ಶಿವಮೊಗ್ಗ : ರೈತ ಮತ್ತು ಬೆಳೆಗಾರರ ನಡುವೆ ಮಧ್ಯವರ್ತಿಗಳ ಹಾವಳಿ ತಪ್ಪಲು ರೈತರು ಉತ್ಪಾದನಾ ಘಟಕಗಳನ್ನು ಸ್ಥಾಪಿಸಬೇಕು ಎಂದು ತೀರ್ಥಹಳ್ಳಿಯ ಕ್ಷೇತ್ರದ ಶಾಸಕ ಅರಗ ಜ್ಞಾನೇಂದ್ರ ಹೇಳಿದರು.
ಅವರು ಇಂದು ಕೃಷಿ ಇಲಾಖೆ, ನಬಾರ್ಡ್ ದಾತ್ರಿ ರೈತ ಉತ್ಪಾದಕರ ಕಂಪನಿ ಕುಡುಮಲ್ಲಿಗೆ, ಚೈತನ್ಯ ರೂರಲ್ ಡೆವಲಪ್ಮೆಂಟ್ ಸೊಸೈಟಿ ಇವರ ಸಂಯುಕ್ತಾಶ್ರಯದಲ್ಲಿ ಕುಡುಮಲ್ಲಿಗೆಯ ದಾತ್ರಿ ರೈತ ಉತ್ಪಾದಕರ ಕಂಪನಿ ಆವರಣದಲ್ಲಿ ಆಯೋಜಿಸಿದ್ದ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಮೌಲ್ಯವರ್ಧನೆ ಘಟಕ ಉದ್ಘಾಟಿಸಿ ಮಾತನಾಡಿದರು.
ರೈತ ಬೆಳೆದ ಬೆಳೆಗೆ ಅದರಲ್ಲೂ ಮುಖ್ಯವಾಗಿ ತೋಟಗಾರಿಕಾ ಬೆಳೆಗಳಿಗೆ ಒಳ್ಳೆಯ ಬೆಲೆ ಸಿಗಬೇಕು. ರೈತರಿಗೆ ಇದರಿಂದ ಅನುಕೂಲವಾಗಬೇಕು. ಹಲವು ಕಡೆಗಳಲ್ಲಿ ಮಧ್ಯವರ್ತಿಗಳೇ ಲಾಭವನ್ನು ಹೆಚ್ಚು ಪಡೆಯುತ್ತಿದ್ದಾರೆ. ಈ ಹಿನ್ನಲೆಯಲ್ಲಿ ರೈತರುಗಳು ಮುಂದೆ ಬಂದು ಉತ್ಪಾದನಾ ಘಟಕಗಳನ್ನು ಸ್ಥಾಪಿಸಬೇಕು. ಇಂತಹ ಯೋಜನೆಗಳು ಕೃಷಿ ಅಭಿವೃದ್ಧಿಗೆ ಪೂರಕ ಮತ್ತು ಪ್ರೇರಕವಾಗುತ್ತವೆ. ಪ್ರಧಾನಿ ಮೋದಿಯವರ ಕನಸು ಕೂಡ ಇದೇ ಆಗಿದೆ ಎಂದರು.
ಕುಡುಮಲ್ಲಿಗೆಯಲ್ಲಿ ಇಂದು ಆರಂಭವಾಗುತ್ತಿರುವ ಈ ಅಡಿಕೆಪುಡಿ ಘಟಕವು ಯಶಸ್ವಿಯಾಗಬೇಕು. ಇದರಿಂದ ರೈತರು ಪ್ರಯೋಜನ ಪಡೆಯಬೇಕು. ರೈತ ಮತ್ತು ಬಳಕೆದಾರರ ನಡುವೆ ಸಾಮರಸ್ಯ ಹೆಚ್ಚಬೇಕು ಎಂದರು.
ಕಾರ್ಯಕ್ರಮದಲ್ಲಿ ನಬಾರ್ಡಿನ ಡಿಡಿಎಂ ಶರತ್ ಪಿ.ಗೌಡ, ಕೃಷಿ ಇಲಾಖೆಯ ಉಪನಿರ್ದೇಶಕಿ ಮಂಜುಳಾ ಜಿ., ಕೃಷಿ ನಿರ್ದೇಶಕ ಪ್ರವೀಣ್, ಸೋಮಶೇಖರ್ ಕೆ., ಕರ್ನಾಟಕ ಬ್ಯಾಂಕಿನ ವ್ಯವಸ್ಥಾಪಕ ರಾಘವೇಂದ್ರ ಕಾಮತ್, ಚೈತನ್ಯ ಸಂಸ್ಥೆಯ ಸಿಇಓ ಬಿ.ಟಿ. ಭದ್ರೇಶ್, ದಾತ್ರಿ ರೈತ ಉತ್ಪಾದಕ ಕಂಪನಿಯ ಎಂಡಿ ವೈ.ಕೃಷ್ಣಮೂರ್ತಿ, ಜನರಲ್ ಮ್ಯಾನೇಜರ್ ಪೀಟರ್, ದಿನಕರ್ ಜಾದವ್, ಸೂರಜ್, ಜಾನ್ ಅಜಯ್, ಅವಿನಾಶ್, ಅಂಬಿಕಾ ಚೈತನ್ಯ ಹೆಚ್. ಸೇರಿದಂತೆ ಹಲವರಿದ್ದರು.