ಜು, 14: ಗ್ರಾಹಕರೊಬ್ಬರು ಆರ್ಡರ್ ಮಾಡಿದ ಸಸ್ಯಹಾರಿ ಬರ್ಗರ್ ಬದಲಿಗೆ ಮಾಂಸಹಾರಿ ಬರ್ಗರ್ ನೀಡಿ ಸೇವಾನ್ಯೂನತೆ ಎಸಗಿದ ಆನ್ಲೈನ್ ಆಹಾರ ವಿತರಣಾ ಸಂಸ್ಥೆ ‘ಜೊಮೊಟೊ’ ಹಾಗೂ ಸಂಬಂಧಪಟ್ಟ ಹೋಟೆಲ್ ಮಾಲೀಕರಿಗೆ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ವಿಧಿಸಿ ಆದೇಶ ಹೊರಡಿಸಿದೆ.
ಶಿವಮೊಗ್ಗದ ಜೆ.ಪಿ.ಎನ್ ರಸ್ತೆಯ ನಿವಾಸಿ ನಂದೀಶ್ ಎಂಬುವವರು 2025 ರ

ಆಗಸ್ಟ್27 ರಂದು ಗಣೇಶ ಚತುರ್ಥಿ ಹಬ್ಬದ ದಿನದಂದು ಜೊಮೊಟೊ ಆ್ಯಪ್ ಮೂಲಕ ಸಸ್ಯಹಾರಿ ಬರ್ಗರ್ ಆರ್ಡರ್ ಮಾಡಿದ್ದರು. ಇದಕ್ಕಾಗಿ ಅವರು ರೂ. 313.15 ಪಾವತಿಸಿದ್ದರು. ಆದರೆ ಹಬ್ಬದ ದಿನದಂದೇ ಅವರಿಗೆ ಸಸ್ಯಹಾರದ ಬದಲಾಗಿ ಮಾಂಸಹಾರಿ ಬರ್ಗರ್ ಅನ್ನು ವಿತರಿಸಲಾಗಿತ್ತು. ಈ ಬಗ್ಗೆ ಅವರು ಸಂಸ್ಥೆಗೆ ದೂರು ನೀಡಿದಾಗ, ಸಂಸ್ಥೆಯು ಬರ್ಗರ್ನ ಹಣವನ್ನು ದೂರುದಾರರ ಖಾತೆಗೆ ಮರುಪಾವತಿಸಿತ್ತು.
ಆದರೆ, ಗಣೇಶ ಹಬ್ಬ ಆಚರಿಸುತ್ತಿದ್ದ ಸಂದರ್ಭದಲ್ಲಿ ಮನೆಯೊಳಗೆ ಮಾಂಸಹಾರಿ ಬರ್ಗರ್ ತಂದು ತಲುಪಿಸುವ ಮೂಲಕ ತಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ ಎಂದು ನಂದೀಶ್ ಅವರು ವಕೀಲರ ಮೂಲಕ ಜೊಮೊಟೊ ಇಂಡಿಯಾ ಸಂಸ್ಥೆಯ ಸಿ.ಇ.ಒ, ಗುರಂಗಾವ್, ಹರಿಯಾಣ, ಜೋನಲ್ ಹೆಡ್, ಬೆಂಗಳೂರು ಹಾಗೂ ಶಿವಮೊಗ್ಗದ ಫೈವ್ ಸ್ಟಾರ್ ದರ್ಶನ್ ಕಾಂಪ್ಲೆಕ್ಸ್ನ ಹೋಟೆಲ್ ಮಾಲೀಕರ ವಿರುದ್ಧ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ದೂರನ್ನು ದಾಖಲಿಸಿಕೊಂಡ ಆಯೋಗವು ಎದುರುದಾರರಿಗೆ ನೋಟಿಸ್ ಜಾರಿ ಮಾಡಿತ್ತು. ವಿಚಾರಣೆ ವೇಳೆ ಜೊಮೊಟೊ ಸಂಸ್ಥೆಯು, “ತಮ್ಮದು ಕೇವಲ ಆರ್ಡರ್ ತೆಗೆದುಕೊಳ್ಳುವ ವೇದಿಕೆಯಾಗಿದ್ದು (ಪ್ಲಾಟ್ಫಾರ್ಮ್), ಗ್ರಾಹಕರು ನೇರವಾಗಿ ಹೋಟೆಲ್ಗೆ ಆರ್ಡರ್ ಮಾಡಿರುತ್ತಾರೆ. ಇದರಲ್ಲಿ ನಮ್ಮ ಯಾವುದೇ ಲೋಪ ಅಥವಾ ಸೇವಾನ್ಯೂನತೆ ಇರುವುದಿಲ್ಲ” ಎಂದು ವಾದಿಸಿತ್ತು.

ಆದರೆ ಉಭಯ ಪಕ್ಷಗಳ ವಾದ-ವಿವಾದಗಳು ಮತ್ತು ದೂರುದಾರರು ಸಲ್ಲಿಸಿದ ಪ್ರಮಾಣಪತ್ರ ಹಾಗೂ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಜಿಲ್ಲಾ ಗ್ರಾಹಕ ಆಯೋಗವು, ಎದುರುದಾರರು ಸೇವಾನ್ಯೂನತೆ ಎಸಗಿರುವುದು ಸಾಬೀತಾಗಿದೆ ಎಂದು ತೀರ್ಮಾನಿಸಿತು.
1 ರಿಂದ 3ನೇ ಎದುರುದಾರರಾದ ಜೊಮೊಟೊ ಸಿ.ಇ.ಒ, ಜೋನಲ್ ಹೆಡ್ ಮತ್ತು ಹೋಟೆಲ್ ಮಾಲೀಕರು ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ ದೂರುದಾರರಿಗೆ ರೂ. 10,000/- ಗಳನ್ನು ಮಾನಸಿಕ ಹಿಂಸೆಗಾಗಿ ಆದೇಶವಾದ 45 ದಿನಗಳ ಒಳಗಾಗಿ ಪಾವತಿಸಬೇಕು. ತಪ್ಪಿದಲ್ಲಿ, ಈ

ಮೊತ್ತಕ್ಕೆ ವಾರ್ಷಿಕ ಶೇ. 12ರಷ್ಟು ಬಡ್ಡಿ ಸೇರಿಸಿ ಪಾವತಿಸತಕ್ಕದ್ದು. ಪ್ರಕರಣದ ವೆಚ್ಚಕ್ಕಾಗಿ ರೂ. 10,000/- ಗಳನ್ನು ಸಹ 45 ದಿನಗಳ ಒಳಗೆ ಪಾವತಿಸಬೇಕು. ಇದಕ್ಕೂ ತಪ್ಪಿದಲ್ಲಿ ವಾರ್ಷಿಕ ಬಡ್ಡಿ ದರ ಅನ್ವಯವಾಗಲಿದೆ ಎಂದು ಜಿಲ್ಲಾ ಗ್ರಾಹಕ ಆಯೋಗದ ಅಧ್ಯಕ್ಷರಾದ ಟಿ. ಶಿವಣ್ಣ ಮತ್ತು ಸದಸ್ಯರಾದ ಬಿ. ಡಿ. ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠವು ಜುಲೈ 9 ರಂದು ಆದೇಶಿಸಿದೆ.