ಶಿವಮೊಗ್ಗ : ಕೇಂದ್ರ ಸರ್ಕಾರ ಪಂಚರಾಜ್ಯಗಳ ಚುನಾವಣೆ ಮುಗಿಯುತ್ತಿದ್ದಂತೆಯೇ ಕಮರ್ಷಿಯಲ್ ಗ್ಯಾಸ್ ದರವನ್ನು ಏರಿಸಿದೆ. ಇದರಿಂದ ಬಡವರು ಬದುಕುವುದೇ ದುಸ್ತರವಾಗಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಆರೋಪಿಸಿದರು.
ಅವರು ಇಂದು ಬೊಮ್ಮನಕಟ್ಟೆ ಆಶ್ರಯ ಬಡಾವಣೆಯಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಸಲು ಆಗಮಿಸಿದ್ದಾಗ ಸುದ್ದಿಗಾರರೊಂದಿಗೆ ಮಾತನಾಡಿದರು.

ಜಾತಿ-ಜಾತಿಗಳ ನಡುವೆ ಭಿನ್ನಾಭಿಪ್ರಾಯ ಮೂಡಿಸುವ ಕೇಂದ್ರ ಸರ್ಕಾರ ಈಗ ಗ್ಯಾಸ್ ಸಿಲಿಂಡರ್ ದರವನ್ನು ಹೆಚ್ಚಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ೫-೧೦ ರೂ. ಹೆಚ್ಚಿಸಿದ್ದರೂ ಕೂಡ ಪ್ರತಿಭಟನೆ ಮಾಡುತ್ತಿದ್ದ ಬಿಜೆಪಿಯವರಿಗೆ ಈಗ ಅರ್ಥವಾಗಬೇಕು. ಒಂದೇ ಸಾರಿ ೯೯೩ ರೂ. ಹೆಚ್ಚಿಸಿದ್ದಾರೆ. ಬಡವರು ಎಲ್ಲಿಗೆ ಹೋಗಬೇಕು. ಏನೋ ನಮ್ಮ ಅದೃಷ್ಟ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರೆಂಟಿಗಳನ್ನು ಜಾರಿಗೆ ತಂದು ಬಡವರ ಬದುಕಿಗೆ ಆಸರೆಯಾಗಿದ್ದಾರೆ. ಇಲ್ಲದಿದ್ದರೆ ಎಲ್ಲಿಗೆ ಹೋಗಬೇಕಿತ್ತು ಎಂದು ಪ್ರಶ್ನೆ ಮಾಡಿದರು.
ಕೇಂದ್ರ ಸರ್ಕಾರ ಎಲ್ಲಾ ಬೆಲೆಗಳನ್ನು ಹೆಚ್ಚು ಮಾಡಬಹುದು. ವಿದ್ಯುತ್ ಬೆಲೆ ಹೆಚ್ಚಾಗುವುದರಲ್ಲಿ ಏನಿದೆ ತಪ್ಪು ? ಪೆಟ್ರೋಲಿಂ ಉತ್ಪನ್ನಗಳ ಬೆಲೆಯನ್ನು ಹೆಚ್ಚಳ ಮಾಡಿದರೆ ಸಹಜವಾಗಿಯೇ ವಿದ್ಯುತ್ ದರ ಹೆಚ್ಚಾಗುತ್ತದೆ ಎಂದು ವಿದ್ಯುತ್ ದರ ಏರಿಕೆಯನ್ನು ಸಮರ್ಥಿಸಿಕೊಂಡರು.
ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಸಂಪುಟ ವಿಸ್ತರಣೆ ವಿಷಯದಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮ. ನಾವೆಲ್ಲರೂ ಅದಕ್ಕೆ ಬದ್ಧರಾಗಬೇಕು. ಎಷ್ಟು ದಿನ ಅಧಿಕಾರದಲ್ಲಿ ಇರುತ್ತೆವೆಯೋ ಅಷ್ಟು ದಿನ ಇರಬೇಕಷ್ಟೇ. ಹೈಕಮಾಂಡ್ ಬೇಡ ಎಂದರೆ ಶಾಸಕರಾಗಿ ಮುಂದುವರೆದು ಕೆಲಸ ಮಾಡುತ್ತೇವೆ. ಬಿಜೆಪಿ ಸರ್ಕಾರಲ್ಲಿ ಮೂರು ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಿದ್ದರು. ನಮ್ಮ ಸರ್ಕಾರ ಸಂಪುಟ ಬದಲಾವಣೆ ಮಾಡುವುದರಲ್ಲಿ ತಪ್ಪೇನಿದೇ ? ಬದಲಾವಣೆ ಮಾಡಿದರೆ ಒಳ್ಳೆಯದೇ ಎಂದರು.

ಶಿವಮೊಗ್ಗ ಸೇರಿದಂತೆ ಸುಮಾರು ೧೩ ಮಹಾನಗರ ಪಾಲಿಕೆಗೆ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿಯಲ್ಲಿ ೨೬೦೦ ಕೋಟಿ ರೂ.ಗಳನ್ನು ನೀಡಿದ್ದೇವೆ. ೨ನೇ ಹಂತದ ಈ ಯೋಜನೆಯಲ್ಲಿ ಶಿವಮೊಗ್ಗ ನಗರ ಮಹಾನಗರ ಪಾಲಿಕೆಗೂ ೨೦೦ ಕೋಟಿ ರೂ.ಗಳನ್ನು ನೀಡಲಾಗಿದೆ. ಈಗಾಗಲೇ ಟೆಂಡರ್ ಕರೆದಿದ್ದು, ಇಂದು ಗುದ್ದಲಿಪೂಜೆ ನಡೆಯುತ್ತಿದೆ. ಕಾಮಗಾರಿ ಶೀಘ್ರವೇ ಆರಂಭವಾಗಲಿದೆ. ಈ ಅನುದಾನವು ಎಲ್ಲಾ ಪಕ್ಷದ ಶಾಸಕರಿಗೂ ಕೂಡ ತಲುಪಿದೆ. ಇದರ ಜೊತೆಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಕೂಡ ಅನುದಾನ ನೀಡಲಾಗುವುದು. ಸ್ಮಾರ್ಟ್ಸಿಟಿಯ ಕಾಮಗಾರಿಗಳು ನಡೆಸಲಾಗಿದ್ದರೂ ಇನ್ನೂ ಕೆಲವು ಬಾಕಿ ಇವೆ. ಅಭಿವೃದ್ಧಿ ಕಾಮಗಾರಿಗಳು ನಿಲ್ಲುವುದಿಲ್ಲ. ಅವು ನಿರಂತರವಾಗಿರುತ್ತವೆ ಎಂದರು.