ಶಿವಮೊಗ್ಗ: ಪಿಎಫ್ಐ ಸಂಘಟನೆ ನಿಷೇಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ 40 ಕ್ಕೂ ಹೆಚ್ಚು ಕಡೆ ಪೊಲೀಸರ ದಾಳಿ ನಡೆಸಲಾಗಿದೆ. ಅನೇಕ ಪಿಎಫ್ಐ ಕಾರ್ಯಕರ್ತರು, ಮುಖಂಡರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪಿಎಫ್ಐ ವಿರುದ್ಧ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿದೆ. ಪಿಎಫ್ಐ ವಿರುದ್ಧ ಸಮಗ್ರ ತನಿಖೆ ಮಾಡಿದ ನಂತರ ಅವರ ದೇಶದ್ರೋಹಿ ಮತ್ತು ಕೇಂದ್ರ ಸರ್ಕಾರ ಉರುಳಿಸಲು ಮಾಡಿರುವ ಷಡ್ಯಂತ್ರ ಬಯಲಾಗಲಿದೆ ಎಂದರು.

ಕಾಂಗ್ರೆಸ್ ಹಗಲು ದರೋಡೆ ಮಾಡಿದೆ
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆಯನ್ನು ಸೋನಿಯಾಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಅಲ್ಲಗಳೆದಿಲ್ಲ. ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಹಗಲು ದರೋಡೆ ಮಾಡಿದ್ದಾರೆ. ದೇಶದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಶಿಕ್ಷಕರ ಅಕ್ರಮದ ಬಗ್ಗೆ ಕಾಂಗ್ರೆಸ್ ನಾಯಕರು ನಾಡಿನ ಜನತೆಗೆ ಉತ್ತರ ಕೊಡಬೇಕು. ತನಿಖೆ ನಡೆದರೆ ಎಲ್ಲಾ ಹೊರಗೆ ಬರುತ್ತದೆ. ಸಿದ್ದರಾಮಯ್ಯ ಅವಧಿಯಲ್ಲಿ ಸಾಕಷ್ಟು ಹಗರಣ ನಡೆದಿದೆ. ಹೀಗಾಗಿಯೇ ರಾಜ್ಯದ ಜನ ಅವರನ್ನು ಅಧಿಕಾರದಿಂದ ದೂರ ಇಟ್ಟರು ಎಂದರು.