ನ್ಯಾಮತಿ ತಾಲ್ಲೂಕಿನ ಬೆಳಗುತ್ತಿ ಹೋಬಳಿ ವ್ಯಾಪ್ತಿಯ ಮಚಗೊಂಡನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಕೆರೆ ಮಣ್ಣನ್ನು ಅಕ್ರಮವಾಗಿ ತೆಗೆದು ಖಾಸಗಿ ಜಮೀನಿನಲ್ಲಿ ಲೇಔಟ್ ನಿರ್ಮಾಣ ಹಾಗೂ ಭೂ ಸಮತಟ್ಟುಗೊಳಿಸುವ ಕಾರ್ಯಕ್ಕೆ ಬಳಸಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮಚಗೊಂಡನಹಳ್ಳಿ ಗ್ರಾಮದ ಸರ್ವೇ ನಂ.103 ರಲ್ಲಿರುವ ಸುಮಾರು 13 ಎಕರೆ ವಿಸ್ತೀರ್ಣದ ದೊಡ್ಡ ಕೆರೆ ಪ್ರದೇಶ ಮತ್ತು ಸುತ್ತಮುತ್ತ ಭಾರೀ ಪ್ರಮಾಣದಲ್ಲಿ ಮಣ್ಣು ತೆಗೆಯುವ ಕಾರ್ಯ ನಡೆಯುತ್ತಿದೆ ಎನ್ನಲಾಗಿದೆ. ಜೆಸಿಬಿ, ಟ್ರ್ಯಾಕ್ಟರ್ ಸೇರಿದಂತೆ ವಿವಿಧ


ಯಂತ್ರೋಪಕರಣಗಳನ್ನು ಬಳಸಿ ಕೆರೆ ಮಣ್ಣನ್ನು ಸಾಗಿಸಲಾಗುತ್ತಿದ್ದು, ಈ ಮಣ್ಣನ್ನು ಸರ್ವೇ ನಂ.97 ಸಂಬಂಧಿತ ಖಾಸಗಿ ಜಮೀನಿನಲ್ಲಿ ಸಂಗ್ರಹಿಸಿ ಲೇಔಟ್ ನಿರ್ಮಾಣಕ್ಕೆ ಬಳಸಲಾಗುತ್ತಿದೆ ಎಂಬ ಮಾಹಿತಿ ಗ್ರಾಮಸ್ಥರಿಂದ ಸಾರ್ವಜನಿಕರಿಂದ ಅರೋಪವು ಕೇಳಿಬಂದಿದೆ
ಸ್ಥಳದ ಫೋಟೋಗಳು ಹಾಗೂ ದಿಶಾಂಕ್ (Dishank) ಮಾಹಿತಿಯನ್ನು ದೂರಿನೊಂದಿಗೆ ಲಗತ್ತಿಸಲಾಗಿದ್ದು, ಪ್ರಕರಣದ ಕುರಿತು ತಕ್ಷಣ ತನಿಖೆ ನಡೆಸುವಂತೆ ಮನವಿ ಮಾಡಲಾಗಿದೆ.

ಪರಿಸರ ಹಾನಿ ಆತಂಕ
ಈ ಅಕ್ರಮ ಚಟುವಟಿಕೆಯಿಂದ ಸರ್ಕಾರಿ ಆಸ್ತಿ ಹಾಗೂ ಕೆರೆ ಪರಿಸರ ಹಾನಿಯಾಗುತ್ತಿದೆ. ಭೂಗರ್ಭ ಜಲಮಟ್ಟ ಕುಸಿತ, ಪರಿಸರ ಅಸಮತೋಲನ ಮತ್ತು ಸರ್ಕಾರಕ್ಕೆ ರಾಜಸ್ವ ನಷ್ಟ ಉಂಟಾಗುವ ಸಾಧ್ಯತೆ ಇದೆ ಜೊತೆಗೆ ಭವಿಷ್ಯದಲ್ಲಿ ಅಕ್ರಮ ಲೇಔಟ್ ಮತ್ತು ಭೂ ಕಬಳಿಕೆ ಪ್ರಕರಣಗಳು ಹೆಚ್ಚುವ ಆತಂಕವೂ ವ್ಯಕ್ತವಾಗಿದೆ.
ಸಾರ್ವಜನಿಕರ ಪ್ರಮುಖ ಬೇಡಿಕೆಗಳು


ಸಾರ್ವಜನಿಕರಿಂದ ಸಂಬಂಧಿತ ಅಧಿಕಾರಿಗಳಿಗೆ ಕೆಳಕಂಡ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಲಾಗಿದೆ:
ಸ್ಥಳಕ್ಕೆ ತಕ್ಷಣ ಭೇಟಿ ನೀಡಿ ಮಹಜರ್ ನಡೆಸುವುದು
ಅಕ್ರಮ ಮಣ್ಣು ತೆಗೆಯುವ ಕಾರ್ಯವನ್ನು ಸ್ಥಗಿತಗೊಳಿಸುವುದು
ಸಂಬಂಧಪಟ್ಟ ವಾಹನಗಳು ಮತ್ತು ಯಂತ್ರೋಪಕರಣಗಳನ್ನು ವಶಪಡಿಸಿಕೊಳ್ಳುವುದು
ಖನಿಜ ಮತ್ತು ಭೂವಿಜ್ಞಾನ ಇಲಾಖೆ ಮೂಲಕ ತನಿಖೆ ನಡೆಸುವುದು
ಸರ್ಕಾರಿ ಕೆರೆ ಮಣ್ಣು ತೆಗೆದಿರುವುದು ದೃಢಪಟ್ಟಲ್ಲಿ ಕಾನೂನು ಕ್ರಮ ಜರುಗಿಸುವುದು
ಡ್ರೋನ್ ಸರ್ವೇ ಹಾಗೂ ಭೂ ದಾಖಲೆ ಪರಿಶೀಲನೆ ನಡೆಸುವುದು
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮತ್ತು ಸಂಬಂಧಿತ ಇಲಾಖೆಗಳು ಯಾವ ರೀತಿಯ ಕ್ರಮ ಕೈಗೊಳ್ಳಲಿವೆ ಎಂಬುದನ್ನು ಸಾರ್ವಜನಿಕರು ಕಾತರದಿಂದ ನಿರೀಕ್ಷಿಸುತ್ತಿದ್ದಾರೆ.