ಶಿವಮೊಗ್ಗ,ಸೆ.17:
ಕ್ರೀಡೆ ಸತ್ಯ ಹಾಗೂ ನಿಷ್ಟೆಗೆ ಹೆಸರು ತರುವಂತಹುದು. ಇಂತಹ ಕ್ರೀಡೆಗಳ ನಿಯಮ ಪಾಲನೆಯಲ್ಲಿ ಯಾವುದೇ ಬಗೆಯ ಮೋಸ ನಡೆಯಬಾರದು. ಅದಕ್ಕೆ ಕ್ರೀಡೆ ಕಲಿಸುವವರೇ ಪ್ರೋತ್ಸಾಹಿಸಬಾರದು ಹಾಗೂ ಅವಕಾಶ ನೀಡಬಾರದೆಂದು ತುಂಗಾತರಂಗ ಪತ್ರಿಕೆ ಸಂಪಾದಕ ಎಸ್.ಕೆ. ಗಜೇಂದ್ರಸ್ವಾಮಿ ತಿಳಿಸಿದರು.

ಅವರಿಂದು ಬೆಳಿಗ್ಗೆ ಶಿವಮೊಗ್ಗ ಗುರುಪುರದ ಬಿಜಿಎಸ್ ಕ್ರೀಡಾಂಗಣದಲ್ಲಿ ಆರಂಭಗೊಂಡ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಸಮನ್ವಯ ಅಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಮತ್ತು ಅನುದಾನ ರಹಿತ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಆಶ್ರಯದಲ್ಲಿ ಆರಂಭಗೊಂಡ ಅನುದಾನ ರಹಿತ ಪ್ರೌಢಶಾಲೆಗಳ ಎ ಮತ್ತು ಬಿ ವಲಯ ಮಟ್ಟದ ಕ್ರೀಡಾಕೂಟ 2026-27ರ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.
ಕ್ರೀಡೆಗೆ ತನ್ನದೇ ಆದ ಶಕ್ತಿ ಇದೆ. ಕ್ರೀಡೆಯಿಂದ ಕೇವಲ ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ ಎಂಬುದು ತಪ್ಪು. ನಮ್ಮ ಬೌದ್ಧಿಕ ಹಾಗೂ ಮಾನಸಿಕ ಸ್ಥಿರತೆ ಹಾಗೂ ಭೌದ್ಧಿಕಾ ವೃದ್ಧಿಗೆ ಕ್ರೀಡೆ ಅತ್ಯಂತ ಅವಶ್ಯಕ ಎಂದರು.

ಎಲ್ಲಾ ಮಕ್ಕಳು ಗೆಲ್ಲಬೇಕು ಎಂಬ ಆಸೆಯಿಂದ ಆಡುತ್ತಾರೆ. ಗೆಲ್ಲಲೇಬೇಕು ಒಂದು ದಿನ ಅಂದಾಕ್ಷಣ ಸೋತಾಗ ಎದೆಗುಂದದಿರಿ. ಸೋಲು ಮುಂದಿನ ಗೆಲುವಿಗೆ ಮುನ್ನುಡಿಯಾಗುತ್ತದೆ. ಪರಸ್ಪರ ಸ್ನೇಹ, ಸಹಬಾಳ್ವೆ, ಪರಸ್ಪರ ಹೊಂದಾಣಿಕೆಯ ಜೊತೆ ಕ್ರೀಡೆಯನ್ನು ಸ್ಪರ್ಧಾತ್ಮಕವಾಗಿ ಪರಿಗಣಿಸಿ ಆಟವಾಡಿ ಎಂದು ಕ್ರೀಡಾಪಟುಗಳಿಗೆ ಕಿವಿ ಮಾತು ಹೇಳಿದರು. ಇಲ್ಲಿ ದೈಹಿಕ ಶಿಕ್ಷಕರೂ ಸಹ ಎಲ್ಲಾ ಮಕ್ಕಳನ್ನು ಅವರವರ ಪ್ರತಿಭೆಯಂತೆ ಬೆಳೆಯಲು ಗುರುತಿಸಿಕೊಳ್ಳಲು ಅನುಕೂಲ ಮಾಡಿಕೊಡಬೇಕು. ತಮ್ಮ ಮಕ್ಕಳನ್ನು ಆ ಮಟ್ಟದಲ್ಲಿ ಬೆಳೆಸುವ ಚಿಂತನೆ ಮಾಡಬೇಕು. ಒಟ್ಟಾರೆ ಈ ಕ್ರೀಡಾಕೂಟ ಅತ್ಯಂತ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹರಸಿದರು. ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ತಾಲೂಕು ದೈಹಿಕ ಶಿಕ್ಷಣ ಅಧಿಕಾರಿ ಕೆ. ವಿ. ಸವಿತಾ ಅವರು ಮಾತನಾಡುತ್ತಾ ಕ್ರೀಡೆಯನ್ನು ಎಲ್ಲರೂ ಸ್ಪರ್ಧಾತ್ಮಕವಾಗಿ ಪರಿಗಣಿಸಬೇಕು. ಈ ಆಟಗಳಲ್ಲಿ ಅನ್ಯ ಮಕ್ಕಳನ್ನು ಅಂದರೆ ಬೇರೆ ಶಾಲೆಯ ಮಕ್ಕಳನ್ನು ಬಳಸಿಕೊಂಡರೆ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುತ್ತದೆ. ಅದಕ್ಕೆ ಅವಕಾಶ ನೀಡಿದಿರಿ ಎಂದು ಸೂಚಿಸಿದರು.

ಕ್ರೀಡೆ ಎಲ್ಲರಲ್ಲೂ ಪರಸ್ಪರ ಪ್ರೀತಿ ವಿಶ್ವಾಸವನ್ನು ರೂಪಿಸುತ್ತದೆ. ದೈಹಿಕ ಸಾಮರ್ಥ್ಯದ ಕ್ರೀಡೆ ಗೆಲುವಿನ ಅಸ್ತ್ರ ಮಾತ್ರವಾಗುವುದಿಲ್ಲ. ಅದು ಬದುಕಿನ ದಾರಿದೀಪವೂ ಆಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಆದಿಚುಂಚನಗಿರಿ ವಿದ್ಯಾ ಸಂಸ್ಥೆಯ ಹಿರಿಯ ಕ್ರೀಡಾಪಟುಗಳು ನೀಡಿದ ಕ್ರೀಡಾ ಜ್ಯೋತಿಗೆ ವೇದಿಕೆಯಲ್ಲಿದ್ದ ಗಣ್ಯರು ನಮಿಸಿ ಗೌರವಿಸಿದರು.
17 ವರ್ಷಗಳ ಕಾಲ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ಈಗ ಸ್ವಾ ಗ್ರಾಮದಲ್ಲಿ ವಾಸವಿರುವ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕ ಜಗದೀಶ್ ಅವರು ಆತ್ಮೀಯ ಸನ್ಮಾನ ಸ್ವೀಕರಿಸಿ ನಮ್ಮ ಬಗ್ಗೆ ಮಗ ಸದಾ ಪ್ರೀತಿ ತೋರಿರುವ ಸಂಘಕ್ಕೆ ನಾವು ಅಭಾರಿಯಾಗಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಬಿಜಿಎಸ್ ಗುರುಕುಲ ಶಾಲಾ-ಕಾಲೇಜು ಪ್ರಾಂಶುಪಾಲ ಎಸ್. ಹೆಚ್. ಸುರೇಶ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಮಕ್ಕಳು ಕ್ರೀಡೆಯಲ್ಲಿ ಇಲ್ಲಿ ಗೆದ್ದು ನಂತರ ತಾಲೂಕು ಹಾಗೂ ಜಿಲ್ಲಾ ಮಟ್ಟ ಹಾಗೂ ವಿಭಾಗ ಮಟ್ಟವನ್ನು ಮುಟ್ಟಿ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲಿ ಎಂದು ಶುಭ ಹಾರೈಸಿದರು.

ನಿವೃತ್ತ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಬಿ.ಹೆಚ್. ನಿರಂಜನ ಮೂರ್ತಿ, ಸಂಘದ ಅಧ್ಯಕ್ಷ ರಾ.ಹ. ತಿಮ್ಮೇನಹಳ್ಳಿ, ಪ್ರಧಾನ ಕಾರ್ಯದರ್ಶಿ ಮಠಪತಿ, ಹಾಗೂ ಪದಾಧಿಕಾರಿಗಳು, ದೈಹಿಕ ಶಿಕ್ಷಣ ಶಿಕ್ಷಕರಾದ ಮಾಧವ ಮಿಶ್ರಾಂ ಸೇರಿದಂತೆ ಹಲವು ಶಿಕ್ಷಕರು ಉಪಸ್ಥಿತರಿದ್ದರು.
ಇಲ್ಲಿ ಮೂವತ್ತಕ್ಕೂ ಹೆಚ್ಚು ಶಾಲೆಗಳ ಗುಂಪು ಕ್ರೀಡಾಕೂಟಗಳು ಇಂದಿನಿಂದ ಎರಡು ದಿನಗಳ ಕಾಲ ಬಿಜಿ ಬಿಜಿಎಸ್ ಕ್ರೀಡಾಂಗಣದಲ್ಲಿ ನಡೆಯಲಿವೆ.