಗಲೇ ಗೊತ್ತಾಗಿದೆ. ಇಂತಹ ಭ್ರಷ್ಟಾಚಾರ ಕೂಡಲೇ ತನಿಖೆಯಾಗಬೇಕು. ವಸತಿ ಸಚಿವ ಜಮೀರ್ ಅಹ್ಮದ್ ತಮ್ಮ ಹುದ್ದೆಯಲ್ಲಿ ಮುಂದುವರಿದರೆ ತನಿಖೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಶಿಕ್ಷಣ ಸಚಿವ ಮಧುಬಂಗಾರಪ್ಪ ನಮ್ಮ ಮುಖಂಡರು, ಹಿರಿಯರೂ ಆದ ಬಿ.ಎಸ್. ಯಡಿಯೂರಪ್ಪನವರ ಬಗ್ಗೆ ಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಜೈಲಿಗೆ ಹೋಗಿ ಬಂದವರು ಎನ್ನುತ್ತಿದ್ದಾರೆ. ಮಧುಬಂಗಾರಪ್ಪನವರಿಗೆ ಗೊತ್ತಿರಲಿ. ಯಡಿಯೂರಪ್ಪ ಜೈಲಿಗೆ ಹೋಗಿದ್ದು ಪ್ರಜಾಪ್ರಭುತ್ವದ ಉಳುವಿಗಾಗಿ, ಬಡವರ ಉದ್ಧಾರಕ್ಕಾಗಿ, ಕಾರ್ಮಿಕರ ಪರವಾಗಿ, ರೈತರ ಪರವಾಗಿ, ಇಂದಿರಾಗಾಂಧಿಯವರ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಜೈಲಿಗೆ ಹೋಗಿದ್ದಾರೆ. ಇದು ಮಧು ಬಂಗಾರಪ್ಪನವರಿಗೆ ಗೊತ್ತಿರಲಿ. ತೇಜೋವಧೆಗೂ ಒಂದು ಮಿತಿ ಇರುತ್ತೆ. ಬಿ.ಎಸ್. ಯಡಿಯೂರಪ್ಪನವರ ಹೋರಾಟವನ್ನೇ ಅವರು ಮಾದರಿಯನ್ನಾಗಿ ತೆಗೆದುಕೊಳ್ಳಲಿ ಎಂದು ತಿರುಗೇಟು ನೀಡಿದರು.
ಬಿಜೆಪಿ ನಗರ ಅಧ್ಯಕ್ಷ ಮೋಹನ್ರೆಡ್ಡಿ ಮಾತನಾಡಿ, ಕೇಂದ್ರದ ನರೇಂದ್ರಮೋದಿಯವರ ಸರ್ಕಾರ ಬಂದು 11 ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಇದು ವಿಕಸಿತ ಭಾರತದ ಅಮೃತಕಾಲ. ಈ ಹಿನ್ನಲೆಯಲ್ಲಿ ನಗರದಲ್ಲಿ ಹಲವು ಕಾರ್ಯಕ್ರಮಗಳನ್ನು ಬಿಜೆಪಿ ಈಗಾಗಲೇ ಆಯೋಜಿಸಿದೆ ಜೂನ್ 27ರಂದು ತುರ್ತುಪರಿಸ್ಥಿತಿಯ ಕರಾಳದಿನ ಎಂಬ ವಿಶೇಷ ಕಾರ್ಯಕ್ರಮವನ್ನು ಅಂಬೇಡ್ಕರ್ ಭವನದಲ್ಲಿ ಸಂಜೆ 5.30ಕ್ಕೆ ಹಮ್ಮಿಕೊಂಡಿದೆ ಎಂದರು.

ಈ ಕಾರ್ಯಕ್ರಮದ ಹಿನ್ನಲೆಯಲ್ಲಿ ಕಾಲೇಜು ಯುವಕರಿಗೆ ಮತ್ತು ಸಾರ್ವಜನಿಕರಿಗೆ ತುರ್ತು ಪರಿಸ್ಥಿತಿಯ ಕರಾಳ ದಿನಗಳ ಕುರಿತು ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದೆ. ಆಸಕ್ತರು ಜೂ.25ರ ಸಂಜೆಯೊಳಗಾಗಿ ಹೆಸರು ನೊಂದಾಯಿಸಿಕೊಳ್ಳಬೇಕು. ಜೂ.26ರಂದು ಬಿಜೆಪಿ ಕಛೇರಿಯಲ್ಲಿ ಸ್ಪರ್ಧೆ ಏರ್ಪಡಿಸಲಾಗುವುದು ಎಂದರು.
ಜೂ.27ರಂದು ನಡೆಯುವ ಕರಾಳ ದಿನ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್. ಸುರೇಶ್ಕುಮಾರ್ ಪ್ರಮುಖ ಭಾಷಣ ಮಾಡುವರು. ಕಾರ್ಯಕ್ರಮದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕರು, ವಿಧಾನ ಪರಿಷತ್ ಸದಸ್ಯರು, ಬಿಜೆಪಿ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎನ್.ಕೆ. ಜಗದೀಶ್, ನಾಗರಾಜ್, ದೀನದಯಾಳ್, ಕೆ.ವಿ. ಅಣ್ಣಪ್ಪ, ಸುರೇಖ ಮುರಳೀಧರ್ ಸೇರಿದಂತೆ ಹಲವರಿದ್ದರು.