ಶಿವಮೊಗ್ಗ : ಮಾನಸ ಟ್ರಸ್ಟ್ನ ಕಟೀಲು ಅಶೋಕ್ ಪೈ ಸ್ಮಾರಕ ಕಾಲೇಜು ವತಿಯಿಂದ ಏ.೧೦ ಮತ್ತು ೧೧ರಂದು ಮಲ್ಲಿಗೇನಹಳ್ಳಿಯ ಜ್ಞಾನಪಥ ಆವರಣದಲ್ಲಿ ರಾಷ್ಟ್ರೀಯ ವಿಚಾರ ಸಮ್ಮೇಳನವನ್ನು ಏರ್ಪಡಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲೆ ಡಾ. ಸಂಧ್ಯಾ ಕಾವೇರಿ ಕೆ. ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಾಲೇಜಿನಿಂದ ಈಗಾಗಲೇ ರಾಷ್ಟ್ರಮಟ್ಟದ ವಿಚಾರ ಸಮ್ಮೇಳನವನ್ನು ಎರಡು ಬಾರಿ ನಡೆಸಿದ್ದು, ಈಗ ನಡೆಯುತ್ತಿರುವುದು ಮೂರನೇ ಸಮ್ಮೇಳನವಾಗಿದೆ ಎಂದರು.
ಕೃತಕ ಬುದ್ಧಿಮತ್ತೆ, ಅಂತರ್ಶಿಸ್ತಿಯತೆ ಹಾಗೂ ಭವಿಷ್ಯದ ಉನ್ನತ ಶಿಕ್ಷಣ ವಿಚಾರ ಕುರಿತು ಸಮ್ಮೇಳನ ನಡೆಯುತ್ತಿದ್ದು, ಸಮ್ಮೇಳನದಲ್ಲಿ ವಿವಿಧ ಜ್ಞಾನ ಶಿಸ್ತುಗಳ ದೃಷ್ಟಿಯಿಂದ ಎಐನ ಪ್ರಯೋಜನಗಳು ಮತ್ತು ಸವಾಲುಗಳ ಕುರಿತು ಅನೇಕ ವಿದ್ವಾಂಸರು ವಿಚಾರ ಮಂಡಿಸಲಿದ್ದಾರೆ ಎಂದರು.
ಈಗಾಗಲೇ ೧೫೦ಕ್ಕೂ ಹೆಚ್ಚು ಜನ ಸಮ್ಮೇಳನದಲ್ಲಿ ಹಾಜರಾಗಿ ಪ್ರಬಂಧ ಮಂಡಿಸಲು ಹೆಸರು ನೋಂದಾಯಿಸಿದ್ದಾರೆ. ಇನ್ನೂ ಅನೇಕರು ಆನ್ಲೈನ್ ಪ್ರಬಂಧ ಮಾಡಲಿದ್ದಾರೆ ಎಂದರು.

ಸಮ್ಮೇಳನವನ್ನು ಏ.೧೦ರ ಬೆಳಿಗ್ಗೆ ೧೦ ಗಂಟೆಗೆ ಕುವೆಂಪು ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಉದ್ಘಾಟಿಸಲಿದ್ದು, ಬೆಂಗಳೂರಿನ ಐಐಎಂ ಸಂಸ್ಥೆಯ ಕಮ್ಯುನಿಕೇಷನ್ ಮತ್ತು ಮ್ಯಾನೇಜ್ಮೆಂಟ್ ವಿಭಾಗದ ಡಾ.ದೀಪ್ತಿ ದಳಪತಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು.
ಪ್ರಧಾನ ಚರ್ಚಾಗೋಷ್ಠಿಯಲ್ಲಿ ಬೆಳಗಾವಿ ವಿವಿಯ ಪ್ರೊ.ಅಶೋಕ್ ಡಿಸೋಜಾ, ಪ್ರಸಿದ್ಧ ವೈದ್ಯರಾದ ಡಾ. ಶ್ರೀಕಾಂತ್ ಹೆಗಡೆ, ಕುವೆಂಪು ವಿವಿಯ ರಾಸಾಯನ ಶಾಸ್ತ್ರ ಪ್ರಾಧ್ಯಾಪಕರು ಹಾಗೂ ಹಿರಿಯ ವಿದ್ವಾಂಸಕರಾದ ಪ್ರೊ. ಕುಮಾರಸ್ವಾಮಿ, ಪ್ರಸಿದ್ಧ ಮನೋವೈದ್ಯೆ ಡಾ.ಪ್ರೀತಿ ವಿ.ಶಾನಭಾಗ್ ಭಾಗವಹಿಸಲಿದ್ದಾರೆ. ವಿಶೇಷ ಉಪನ್ಯಾಸಗಳ ಸರಣಿಯಲ್ಲಿ ಅಮೇರಿಕಾದ ಗೂಗಲ್ ಸಂಸ್ಥೆಯ ಹಿರಿಯ ನಿರ್ದೇಶಕ ಡಾ.ಮಹೇಶ್ ಕಲ್ಲಹಳ್ಳ, ಕೆ.ಆರ್.ಎಫ್.ಎ. ವಿವಿಯ ಪ್ರೊ. ಪೃಥ್ವಿದತ್ತ ಚಂದ್ರ ಶೋಭಿ, ಬೆಂಗಳೂರಿನ ನಿಮ್ಹಾನ್ಸ್ನ ಡಾ. ಅಜೇಯ ಗೋಯೆಲ್, ಸೇಂಟ್ ಜಾನ್ಸ್ ಸಂಸ್ಥೆಯ ಸಂಶೋಧಕ ಡಾ. ಕಿಶೋರ್ ಗೋವಿಂದ್ ಹಾಗೂ ಬೆಂಗಳೂರಿನ ಶ್ರೀ ನರ್ಸಿಂಗ್ ಇನ್ಸ್ಟಿಟ್ಯೂಟ್ನ ಡಾ.ಶೀಲಾ ಜೆ. ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಏ.೧೧ರ ಸಂಜೆ ೪ ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಕನ್ನಡದಲ್ಲಿ ಮೊದಲ ವೆಬ್ಸೈಟ್ ಹೊರತಂದ, ಕಂಪ್ಯೂಟರ್ ಸೈನ್ಸ್ ತಜ್ಞರಾದ ಡಾ. ಉಬರಡ್ಕ ಬೆಳ್ಳಿಪ್ಪಾಡಿ ಪವನಜರವರು ಸಮಾರೋಪ ನುಡಿಗಳನ್ನಾಡುವರು. ಮುಖ್ಯ ಅತಿಥಿಯಾಗಿ ಬೆಂಗಳೂರಿನ ಶೋಮು ಕನ್ಸಲ್ಟಿಂಗ್ ಸರ್ವಿಸ್ನ ಮುರಳಿಧರ ಹೆಚ್.ಎನ್. ಭಾಗವಹಿಸಲಿದ್ದಾರೆ ಎಂದರು.
ಎರಡು ದಿನಗಳ ಈ ವಿಚಾರ ಸಮ್ಮೇಳನವು ಮಾನಸ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ನಿರ್ದೇಶಕರಾದ ಪ್ರೊ. ರಾಜೇಂದ್ರ ಚೆನ್ನಿಯವರ ಮುಖ್ಯ ಮಾರ್ಗದರ್ಶನದಲ್ಲಿ ನಡೆಯಲಿದ್ದು, ಕಾಲೇಜಿನ ಮನಃಶಾಸ್ತ್ರ ವಿಭಾಗದ ಡಾ. ಅರ್ಚನಾ ಭಟ್ ಮುಖ್ಯ ಸಂಯೋಜಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರೊ.ರಾಜೇಂದ್ರ ಚೆನ್ನಿ, ಡಾ.ಅರ್ಚನಾ ಭಟ್, ಪ್ರೊ.ರಾಮಚಂದ್ರ ಬಾಳಿಗಾ, ಡಾ.ಗಣೇಶ್ ಪ್ರಸಾದ್ ಉಪಸ್ಥಿತರಿದ್ದರು.