ಶಿವಮೊಗ್ಗ : ನಾನು ಯಾವತ್ತೂ ಅಧಿಕಾರಕ್ಕೆ ಅಂಟಿಕೊಂಡವನಲ್ಲ, ನನಗೆ ಸಚಿವಸ್ಥಾನ ನೀಡುವುದು, ಬಿಡುವುದು ಕಾಂಗ್ರೆಸ್ ಹೈಕಮಾಂಡ್ಗೆ ಬಿಟ್ಟ ವಿಷಯ ಎಂದು ಮಾಜಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಕೆಲಸ ಮಾಡಿದ ಶಿಕ್ಷಣ ಇಲಾಖೆಗೆ ಕೇಂದ್ರ ಸರ್ಕಾರದಿಂದ ಯಾವ ಹಣಕಾಸಿನ ನೆರವು ಸಿಕ್ಕಿಲ್ಲ. ಎಲ್ಲಾ ಅಭಿವೃದ್ಧಿಯನ್ನು ರಾಜ್ಯ ಸರ್ಕಾರದ ಹಣದಿಂದಲೇ ಪೂರೈಸಿದ್ದೇನೆ ಎಂದ ಅವರು, ನೀಟ್, ಪರೀಕ್ಷೆಯ ನಿಯಂತ್ರಣವನ್ನು ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರಕ್ಕೆ ಬಿಡಬಾರದು. ಅದನ್ನು ರದ್ದುಮಾಡಬೇಕು. ಡಬಲ್ ಇಂಜಿನ್ ಸರ್ಕಾರ ಎಂದು ಹೇಳಿಕೊಳ್ಳುವ ಬಿಜೆಪಿ ತನ್ನ ಆಡಳಿತದಲ್ಲಿರುವ ಮಹಾರಾಷ್ಟ್ರದಲ್ಲಿಯೇ ಟಿಇಟಿ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಇದರ ಬಗ್ಗೆ ಬಿಜೆಪಿಗರು ಸೊಲ್ಲೆತ್ತುತ್ತಿಲ್ಲ. ನೀಟ್ ಮರು ಪರೀಕ್ಷೆಯಲ್ಲಿಯೂ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದ್ದು ಮಕ್ಕಳ ಭವಿಷ್ಯದಲ್ಲಿ ಬಜೆಪಿಯಿಂದ ಆಗಿರುವ ದೊಡ್ಡ ದುರಂತ ಎಂದು ಕಿಡಿಕಾರಿದರು.

ಎಸ್ಐಆರ್ ಬಗ್ಗೆ ಮಾತನಾಡಿದ ಅವರು, ಪಶ್ಚಿಮ ಬಂಗಾಳ, ಬಿಹಾರ್ ಮೊದಲಾದ ರಾಜ್ಯಗಳಲ್ಲಿ ಒಂದು ಸಮೂಹವನ್ನು ಗುರಿಯಾಗಿಟ್ಟುಕೊಂಡು ಬಿಜೆಪಿ ಪ್ರಜಾಪ್ರಭುತ್ವದಲ್ಲಿನ ಚುನಾವಣಾ ವ್ಯವಸ್ಥೆಯನ್ನೇ ಹಾಳುಮಾಡಿದೆ. ಬಿಜೆಪಿಯವರ ದುರುದ್ದೇಶದಿಂದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನಕ್ಕೆ ವಿರುದ್ಧವಾಗಿ ಚುನಾವಣಾ ಪ್ರಕ್ರಿಯೆ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಹುಲ್ಗಾಂಧಿಯವರು ವಿದೇಶದಿಂದ ವಾಪಸ್ಸಾದ ಬಳಿಕ ಎಸ್ಐಆರ್ ಕುರಿತು ವಿಸ್ತೃತ ಚರ್ಚೆ ನಡೆಸಲಾಗುವುದು ಎಂದರು.