ಶಿವಮೊಗ್ಗ, ಜೂ. 22: ಜಮೀನಿನ ಕೃಷಿ ಹೊಂಡದಲ್ಲಿ ನೀರು ತರಲು ಹೋಗಿ ಯುವಕರಿಬ್ಬರು ಆಕಸ್ಮಿಕವಾಗಿ ಬಿದ್ದು ಸಾವು ಕಂಡ ಘಟನೆ, ಶಿವಮೊಗ್ಗ ತಾಲೂಕಿನ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಯಡವಾಲ ಗ್ರಾಮದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ಯಡವಾಲ ಗ್ರಾಮದ ನಿವಾಸಿ ಗೌತಮ್ (22) ಹಾಗೂ ಶಿವಮೊಗ್ಗದ ಕುಂಬಾರಗುಂಡಿ ಬಡಾವಣೆ ನಿವಾಸಿ ಚಿರಂಜೀವಿ (22) ಮೃತಪಟ್ಟವರೆಂದು ಗುರುತಿಸಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ತಂಡ ಆಗಮಿಸಿದೆ. ಕೃಷಿ ಹೊಂಡದಿಂದ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ಮೃತ ದೇಹಗಳನ್ನು ರವಾನಿಸಲಾಗಿದ್ದು ಇಂದು ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಗಳ ಮೂಲಗಳು ತಿಳಿಸಿವೆ.
ಮೃತ ಗೌತಮ್ ಅವರ ಕುಟುಂಬಕ್ಕೆ ಸೇರಿದ ತೋಟದ ಪಕ್ಕದ ಜಮೀನೊಂದರ ಬಳಿ ಘಟನೆ ನಡೆದಿದೆ. ರಾತ್ರಿ ಗೌತಮ್ ಸುಮಾರು 10 ಜನ ಸ್ನೇಹಿತರ ಜೊತೆಗೂಡಿ ತೋಟಕ್ಕೆ ಹೋಗಿದ್ದಾರೆ.
ಈ ವೇಳೆ ಕೃಷಿ ಹೊಂಡದಲ್ಲಿ ನೀರು ತರಲು ಹೋದ ಯುವಕ, ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದು ಈತನ ರಕ್ಷಣೆಗೆ ಹೋದ ಮತ್ತೋರ್ವನು ನೀರು ಪಾಲಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಇವರಿಬ್ಬರ ರಕ್ಷಣೆಗೆ ತೆರಳಿದ್ದ ಮತ್ತೋರ್ವ ಯುವಕ ಈಜಿ ದಡ ಸೇರಿದ್ದಾನೆ ಎಂದು ಹೇಳಲಾಗುತ್ತಿದೆ.

ಘಟನೆಯ ಕುರಿತಂತೆ ಪೊಲೀಸರು ಸೂಕ್ತ ತನಿಖೆ ನಡೆಸಿ, ಮೃತ ಯುವಕರ ಕುಟುಂಬಗಳಿಗೆ ನ್ಯಾಯ ಕೊಡಿಸಬೇಕು ಎಂದು ಯಡವಾಲ ಗ್ರಾಮದ ಗಿರೀಶ್ ನಾಯ್ಕ್ ಅವರು ಮನವಿ ಮಾಡಿದ್ದಾರೆ.
ಘಟನೆಯ ಕುರಿತಂತೆ ಪೊಲೀಸರ ತನಿಖೆಯ ನಂತರವಷ್ಟೆ ಹೆಚ್ಚಿನ ವಿವರಗಳು ಲಭ್ಯವಾಗಬೇಕಾಗಿದೆ.