
ಶಿವಮೊಗ್ಗ, ಫೆ 10
ಇಡೀ ಜಗತ್ತಿಗೆ ಕಾಯಕದ ಮಹತ್ವ ಮತ್ತು ಸದ್ವಿಚಾರಗಳನ್ನು ಸಾರಿದ ಶಕ್ತಿಗಳು ನಮ್ಮ ಕಾಯಕ ಶರಣರು ಎಂದು ಶಾಸಕರಾದ ಎಸ್.ಎನ್.ಚನ್ನಬಸಪ್ಪ ನುಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಕಾಯಕ ಶರಣರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮದು ಶ್ರೇಷ್ಟ ಪರಂಪರೆ ಹೊಂದಿರುವ ದೇಶ. ವಿವಿಧತೆಯಲ್ಲಿ ಏಕತೆಯನ್ನು ಸಾರುವ ನಾಡು. ಎಲ್ಲರೂ ನಮ್ಮವರು ಎನ್ನುವ ದೇಶವಿದ್ದರೆ ಅದು ನಮ್ಮ ಭಾರತ ದೇಶ. ವಸುದೈವ ಕುಟುಂಬಕಂ ಪರಿಕಲ್ಪನೆಯಡಿ ಸಮಾಜವನ್ನು ಕಟ್ಟಿ ಬದುಕುತ್ತಿದ್ದೇವೆ.

ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಮಾದಾರ ದೂಳಯ್ಯ, ಸಮಗಾರ ಹರಳಯ್ಯ ಮತ್ತು ಉರಿಲಿಂಗ ಪೆದ್ದಿ ಇವರೆಲ್ಲ ವೈಚಾರಿಕ ನೆಲಗಟ್ಟಿಗೆ ಸಂಬಂಧಿಸಿದ ಕಾಯಕ ಶರಣರು. ಇವರು ತಮ್ಮ ಕಾಯಕನಿಷ್ಟೆಯಿಂದ ಸಮಾಜಕ್ಕೆ ಶಕ್ತಿ ತುಂಬಿದ್ದಾರೆ. ಸಮಾನತೆಯನ್ನು ಸಾರಿದ್ದಾರೆ. ಈ ಐದು ಜನರ ಒಂದೇ ಸಮಷ್ಟಿಯ ನಡವಳಿಕೆಯ ಪರಿಣಾಮ ಒಂದೇ ದಿನ ಜಯಂತಿಯನ್ನು ಆಚರಿಸಲಾಗುತ್ತಿದೆ. ಐದು ಜನರದ್ದು ಒಂದೇ ದಿನ ಜಯಂತಿ ಆಚರಣೆಯಾಗುತ್ತಿರುವುದು ಅತ್ಯಂತ ವಿಶೇಷ ಮತ್ತು ನಮ್ಮಲ್ಲಿ ಮಾತ್ರ ಸಾಧ್ಯವಿರಬಹುದು. ಇವರೆಲ್ಲ ಕಾಯಕದ ಮಹತ್ವ ಮತ್ತು ಒಳ್ಳೆಯ ವಿಚಾರಗಳನ್ನು ಜಗತ್ತಿಗೆ ಸಾರಲು ಪ್ರೇರಕ ಶಕ್ತಿಗಳು. ಪ್ರಸ್ತುತ ಹೊರದೇಶದವರು ನಮ್ಮನ್ನು ಅಧ್ಯಯನ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಇಂತಹ ಶ್ರೇಷ್ಟ ವಿಚಾರವಂತರು ಎಂದು ಅಭಿಪ್ರಾಯಪಟ್ಟರು.

ಸಹ್ಯಾದ್ರಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ.ಕೆ.ಎನ್. ಮಹಾದೇವಸ್ವಾಮಿ ಮಾತನಾಡಿ, ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಮಾದಾರ ದೂಳಯ್ಯ, ಸಮಗಾರ ಹರಳಯ್ಯ ಮತ್ತು ಉರಿಲಿಂಗ ಪೆದ್ದಿಯವರು ತಮ್ಮ ಕಾಯಕದ ಮೂಲಕ ಜಗದ್ವಿಖ್ಯಾತರಾದವರು. ಶಿಸ್ತು, ಬದ್ದತೆಯಿಂದ ತಮ್ಮ ಕಾಯಕ ನಡೆಸಿಕೊಂಡು ಇತರರಿಗೆ ಮಾದರಿಯಾದವರು.
ಕ್ರಿ.ಪೂ. 6ನೇ ಶತಮಾನದಿಂದ ಭಾರತದಲ್ಲಿ ಬೌದ್ದ, ಜೈನ ಧರ್ಮಗಳ ಆರಂಭವಾಯಿತು. ಆನಂತರದ ರಾಜಕೀಯ, ಸಾಮಾಜಿಕ, ಸಾಂಸ್ಕøತಿಕ ಪಲ್ಲಟಗಳ ನಡುವೆ ಎಲ್ಲರನ್ನೂ ಒಗ್ಗೂಡಿಸುವ ಕಾರ್ಯದಲ್ಲಿ, ಸಮ ಸಮಾಜವನ್ನು ಕಟ್ಟುವಲ್ಲಿ ಬಸವಣ್ಣ ಮತ್ತು ಕಾಯಕ ಶರಣರು ನಿರತರಾಗಿ, ಸಮಾಜಕ್ಕೆ ಅನನ್ಯ ಕೊಡುಗೆಗಳನ್ನು, ವಚನ ಸಾಹಿತ್ಯವನ್ನು ನೀಡಿದರು.
ಬಹು ವಿಸ್ತøತ ಭಾರತ ದೇಶದ ಹಿನ್ನೆಲೆಯಲ್ಲಿ ಕಾಯಕ ಶರಣರು ತಮ್ಮದೇ ಆದ ವೃತ್ತಿ, ವಚನ ಸಾಹಿತ್ಯದ ಮೂಲಕ ಸಮ ಸಮಾಜವನ್ನು ಕಟ್ಟಲು ಮುಂದಾದರು. ಡೋಹರ ಕಕ್ಕಯ್ಯನವರು ಚರ್ಮ ಹದ ಮಾಡಿ ಹೊಳಪು ನೀಡುವ ಕಾರ್ಯದಲ್ಲಿ ತೊಡಗಿದ್ದು ನಾವೆಲ್ಲ ಒಂದೇ ಎಂಬ ಭಾವನೆಗಳನ್ನು ಒಡಮೂಡಿಸುವಲ್ಲಿ ಶ್ರಮಿಸಿದರು.

ಚರ್ಮ ಹದಗಾರಿಕೆ ಜಗತ್ತಿನ ಆರಂಭದ, ಪ್ರಾಚೀನವಾದ ಒಂದು ವೃತ್ತಿ. ಆದರೆ ನಮ್ಮ ದೇಶದಲ್ಲಿ ಅದು ಕೆಳಜಾತಿಯವರ ಕೆಲಸವೆಂದು, ಚಿನ್ನ ಬೆಳ್ಳಿ ಕೆಲಸ ಮಾಡುವವರು ವಿಶ್ವಕರ್ಮರೆಂದು ವರ್ಗೀಕರಣವಾಗಿದ್ದು ನೋವಿನ ಸಂಗತಿ. ಆದರೆ ಅಖಂಡ ಭಾರತದ ಪ್ರಪ್ರಥಮ ವೃತ್ತಿ ಆರಂಭಿಸಿದವರು ನಾವು ಎಂಬ ಹೆಮ್ಮೆ ನಮಗೆ ಇರಬೇಕು.
ಮಾದಾರ ಚೆನ್ನಯ್ಯನವರು ಕೂಡ ಚರ್ಮ ಹದ ಮಾಡುವ ಕಾಯಕದಲ್ಲಿ ತೊಡಗಿದ್ದು ನಡೆ ನುಡಿ ಸಮನಾಗಿರಬೇಕೆಂದು ಪ್ರತಿಪಾದಿಸಿದರು. ಮಾದಾರ ಧೂಳಯ್ಯನವರು ಸಂಸ್ಕøತಿ ಪಂಡಿತರಾಗಿ ಹೊರಹೊಮ್ಮಿದ್ದರು. ಉರಿಲಿಂಗ ಪೆದ್ದಿಯವರು ಉರಿಲಿಂಗ ದೇವರ ಧೀಕ್ಷೆ ಪಡೆಯಲು ಗುರುವನ್ನು ಒಲಿಸಿಕೊಳ್ಳುತ್ತಾರೆ. ಸಮಗಾರ ಹರಳಯ್ಯನವರು ತಾವು ಮತ್ತು ತಮ್ಮ ಪತ್ನಿ ತೊಡೆಯ ಚರ್ಮದಿಂದ ಪಾದರಕ್ಷೆಗಳನ್ನು ಮಾಡಿ ಬಸವಣ್ಣವರಿಗೆ ಅರ್ಪಿಸಿ ಶರಣರಾಗುತ್ತಾರೆ.
ಈ ಎಲ್ಲ ಕಾಯಕ ಶರಣರ ತತ್ವ ಸಿದ್ದಾಂತಗಳು ಸಮಾನತೆ, ಸೌಹಾರ್ಧತೆ. ನಮ್ಮ ಸಂವಿಧಾನದ ಪೀಠಿಕೆ ಓದಿದರೆ ಇವರೆಲ್ಲರ ಸಾರ ತಿಳಿಯುತ್ತದೆ. ಇವರನ್ನೆಲ್ಲ ಅರ್ಥ ಮಾಡಿಕೊಂಡು, ಆ ನಿಟ್ಟಿನಲ್ಲಿ ನಡೆದರೆ ಅಸಮಾನತೆಯನ್ನು ಹೋಗಲಾಡಿಸಲು ಸಾಧ್ಯವಾಗುತ್ತದೆ ಎಂದರು.
ಶಿವಮೊಗ್ಗ ಉಪವಿಭಾಗಾಧಿಕಾರಿ ಸತ್ಯನಾರಾಯಣ ಮಾತನಾಡಿ, ನಮ್ಮ ನೆಲದ ಮಹಾನ್ ವ್ಯಕ್ತಿಗಳ ತತ್ವ ಸಿದ್ದಾಂತಗಳನ್ನು ನಾವು ತಿಳಿದು, ಅದನ್ನು ಅಳವಡಿಸಿಕೊಂಡು ನಾಡಿನ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಬೇಕೆಂಬ ಕಳಕಳಿಯಿಂದ ಸರ್ಕಾರ ಜಯಂತಿಗಳನ್ನು ಆಚರಿಸುತ್ತಿದ್ದು, ನಾವು ಅವರ ತತ್ವಗಳನ್ನು ಅಳವಡಿಸಿಕೊಂಡು ಸಮಾಜದ ಏಳಿಗೆಗೆ ಶ್ರಮಿಸೋಣ ಎಂದು ಕರೆ ನೀಡಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್ ಸ್ವಾಗತಿಸಿದರು. ಜಿಲ್ಲಾ ಸಮಗಾರ ಹರಳಯ್ಯ ಸಮಾಜದ ಅಧ್ಯಕ್ಷ ಚಂದ್ರಶೇಖರ್ ಖಾನ್ಪೇಟ್, ಕಾರ್ಯದರ್ಶಿಗಳಾದ ಪರುಶುರಾಮ ಸಾಬೋಜಿ, ನಾಗರಾಜ ಗಾಮನಗಟ್ಟಿ, ಮಂಜುನಾಥ ಮಾನೆ, ಖಜಾಂಚಿ ಶಂಕರ್, ಡಿಡಿಎಸ್(ಅಂಬೇಡ್ಕರ್ವಾದ) ಜಿಲ್ಲಾಧ್ಯಕ್ಷ ಹಾಲೇಶಪ್ಪ, ಹರೀಶ್ ನಾನಕೆ, ರಾಮಚಂದ್ರ ಕೊಪ್ಪಳ್, ಗಂಗಾಧರ್, ವಿಜಿ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.