ಶಿವಮೊಗ್ಗ,ಫೆ.೨೧: ದೇವಸ್ಥಾನ ಎನ್ನುವುದು ಪ್ರಾರ್ಥನಾಲಯ ಅಲ್ಲ. ಅದು ದೇವರ ಸಾನಿಧ್ಯ ಇರುವ ಜಾಗ. ಸಮಾಜಕ್ಕೆ ದೇವಾಲಯಗಳು ಮಾರ್ಗದರ್ಶನ ನೀಡುವ ತಾಣಗಳು ಎಂದು ಕೂಡಲಿ ಶ್ರೀ ಶ್ರೀ ಶ್ರೀಮದ್ ಜಗದ್ಗುರು ಶ್ರೀ ಅಭಿನವ ಶಂಕರ ಭಾರತೀ ಸ್ವಾಮಿಗಳು ಹೇಳಿದ್ದಾರೆ.
ಅವರು ಇಂದು ನಗರದ ಬಾಪೂಜಿ ನಗರದಲ್ಲಿ ಶ್ರೀರಾಮ ಸೇವಾ ಸಮಿತಿವತಿಯಿಂದ ಆಯೋಜಿಸಿದ ನೂತನ ಶಿಲಾಮಯ ಗರ್ಭಮಂದಿರ ಮತ್ತು ನೂತನ ಕೋದಂಡ ರಾಮ ಹಾಗೂ ಗರುಡಗಂಭ ಪ್ರತಿಷ್ಠಾಪನ ಮಹೋತ್ಸವದಲ್ಲಿ ಸಾನಿಧ್ಯವಹಿಸಿ, ಆಶೀರ್ವಚನ ನೀಡಿದರು.
ನಮ್ಮ ಹಿಂದೂ ಧರ್ಮದಲ್ಲಿ ದೇವತಾ ಸಾನಿಧ್ಯ ಗಟ್ಟಿಯಾಗಲು ಮೂರ್ತಿ ಪ್ರತಿಷ್ಠಾಪಿಸಿದ ನಂತರ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರಾಣ ಪ್ರತಿಷ್ಠೆ ನೆರವೇರಿಸಿ ೧೨ ವರ್ಷಗಳಿಗೊಮ್ಮೆ ಕುಂಬಾಭಿಷೇಕ ಇನ್ನಿತರ ಕಾರ್ಯಕ್ರಮಗಳನ್ನು ಮಾಡಿ, ವಿಶೇಷವಾದ ಪ್ರಾಣ ಶಕ್ತಿಯನ್ನು ನೀಡುತ್ತೇವೆ. ಅಲ್ಲಿ ದೇವತಾ ಸಾನಿಧ್ಯ ವೃದ್ಧಿಯಾಗುತ್ತಿರುತ್ತದೆ. ಬೇರೆ ಧರ್ಮಗಳಲ್ಲಿ ದೇವತಾ ಮಂದಿರ ಎನ್ನುವುದು. ಪಾಪಾ ತೊಳೆದುಕೊಳ್ಳಲು ಕ್ಷಮೆ ಕೇಳಲು ಮತ್ತು ಸತ್ತ ಮೇಲೆ ಪರಲೋಕದಲ್ಲಿ ಒಳ್ಳೆಯ ಸ್ಥಾನ ನೀಡುವಂತೆ ಪ್ರಾರ್ಥಿಸಲು ಹೋಗುವ ತಾಣವೆಂದು ಹೇಳುತ್ತಾರೆ. ಆದರೆ, ನಮ್ಮ ಹಿಂದೂ ಧರ್ಮದಲ್ಲಿ ದೇವರ ಮೂರ್ತಿ ಪ್ರತಿಷ್ಠಾಪನೆಗೂ ಮುನ್ನವೇ ಕಲ್ಲಿಯ ಆಯ್ಕೆಯಿಂದ ಹಿಡಿದು ಪ್ರಾಣ ಪ್ರತಿಷ್ಠೆಯವರೆಗೆ ವಿವಿಧ ಧಾರ್ಮಿಕ ವಿಧಿವಿಧಾನಗಳಿಂದ ಸಾನಿಧ್ಯವನ್ನು ಉಂಟುಮಾಡಲಾಗುತ್ತದೆ.
ಹಿಂದಿನ ಕಾಲದಲ್ಲಿ ಭಾರತದಲ್ಲಿ ೭ ಲಕ್ಷಕ್ಕೂ ಹೆಚ್ಚು ದೇವಾಲಯದ ಆವರಣದಲ್ಲಿ ಗುರುಕುಲಗಳು ಇದ್ದವು. ಶೈಕ್ಷಣಿಕ ವ್ಯವಸ್ಥೆ ಇತ್ತು. ಪಠ್ಯಕ್ರಮಗಳಷ್ಟೇ ಶಿಕ್ಷಣವಲ್ಲ. ಜೀವನಕ್ಕೆ ಬೇಕಾದ ಎಲ್ಲಾ ಶಿಕ್ಷಣವನ್ನು ಆ ದೇವಾಲಯದ ಆವರಣದಲ್ಲಿ ನೀಡಲಾಗುತ್ತಿತ್ತು. ಪರಕೀಯರ ಆಡಳಿತದಲ್ಲಿ ಅದನ್ನು ನಿರ್ನಾಮ ಮಾಡಲಾಯಿತು. ನಾವು ದೇವಾಲಯಕ್ಕೆ ಧ್ಯಾನ ಮಾಡಲು ಹೋಗುತ್ತೇವೆ. ಕ್ಷಣಕಾಲವಾದರೂ ನಮ್ಮ ಚಿತ್ತ ದೇವರಲ್ಲಿ ಇರಲಿ ಎಂದು ಧ್ಯಾನಕ್ಕೆ ಶರಣಾಗುತ್ತೇವೆ. ನಮ್ಮ ಮನಸ್ಸಿನಲ್ಲಿ ದೇವರ ವಿಗ್ರಹವನ್ನು ಪ್ರತಿಷ್ಠಾಪಿಸಿ ಆರಾಧನೆ ಮಾಡುತ್ತೇವೆ.
ಮಕ್ಕಳಿಗೆ ಬೇಕಾದ ಶಿಕ್ಷಣ ಹಿಂದಿನ ಕಾಲದಲ್ಲಿ ದೇವಾಲಯದ ಆವರಣದಲ್ಲಿ ಸಿಗುತ್ತಿತ್ತು. ವಿದ್ಯೆ ಕೊಡುವ ಜಾಗದಲ್ಲಿ ದೇವರು ಇಡಬಾರದು ಎಂಬ ವಿಕೃತವಾದವನ್ನು ಇತ್ತೀಚಿನ ದಿನಗಳಲ್ಲಿ ಕಾಣುತ್ತೇವೆ. ಸರಸ್ವತಿಯನ್ನು ಕಾಲೇಜಿನ ಆವರಣದಲ್ಲಿ ಪೂಜೆ ಮಾಡಬಾರದು ಎಂಬ ವಾದವು ಇತ್ತೀಚಿಗೆ ಕಂಡಿದ್ದೇವೆ. ಆದರೆ, ದೇವರ ಸಾನಿಧ್ಯ ಶಿಕ್ಷಣವನ್ನು ಹತ್ತಿರಕ್ಕೆ ತರುತ್ತದೆ. ಮಠಮಂದಿರಗಳ ಕರ್ತವ್ಯ ಆಸ್ತಿ ಮಾಡುವುದಲ್ಲ , ಸಮಾಜಕ್ಕೆ ಮಾರ್ಗದರ್ಶನ ನೀಡುವುದು ಎಂದರು.
ಈ ಸಂದರ್ಭದಲ್ಲಿ ಶಾಸಕ ಎಸ್.ಎನ್. ಚೆನ್ನಬಸಪ್ಪ, ಪ್ರಮುಖರಾದ ಕೆ.ಬಿ.ಪ್ರಸನ್ನಕುಮಾರ್, ಜ್ಯೋತಿಪ್ರಕಾಶ್, ಮೋಹನ್ ರೆಡ್ಡಿ, ಸುವರ್ಣ ಶಂಕರ್, ನಾಗರಾಜ್, ಸುರೇಖಾ ಮುರಳಿಧರ್ ಹಾಗೂ ಶ್ರೀರಾಮ ಸೇವಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.