ಶಿವಮೊಗ್ಗ,ಫೆ.೦೬: ಶಿವಮೊಗ್ಗದಲ್ಲಿ ಮಾಚೇನಹಳ್ಳಿಯ ತುಂಗಭದ್ರಾ ಜಂಕ್ಷನ್ನಲ್ಲಿ(ಜಯಲಕ್ಷ್ಮೀ ಪೆಟ್ರೋಲ್ ಬಂಕ್ ಹಿಂಬಾಗ) ೧೬ ಎಕರೆ ಜಾಗದಲ್ಲಿ ಇದೇ ಮೊದಲ ಬಾರಿಗೆ ಮಲೆನಾಡ ತುಂಗಭದ್ರಾ ಜೋಡುಕರೆ ಕಂಬಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷರಾದ ಮುಚ್ಚೂರು ಕಲ್ಕುಡೆ ಲೋಕೇಶ್ ಶೆಟ್ಟಿ ತಿಳಿಸಿದ್ದಾರೆ.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ಜಿಲ್ಲೆಯ ಸಾಂಸ್ಕೃತಿಕ ಪರಂಪರೆಯ ಮುಕುಟಕ್ಕೆ ತುಳುನಾಡ ವೀರ ಜಾನಪದ ಕ್ರೀಡೆ, ಕಂಬಳದ ಗರಿ ಸೇರ್ಪಡೆಗೊಳ್ಳಲಿದೆ. ಇದು ಕಂಬಳದ ಸೀಜನ್ನ ಕೊನೆಯ ಕಂಬಳವಾಗಿದ್ದು, ಫೆ.೧೦ರಂದು ಸೋಮವಾರ ಮಧ್ಯಾಹ್ನ ೩ಕ್ಕೆ ಮಾಚೇನಹಳ್ಳಿಯಲ್ಲಿ ಭೂಮಿ ಪೂಜೆ ಸಮಾರಂಭ ನಡೆಯಲಿದೆ ಎಂದರು.
ಇದೇ ಕಾರ್ಯಕ್ರಮದ ವೇದಿಕೆಯಲ್ಲಿಯೇ ಕಂಬಳದ ಚಿಹ್ನೆ, ಜಾಲತಾಣ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಅಧಿಕೃತವಾಗಿ ಬಿಡುಗಡೆಗೊಳ್ಳಿಸಲಾಗುವುದು. ಮಲೆನಾಡು ತುಂಗಭದ್ರ ಜೋಡುಕರೆ ಕಂಬಳದಲ್ಲಿ ನಮ್ಮ ಸಂಪ್ರದಾಯ, ಸಂಸ್ಕೃತಿ, ಗ್ರಾಮೀಣ ಸೊಗಡಿನ ಕಲೆ ಹಾಗೂ ನಮ್ಮ ಪರಂಪರೆಯನ್ನು ಪ್ರತಿಬಿಂಬಿಸುವ ಅಭೂತಪೂರ್ವ ಸಂಗಮಗಳ ಸಮಾಗಮವಾಗಲಿದ್ದು, ಈ ಐತಿಹಾಸಿಕ ಕ್ಷಣದ ಭೂಮಿ ಪೂಜೆಗೆ ಸಚಿವ ಮಧುಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಗೌರವಾಧ್ಯಕ್ಷರಾದ ಕೆ.ಎಸ್.ಈಶ್ವರಪ್ಪ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಪ್ರಮುಖರಾದ ಭಾಸ್ಕರ್ ಕೋಟ್ಯಾನ್, ಸುಕುಮಾರ್ ಶೆಟ್ಟಿ, ಶ್ರೀಕಾಂತ್ ಭಟ್ ನಂದಳಿಕೆ, ಮೋಹನ್ ಆಳ್ವಾ ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದಾರೆ ಎಂದರು.
ಕೆ.ಈ.ಕಾಂತೇಶ್ ಮಾತನಾಡಿ, ಈ ಕಾರ್ಯಕ್ರಮಕ್ಕೆ ೮ರಿಂದ ೧೦ ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಏ. ೧೯ರ ಶನಿವಾರ ಬೆಳಗ್ಗೆ ೯ರಿಂದ ಏ.೨೦ರ ಭಾನುವಾರ ೫ ಗಂಟೆಯವರೆಗೆ ನಿರಂತರವಾಗಿ ಈ ಕಂಬಳ ನಡೆಯಲಿದೆ. ಸುಮಾರು ೧೦೦ ಕ್ಕೂ ಹೆಚ್ಚು ಪ್ರಶಸ್ತಿ ವಿಜೇತ ಕಂಬಳದ ಜೋಡಿಗಳು ಭಾಗವಹಿಸಲಿವೆ. ಇದಕ್ಕಾಗಿ ಎಲ್ಲಾ ಸಿದ್ದತೆಯನ್ನು ಮಾಡಿಕೊಳ್ಳಲಾಗುವುದು. ೨೫೦ ಕ್ಕೂ ತುಳುನಾಡಿನ ಸಂಸ್ಕೃತಿ ಸಾರುವ ಸ್ಟಾಲ್ಗಳು ಇರಲಿವೆ ಎಂದರು.
ಕಂಬಳದ ಗೌರವಾಧ್ಯಕ್ಷರಾದ ಕೆ.ಎಸ್.ಈಶ್ವರಪ್ಪ ಮಾತನಾಡಿ, ಶಿವಮೊಗ್ಗ ಜಿಲ್ಲೆ ಸಂಸ್ಕೃತಿಗೆ ಪ್ರೋತ್ಸಾಹ ನೀಡುವ ತವರೂರಾಗಿದ್ದು, ಶಿವಮೊಗ್ಗ, ಚಿಕ್ಕಮಗಳೂರು, ಜಿಲ್ಲೆಯ ಜನರಿಗೆ ಒಂದು ವಿಶೇಷ ಅವಕಾಶವಾಗಿದೆ. ಸಾರ್ವಜನಿಕರಿಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಇಡೀ ರಾಜ್ಯದ ವಿವಿಧ ಮೂಲೆಗಳಿಂದ ಜನ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ತುಳುನಾಡು ಮತ್ತು ಮಲೆನಾಡಿನ ಜನ ಭಾಗವಹಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ಸಮಿತಿಯ ಉಪಾಧ್ಯಕ್ಷರಾದ ಸಂದೀಪ್ ಶೆಟ್ಟಿ ಪೊಡುಂಬ, ಕಿರಣ್ಕುಮಾರ್, ಕಾರ್ಯದರ್ಶಿ ಶಶಿಧರ್ ಶೆಟ್ಟಿ ಪ್ರಮುಖರಾದ ಹರಿಪ್ರಸಾದ್ ಶೆಟ್ಟಿ, ಈ.ವಿಶ್ವಾಸ್, ಕುಬೇರಪ್ಪ, ಶಿವಾಜಿ, ರಾಜಣ್ಣ, ಚಿದಾನಂದ್, ಶ್ರೀಕಾಂತ್, ಜಾಧವ್ ಮೊದಲಾದವರು ಇದ್ದರು.