ಶಿವಮೊಗ್ಗ : ಹಾಪ್ಕಾಮ್ಸ್ ರೈತರು ಮತ್ತು ಸಾರ್ವಜನಿಕರ ಮಧ್ಯೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದು ರೈತರು ಬೆಳೆದ ಹಣ್ಣುಗಳನ್ನು ನೇರವಾಗಿ ಕಡಿಮೆ ದರದಲ್ಲಿ ಗ್ರಾಹಕರಿಗೆ ಒದಗಿಸುತ್ತಿದ್ದು, ಇಂದಿನಿಂದ ಮೂರು ದಿನಗಳ ಕಾಲ ಎಪಿಎಂಸಿ ಬಳಿಯ ಹಾಪ್ಕಾಮ್ಸ್ ಆವರಣದಲ್ಲಿ ನಡೆಯುತ್ತಿರುವ ಈ ಮೇಳದ ಸದುಪಯೋಗ ಪಡೆಯುವಂತೆ ಅವರು ಗ್ರಾಹಕರಿಗೆ ವಿನಂತಿಸಿದರು.
ರಾಸಾಯನಿಕಗಳನ್ನು ಬಳಸದ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯುತ್ತಿದೆ. ಇದು ಸಹಕಾರಿ ಸಂಸ್ಥೆಗಳು ಮಾಡಬೇಕಾದ ಅಗತ್ಯವಾದ ಕೆಲಸವಾಗಿದೆ. ಇಲ್ಲಿ ವರ್ಷವಿಡೀ ಬೆಳೆಯುವ ಮಾವಿನಹಣ್ಣು ಮತ್ತು ಹಲಸಿನ ಹಣ್ಣುಗಳು ಕೂಡ ಲಭ್ಯವಿದೆ. ರಾಮನಗರದಿಂದ ವಿಶೇಷವಾಗಿ ರೈತರು ಇಲ್ಲಿ ಭಾಗವಹಿಸಿದ್ದಾರೆ. ಆಯಾಯ ಕಾಲದಲ್ಲಿ ಬೆಳೆಯುವ ವಿವಿಧ ಹಣ್ಣುಗಳ ಸೇವನೆಯಿಂದ ಆರೋಗ್ಯವೃದ್ಧಿಯಾಗುತ್ತದೆ. ಶಿವಮೊಗ್ಗ ಹಾಪ್ಕಾಮ್ಸ್ ರೈತರಿಗೆ ಮತ್ತು ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ. ಮುಂಬರುವ ದಿನಗಳಲ್ಲಿ 10 ಕೋಟಿ ರೂ.ವೆಚ್ಚದಲ್ಲಿ ರೈತರು ಬೆಳೆದ ಹಣ್ಣುಗಳಿಗೆ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಕೂಡ ಮಾಡಲು ಶ್ರಮಿಸುತ್ತಿದೆ ಎಂದರು.

ಹಾಪ್ಕಾಮ್ಸ್ ಅಧ್ಯಕ್ಷ ವಿಜಯಕುಮಾರ್ ಮಾತನಾಡಿ, ಮೂರು ದಿನಗಳ ಈ ಮೇಳದ ಆಯೋಜನೆ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರಿಗೆ ನೇರವಾಗಿ ಗ್ರಾಹಕರಿಗೆ ತಾಜಾ ರಾಸಾಯನಿಕ ರಹಿತ ಹಣ್ಣುಗಳು ಸಿಗಲಿ ಎಂಬ ಧ್ಯೇಯೋದ್ದೇಶದಿಂದ ಮಾಡಲಾಗಿದೆ. 60 ರೂ.ಗಳಿಂದ 2600 ರೂ.ಗಳ ವರೆಗಿನ ಮಿಯಾಜಾಕಿ ಹಣ್ಣು ಕೂಡ ಇಲ್ಲಿ ಲಭ್ಯವಿದೆ. ರಾಮನಗರದ ಬೆಳೆಗಾರರ ಸಹಯೋಗವಿದೆ. ಜಪಾನಿನಲ್ಲಿ ಮಿಯಾಜಾಕಿ ಹಣ್ಣು ಒಂದು ಕೆ.ಜಿ.ಗೆ 2.45 ಲಕ್ಷ ರೂ.ಗಳಿಗೆ ಮಾರಾಟವಾಗಿತ್ತು. ಆದರೆ ಇಲ್ಲಿನ ಅನ್ನಪೂರ್ಣೇಶ್ವರಿ ಫಾರಂನ ರಂಗನಾಥ್ರವರು ಆ ಹಣ್ಣನ್ನು ಬೆಳೆಸಿದ್ದು, ಕೇವಲ ರೂ. 2500ಕ್ಕೆ ಲಭ್ಯವಿದೆ. ವಿವಿಧ ಜಾತಿಯ ಹಲಸು ಮತ್ತು ಮಾವಿನ ಹಣ್ಣುಗಳು ಹಾಗೂ ಹಲಸಿನ ಖಾದ್ಯಗಳು, ರೈತರು ಬೆಳೆದ ಇತರ ಹಣ್ಣುಗಳು ಕೂಡ ಈ ಮೇಳದಲ್ಲಿ ಕಡಿಮೆ ದರದಲ್ಲಿ ಲಭ್ಯವಿದೆ ಎಂದರು.

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮಾತನಾಡಿ, ಶಿವಮೊಗ್ಗದಲ್ಲಿ ಪಕ್ಷಾತೀತವಾಗಿ ಹಾಪ್ಕಾಮ್ಸ್ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಿದ್ದು, ರೈತರಿಗೆ ಇದರಿಂದ ಅನುಕೂಲವಾಗಿದೆ. ರಾಜಕೀಯ ಮರೆತು ಸದುದ್ದೇಶದಿಂದ ಹಾಪ್ಕಾಮ್ಸ್ ಮೂಲಕ ಗ್ರಾಹಕರಿಗೆ ಅನುಕೂಲ ಮಾಡುವ ಉದ್ದೇಶದಿಂದ ಈ ಮೇಳಗಳನ್ನು ಮಾಡಿದ್ದಾರೆ. ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ. ಮರಿಯಪ್ಪ, ಅಪರ ಜಿಲ್ಲಾಧಿಕಾರಿ ಅಭಿಷೇಕ್, ಹಾಪ್ಕಾಮ್ಸ್ನ ಉಪಾಧ್ಯಕ್ಷ ಶರತ್ ಮರಿಯಪ್ಪ, ನಿರ್ದೇಶಕರಾದ ಉಂಬ್ಳೆಬೈಲು ಮೋಹನ್, ಚಂದ್ರೇಗೌಡ, ನಾಗೇಶ್ನಾಯ್ಕ, ಕೆ.ವಿ.ಗೌಡ್ರು, ನಾರಾಯಣ್, ದಿನೇಶ್ಪಟೇಲ್, ನಾಗರಾಜ್, ಶಶಾಂಕ್, ಕಾಂತರಾಜ್, ನರಸಿಂಹಗೌಡ, ಅಶೋಕ್ ಬೇಳೂರು, ಎಂ.ಹೆಚ್.ಕಾಳ್ರಾಜ್, ಅಕ್ಷಯ್ ಕೆ.ಆರ್., ಅರುಣ್ಕುಮಾರ್ ಮತ್ತಿತರರಿದ್ದರು.