ಶಿವಮೊಗ್ಗ: ಮಥುರಾ ಗ್ರೂಪ್ ಕಾರ್ಮಿಕರು, ಸಿಬ್ಬಂದಿ ಪರಿಶ್ರಮ, ಸಹಕಾರ ಹಾಗೂ ಸಂಘ ಸಂಸ್ಥೆಗಳ ಓಡನಾಟದಿಂದ ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿದ್ದು, ಆತಿಥ್ಯ ರತ್ನ ಪ್ರಶಸ್ತಿ ಒದಗಿಬಂದಿದೆ ಎಂದು ಮಥುರಾ ಪ್ಯಾರಾಡೈಸ್ ಮಾಲೀಕ ಎನ್.ಗೋಪಿನಾಥ್ ಹೇಳಿದರು.
ನಗರದಲ್ಲಿ ಭದ್ರಾವತಿ ವಾಸು ಸಾರಥ್ಯದ ಭಾವಗಾನ ಶಿವಮೊಗ್ಗ ಹಾಗೂ ಮಥುರಾ ನಾಗರಾಜ್ ಸಾರಥ್ಯದ ಎಸ್ಎಸ್ ಕರೋಕೆ ಗ್ರೂಪ್ ವತಿಯಿಂದ ಮಥುರಾ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಸಂಗೀತ ಕಲಿಕೆಗೆ ಏಕಾಗ್ರತೆ ಹಾಗೂ ನಿರಂತರ ಅಭ್ಯಾಸ ಮುಖ್ಯ. ಇತ್ತೀಚಿನ ದಿನಗಳಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಕರೋಕೆ ಹಾಡುಗಾರರ ಸಂಖ್ಯೆ ತುಂಬಾ ಹೆಚ್ಚಾಗುತ್ತಿದೆ. ಆದರೆ ಹಾಡಿನ ಸಾಹಿತ್ಯ, ಸಂಗತಿ, ಹಿನ್ನೆಲೆ ಸಂಗೀತ ಗಮನದಲ್ಲಿರಿಸಿ ಅಭ್ಯಾಸ ಮಾಡಿ ಹಾಡುವುದು ಒಳ್ಳೆಯದು ಎಂದು ತಿಳಿಸಿದರು.
ಭದ್ರಾವತಿ ವಾಸು ಅವರ ಸಾರಥ್ಯದಲ್ಲಿ ಈಗಾಗಲೇ ಸಾಕಷ್ಟು ಹೊಸ ಹೊಸ ಕಲಾವಿದರು ಅವಕಾಶ ಪಡೆದುಕೊಳ್ಳುತ್ತಿದ್ದಾರೆ. ಅವರ ಪ್ರಯತ್ನ ಶ್ಲಾಘನೀಯ ಎಂದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಸೂಕ್ತ ವ್ಯಕ್ತಿಗೆ ಪ್ರತಿಷ್ಠಿತ ಆತಿಥ್ಯ ರತ್ನ ಪ್ರಶಸ್ತಿ ಲಭಿಸಿದೆ. ಮಥುರಾ ಗೋಪಿನಾಥ್ ಅವರ ದೂರದೃಷ್ಟಿ, ಸಂಘ ಸಂಸ್ಥೆಗಳೊಂದಿಗೆ ಹೊಸ ಆಲೋಚನೆಗಳೊಂದಿಗೆ ಕಾರ್ಯ ನಿರ್ವಹಿಸುವ ರೀತಿ ಅಭಿನಂದನೀಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭದ್ರಾವತಿ ವಾಸು ಮಾತನಾಡಿ, ಯಾವುದೇ ಸಂಸ್ಥೆಗಳು ಚಾಲ್ತಿಯಲ್ಲಿರಲು ಸಹಕಾರ, ಅಗತ್ಯ ಪ್ರೋತ್ಸಾಹ ಮುಖ್ಯ. ಗೋಪಿ ಅವರು ಉತ್ತಮ ಕಾರ್ಯಕ್ರಮಗಳಿಗೆ ಸದಾ ಪ್ರೋತ್ಸಾಹಿಸುತ್ತಾರೆ ಎಂದು ತಿಳಿಸಿದರು.
ಮಥುರಾ ನಾಗರಾಜ್, ಬುಜಂಗಪ್ಪ, ಡಾ. ಲಕ್ಷ್ಮೀದೇವಿ ಗೋಪಿನಾಥ್, ಆದ್ಯಾ, ಮಮತ, ಪರಶುರಾಮ್, ಪ್ರಶಾಂತ್, ರಾಜಶೇಖರ, ಉಷಾ, ರವಿ, ರವಿ ಚವ್ಹಾಣ್ ಪದಾಧಿಕಾರಿಗಳು ಉಪಸ್ಥಿತರಿದ್ದರು.