ಸಾಗರ : ತಾಲ್ಲೂಕು ಆಡಳಿತ ಚುರುಕಾಗಲು ೧೫ ದಿನ ಸಮಯ ಕೊಡುತ್ತೇನೆ. ಜನರಿಗೆ ಸರಿಯಾಗಿ ಕೆಲಸ ಮಾಡಿ ಕೊಡದೆ ಹೋದರೆ ನಿಮ್ಮನ್ನು ವರ್ಗಾವಣೆ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಲ್ಲಿನ ಉಪವಿಭಾಗೀಯ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕರೆಯಲಾಗಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನೀವು ಉತ್ತಮ ಕೆಲಸ ಮಾಡುತ್ತೀನಿ ಎಂದು ನೀಡಿದ ಭರವಸೆ ಹಿನ್ನೆಲೆಯಲ್ಲಿ ಸಾಗರಕ್ಕೆ ನೇಮಕ ಮಾಡಲಾಗಿತ್ತು ಎಂದು ತಹಶೀಲ್ದಾರ್ ಅವರನ್ನು ತರಾಟೆಗೆ ತೆಗೆದುಕೊಂಡರು.

ನೀವು ಕಲ್ಲುಕ್ವಾರೆ ಇನ್ನಿತರೆಗೆ ನೀಡಿದಷ್ಟು ಆಸಕ್ತಿ, ಅದರಿಂದ ಪ್ರಚಾರ ಪಡೆಯಲು ತೋರಿಸಿದಷ್ಟು ಉತ್ಸಾಹ ಕೆಲಸದಲ್ಲಿ ತೋರಿಸುತ್ತಿಲ್ಲ. ಪ್ರಚಾರ ಬಿಟ್ಟು ಉತ್ತಮ ಕೆಲಸ ಮಾಡಿ. ಎಲ್ಲಿಯೇ ದಾಳಿ ಮಾಡಿದರೂ ಪತ್ರಿಕೆಗೆ ಕೊಡುವ ಬದಲು ಇಲಾಖಾ ಹಂತದಲ್ಲಿ ಚರ್ಚೆ ನಡೆಸಿ ಎಂದು ತಹಶೀಲ್ದಾರ್ಗೆ ತಾಕೀತು ಮಾಡಿದ ಶಾಸಕರು, ತಹಶೀಲ್ದಾರ್ ಕಚೇರಿಯ ಟಪಾಲ್ ವಿಭಾಗ, ಆನಂದಪುರಂ ನಾಡಕಚೇರಿಯ ಮಂಜುನಾಥ ಎಂಬಾತ ಸರಿಯಾಗಿ ಕೆಲಸ ಮಾಡುತ್ತಿಲ್ಲ. ತಕ್ಷಣ ಅವರನ್ನು ವರ್ಗಾವಣೆ ಮಾಡಿ. ವರದಹಳ್ಳಿ ದೇವಸ್ಥಾನಕ್ಕೆ ನಾನೇ ಸಮಿತಿ ರಚನೆ ಮಾಡಿದ್ದೇನೆ. ಅಲ್ಲಿಗೆ ಒಬ್ಬ ಗ್ರಾಮ ಲೆಕ್ಕಿಗ ಹೋಗಿ ಅವರನ್ನು ಹೆದರಿಸಿ ಬಂದಿದ್ದಾನೆ. ಕಚೇರಿಯಲ್ಲಿ ನಿಮ್ಮ ಮಾತು ಯಾರೂ ಕೇಳುತ್ತಿಲ್ಲ. ನೀವು ಬಲಿಷ್ಟವೋ, ಕಚೇರಿಯ ಸಿಬ್ಬಂದಿಗಳು ಬಲಿಷ್ಟವೋ ಗೊತ್ತಾಗುತ್ತಿಲ್ಲ. ಒಟ್ಟಾರೆ ಜನರ ಕೆಲಸ ಆಗುತ್ತಿಲ್ಲ. ಇನ್ನು ಹದಿನೈದು ದಿನಗಳಲ್ಲಿ ಎಲ್ಲವೂ ಸರಿಯಾಗಬೇಕು. ಇಲ್ಲವಾದರೆ ನಿಮ್ಮ ಮೇಲೆ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಉಪವಿಭಾಗೀಯ ಆಸ್ಪತ್ರೆಯಲ್ಲಿ ಜನರೇಟರ್ ರಿಪೇರಿಯಾಗುತ್ತಿದೆ. ಕರೆಂಟ್ ಹೋದಾಗ ಸಣ್ಣಪುಟ್ಟ ಸಮಸ್ಯೆ ಆಗಿರಬಹುದು. ಮೂರು ಅಂಬ್ಯುಲೆನ್ಸ್ ಇದ್ದು, ಇನ್ನೊಂದು ಅಂಬ್ಯುಲೆನ್ಸ್ ಅಪಘಾತವಾಗಿದ್ದು ರಿಪೇರಿ ಮಾಡಲು ತಿಳಿಸಿದೆ. ರಾತ್ರಿ ವೇಳೆ ನುರಿತ ವೈದ್ಯರು ಕರ್ತವ್ಯ ನಿರ್ವಹಿಸುವಂತೆ ನೋಡಿಕೊಳ್ಳಲಾಗುತ್ತದೆ. ಮಳೆಮಾಪನಾ ಯಂತ್ರ ರಿಪೇರಿಯಾಗುತ್ತಿದ್ದು, ವಿಮೆ ಹಣ ಪಾವತಿ ಕುರಿತು ಸಭೆ ನಡೆಸಲಾಗುತ್ತದೆ. ಗಣಪತಿ ಹಬ್ಬದ ಸಂದರ್ಭದಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಸ್ವಚ್ಚತೆ, ವಿದ್ಯುದ್ದೀಪ ಅಳವಡಿಕೆ ಬಗ್ಗೆ ನಗರಸಭೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ನಗರಸಭೆಗೆ ವಿಶೇಷ ಅನುದಾನವಾಗಿ ೫೦ ಕೋಟಿ ಬಿಡುಗಡೆಯಾಗಿದ್ದು, ಇನ್ನೂ ೫೦ ಕೋಟಿ ಬಿಡುಗಡೆಯಾಗುತ್ತದೆ. ಇದರ ಜೊತೆಗೆ ಕಾರ್ಗಲ್, ಹೊಸನಗರ ಪಟ್ಟಣ ಪಂಚಾಯ್ತಿಗೆ ತಲಾ ೩೦ ಕೋಟಿ ರೂ. ವಿಶೇಷ ಅನುದಾನ ಮಂಜೂರಾಗುತ್ತಿದೆ. ಇದರಿಂದ ಹೆಚ್ಚಿನ ಅಭಿವೃದ್ದಿ ಕೆಲಸಗಳ ಕ್ರಿಯಾಯೋಜನೆ ರೂಪಿಸಲು ತಿಳಿಸಿದೆ ಎಂದರು.

ಕೆಡಿಪಿ ಸದಸ್ಯ ಜಿ.ಟಿ.ಸತ್ಯನಾರಾಯಣ ತುಮರಿ ಯುವತಿ, ಮಾಸೂರಿ ಬಾಲಕಿ ಆತ್ಮಹತ್ಯೆ ಹಾಗೂ ಮಡಸೂರಿನಲ್ಲಿ ವ್ಯಕ್ತಿಯೊಬ್ಬ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಕ್ಷಣ ಆರೋಪಿಗಳನ್ನು ಬಂಧಿಸಬೇಕು ಎಂದು ಮನವಿ ಮಾಡಿ, ಮಾಸೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಂಜಾ ಸೇವನೆ ದೂರುಗಳಿದ್ದು ಪರಿಶೀಲಿಸಬೇಕು ಎಂದು ಮನವಿ ಮಾಡಿದಾಗ ಶಾಸಕ ಬೇಳೂರು ಈಗಾಗಲೆ ಮಾಸೂರು ಬಾಲಕಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಯುವಕನನ್ನು ಬಂಧಿಸಲಾಗಿದೆ. ಬೆಂಗಳೂರಿನಲ್ಲಿ ತುಮರಿ ಯುವತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಲು ಅಲ್ಲಿನ ಅಧಿಕಾರಿಗಳಿಗೆ ಸೂಚಿಸಿದ್ದು ಮಾಸೂರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ ಎಂದರು. ಪೊಲೀಸ್ ಉಪಾಧೀಕ್ಷಕ ಡಾ. ಬೆನಕ ಪ್ರಸಾದ್ ಯಾರಾದರೂ ಹೆಣ್ಣುಮಕ್ಕಳಿಗೆ ಮೊಬೈಲ್ ಇನ್ನಿತರೆ ಚಿತ್ರಗಳಿದೆ ಎಂದು ಬ್ಲಾಕ್ಮೇಲ್ ಮಾಡುತ್ತಿದ್ದರೆ ನಮ್ಮ ಗಮನಕ್ಕೆ ತನ್ನಿ. ನಿಮ್ಮ ಹೆಸರು ಗುಪ್ತವಾಗಿ ಇರಿಸಲಾಗುತ್ತದೆ ಎಂದು ಹೇಳಿದರು.

ಪೌರಾಯುಕ್ತ ನಾಗಪ್ಪ ಗಣಪತಿ ಹಬ್ಬದ ಮಾರನೇ ದಿನ ೫ ಕೋಟಿ ರೂ. ವೆಚ್ಚದ ಟ್ಯಾಗೂರ್ ಕಲ್ಚರಲ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ. ಜೊತೆಗೆ ಗಣಪತಿ ಕೆರೆ ಪಕ್ಕದ ಪಾರ್ಕ್ ನಿರ್ಮಾಣಕ್ಕೂ ಟೆಂಡರ್ ಕರೆಯಲಾಗುತ್ತದೆ ಎಂದರು. ಶಾಸಕ ಬೇಳೂರು ಟ್ಯಾಗೂರ್ ಕಲ್ಚರಲ್ ಕಾಂಪ್ಲೆಕ್ಸ್, ಉದ್ಯಾನವನ ಹಾಗೂ ಸೊರಬ ರಸ್ತೆ ಅಗಲೀಕರಣಕ್ಕೆ ಸಂಬಂಧಿಸದಂತೆ ಗಮನ ಹರಿಸಲಾಗಿದೆ. ತ್ಯಾಗರ್ತಿ ವಿದ್ಯುತ್ ಗ್ರಿಡ್ ಕಾಮಗಾರಿ ಮುಗಿಸಲು ಮೆಸ್ಕಾಂಗೆ ಸೂಚಿಸಲಾಗಿದೆ. ತಾಲ್ಲೂಕಿನಲ್ಲಿ ರಾಜ್ಯ ಸರ್ಕಾರದ ಹೊಸ ಸೂಚನೆಯಂತೆ ಸುಮಾರು ೧೦ಸಾವಿರ ಆಶ್ರಯ ನಿವೇಶನ ನೀಡಲು ಚಿಂತನೆ ನಡೆಸಿದೆ ಎಂದರು.
ಉಪವಿಭಾಗಾಧಿಕಾರಿ ವೀರೇಶಕುಮಾರ್, ತಹಶೀಲ್ದಾರ್ ಡಾ. ಪ್ರತಿಭಾ, ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಸುಜಾತ, ಪೊಲೀಸ್ ಉಪಾಧೀಕ್ಷ ಡಾ. ಬೆನಕಪ್ರಸಾದ್ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು