ಶಿವಮೊಗ್ಗ : ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಮಂಡಿಸಿರುವ ೯ನೇ ಬಜೆಟ್ ವಿಕಸಿತ ಭಾರತದ ಕನಸ್ಸನ್ನು ನನಸು ಮಾಡುವತ್ತ ಸಾಗಿದೆ. ಇದು ಅಭಿವೃದ್ಧಿ ಪೂರಕ ಬಜೆಟ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಿ ಮೋದಿಯವರು ೨೦೪೭ಕ್ಕೆ ಭಾರತ ವಿಕಸಿತ ಭಾರತವಾಗುತ್ತದೆ ಎಂದು ಸಂಕಲ್ಪ ಮಾಡಿದ್ದರು. ಆ ಸಂಕಲ್ಪಕ್ಕೆ ಕೇಂದ್ರದ ಬಜೆಟ್ ಪೂರಕವಾಗಿದ್ದು, ಇದು ಆತ್ಮನಿರ್ಬರ ಸ್ವಾವಲಂಬನೆ ಭಾರತದ ಕನಸ್ಸನ್ನು ನನಸಾಗಿಸುವತ್ತ ಸಾಗಿದ್ದು, ದೇಶದೆಲ್ಲೆಡೆ ಸ್ವಾಗತವಾಗುತ್ತಿದೆ. ಇದು ಆಡಂಬರದ ಬಜೆಟ್ ಅಲ್ಲ, ಸುಧಾರಣೆಯ ಬಜೆಟ್. ಜನಪ್ರೀಯಕ್ಕಿಂತ ಜನಹಿತದ ಬಜೆಟ್ ಆಗಿದೆ. ಪ್ರಸ್ತುತ ಜಾಗತಿಕಮಟ್ಟದ ಪರಿಸ್ಥಿತಿಯಲ್ಲಿ ಅಮೇರಿಕಾ ಭಾರತದ ವಿರುದ್ಧ ಸಾರಿರುವ ಸುಂಕ ಸಮರಕ್ಕೆ ಉತ್ತರ ನೀಡಲಿದೆ ಎಂದರು.
ಈ ಬಜೆಟ್ನಲ್ಲಿ ಎಲ್ಲಾ ಕ್ಷೇತ್ರಕ್ಕೂ ಆದ್ಯತೆ ನೀಡಲಾಗಿದೆ. ಕೈಗಾರಿಕೆ, ಪ್ರವಾಸೋದ್ಯಮ, ಐ.ಟಿ.-ಬಿ.ಟಿ., ಕೃಷಿ, ರೈಲು, ವಿಮಾನ, ರಸ್ತೆ, ಹೀಗೆ ಎಲ್ಲಾ ಆದ್ಯತಾ ಕ್ಷೇತ್ರಗಳಿಗೂ ಪ್ರಾಮುಖ್ಯತೆ ನೀಡಲಾಗಿದ್ದು, ಇದೊಂದು ಆರ್ಥಿಕ ಶಿಸ್ತಿನ ಬಜೆಟ್ ಆಗಿದೆ. ಈ ಬಜೆಟ್ನಲ್ಲಿ ಹಣಕಾಸು ಕೊರತೆಯನ್ನು ಶೇ.೪.೪ಕ್ಕೆ ತರಲಾಗಿದೆ. ಮೂಲಭೂತ ಸೌಲಭ್ಯಕ್ಕೆ ಒತ್ತು ನೀಡಲಾಗಿದೆ ಎಂದರು.
ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ, ಮೂಲಭೂತ ಸೌಲಭ್ಯಗಳಿಗೆ ೨ ಲಕ್ಷ ಕೋಟಿ ಹಣವನ್ನು ಮೀಸಲಾಗಿಡಲಾಗಿತ್ತು. ಆದರೆ ಈಗ ಎನ್.ಡಿ.ಎ. ಸರ್ಕಾರ ಬಂದ ಮೇಲೆ ಅದನ್ನು ೧೨.೨೦ ಲಕ್ಷ ಕೋಟಿಗೆ ಏರಿಸಲಾಗಿದೆ. ಹಾಗಾಗಿ ಇದೊಂದು ಕ್ರಾಂತಿಕಾರಕ ಬಜೆಟ್ ಆಗಿದೆ. ಎಂದಿನಂತೆ ೧೨ ಲಕ್ಷದವರೆಗೆ ಆದಾಯ ತೆರಿಗೆ ಇಲ್ಲ. ಉನ್ನತ ಶಿಕ್ಷಣಕ್ಕೂ ಆದ್ಯತೆ ನೀಡಲಾಗಿದೆ. ಮುಖ್ಯವಾಗಿ ಮಹಿಳೆಯರ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದ್ದು, ಮಹಿಳೆಯರಿಗೆ ಉದ್ಯಮ ಆರಂಬಿಸಲು ಕೂಡ ಯೋಜನೆಗಳನ್ನು ರೂಪಿಸಲಾಗಿದೆ. ದೇಶಾದ್ಯಂತ ಪ್ರತಿ ಜಿಲ್ಲೆಯಲ್ಲೂ ಹಾಸ್ಟೆಲ್ಗಳನ್ನು ತೆರೆಯಲು ತೀರ್ಮಾನಿಸಲಾಗಿದೆ. ಪ್ರಮುಖವಾಗಿ ಯುವಜನತೆಗೆ ಆದ್ಯತೆ ನೀಡಲಾಗಿದೆ. ಇದರಿಂದ ಸಹಜವಾಗಿಯೇ ಭಾರತ ಅಭಿವೃದ್ಧಿಯಾಗುತ್ತದೆ ಎಂದರು.
ರಾಜ್ಯ ಸರ್ಕಾರ ವಿನಾಕಾರಣ ಕೇಂದ್ರದ ಮೇಲೆ ಪದೇ ಪದೇ ಅನುದಾನ ಕುರಿತು ಮಾತನಾಡುತ್ತಲೇ ಇದೆ. ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಹೇಳುತ್ತಿದ್ದಾರೆ. ಈ ಬಜೆಟ್ಟನ್ನು ಅವರು ಸರಿಯಾಗಿ ಗಮನಿಸಲಿ, ಅವರಿಗೆ ಗೊತ್ತಾಗುತ್ತದೆ. ರಾಜ್ಯಗಳಿಗೆ ನೀಡುವ ತೆರಿಗೆಯ ಅನುದಾನವನ್ನು ಶೇ.೩.೬ರಿಂದ ೪.೧೩ಕ್ಕೆ ಹೆಚ್ಚಳ ಮಾಡಲಾಗಿದೆ. ಈ ಹೆಚ್ಚಳದಿಂದ ರಾಜ್ಯಕ್ಕೆ ಸುಮಾರು ೭೩೮೭ ಕೋಟಿ ರೂ. ಹೆಚ್ಚಾಗುತ್ತಿದ್ದು, ೫ವರ್ಷದಲ್ಲಿ ಅದು ೬೩.೦೫೦ ಕೋಟಿ ಹೆಚ್ಚಾಗುತ್ತದೆ. ಇದು ಕೇಂದ್ರ ಸರ್ಕಾರದ ಕೊಡುಗೆ ಅಲ್ಲವೇ ಎಂದ ಅವರು, ರಾಜ್ಯ ಸರ್ಕಾರ ಕೇಂದ್ರದ ಮೇಲೆ ಬೊಟ್ಟು ತೋರಿಸುವ ಬದಲು ಮನವೊಲಿಸಿ ಅನುದಾನವನ್ನು ತರಿಸಿಕೊಳ್ಳಬೇಕು. ಒಕ್ಕೂಟ ವ್ಯವಸ್ಥೆಗೆ ಮೊದಲು ಗೌರವ ಕೊಡುವುದನ್ನು ಕಲಿಯಬೇಕು. ಈ ಮೊದಲು ರಾಜ್ಯ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಮಾತ್ರ ಅನ್ಯಾಯವಾಗುತ್ತಿದೆ ಎಂದು ಹೇಳುತ್ತಿದ್ದರು. ಈಗ ಇಡೀ ದಕ್ಷಿಣ ಭಾರತಕ್ಕೆ ಅನ್ಯಾಯವಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಇದು ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದರು.
ಕೇಂದ್ರ ಸರ್ಕಾರ ನಕ್ಸಲ್ ಸಮಸ್ಯೆಯನ್ನು ಸಂಪೂಣವಾಗಿ ತಡೆಗಟ್ಟುವಲ್ಲಿ ಯಶಸ್ವಿಯಾಗಿದೆ. ಈ ಹಿಂದೆ ೬೫ ಜಿಲ್ಲೆಗಳಲ್ಲಿ ನಕ್ಸಲ್ ಸಮಸ್ಯೆ ಇತ್ತು. ಈಗ ಕೇವಲ ೧೦ ಜಿಲ್ಲೆಗಳಲ್ಲಿ ಮಾತ್ರ ಇದೆ ಎಂದ ಅವರು, ದ್ವೇಷ ಭಾಷಣ ಕುರಿತಂತೆ ಕಾಯ್ದೆ ಕುರಿತು ಮಾತನಾಡಿ, ಈ ಕಾಯ್ದೆ ವಿರೋಧ ಪಕ್ಷವನ್ನು ಮಟ್ಟಹಾಕಲೆಂದೇ ರೂಪಿಸಲಾಗಿದೆ. ಸದನದಲ್ಲಿ ಯಾವ ಚರ್ಚೆಗೂ ಒಳಪಡಿಸಲಿಲ್ಲ. ಪ್ರಜಾಪ್ರಭುತ್ವಕ್ಕೆ ಇದು ಮಾರಕವಾಗಿ ಕಾಯ್ದೆಯಾಗಿದೆ. ಈಗಾಗಲೇ ಹಿಂದೂ ಕಾರ್ಯಕರ್ತರ ಮೇಲೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿರುವುದೇ ಇದಕ್ಕೆ ಸಾಕ್ಷಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಮಾಜಿ ಶಾಸಕರಾದ ಅಶೋಕ್ನಾಯ್ಕ, ಎಸ್.ರುದ್ರೇಗೌಡ್ರು, ಮಾಲತೇಶ್, ಸುಧಾಕರ್, ರಘು, ಎಸ್.ಚಂದ್ರಶೇಖರ್, ಮಂಜುನಾಥ್ ಇದ್ದರು.