ಶಿವಮೊಗ್ಗ,ಜ.06: ಸಿರಿಧಾನ್ಯಗಳಿಂದ ತಯಾರಿಸಿದ ಆಹಾರ ಪೌಷ್ಟಿಕಾಂಶಗಳಿAದ ಕೂಡಿದೆ. ಹಾಗೂ ನಮ್ಮ ಪೂರ್ವಿಕರು ತಯಾರಿಸುತ್ತಿದ್ದ ಹಳೆಯ ಖಾದ್ಯಗಳು ಆರೋಗ್ಯಕರವಾಗಿದ್ದು, ಅವುಗಳನ್ನು ಉತ್ತೇಜಿಸುವ ಅವಶ್ಯಕತೆ ಇದೆ ಎಂದು ಜಂಟಿ ಕೃಷಿ ನಿರ್ದೇಶಕರಾದ ಕಿರಣ್ ಕಮಾರ್ ತಿಳಿಸಿದರು.
ಅಂತಾರಾಷ್ಟ್ರೀಯ ವಾಣಿಜ್ಯ ಮೇಳ-2026 ರ ಅಂಗವಾಗಿ ಕೃಷಿ ಇಲಾಖೆ ವತಿಯಿಂದ ಶಿವಮೊಗ್ಗದ ಜಂಟಿ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ “ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ” ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಿರಿಧಾನ್ಯಗಳಲ್ಲಿ ಉತ್ತಮ ಕಾರ್ಬೋಹೈಡ್ರೇಟ್, ನಾರು, ಪ್ರೋಟಿನ್ ಮತ್ತು ಖನಿಜಗಳು ಇದ್ದು ಉತ್ತಮ ಆಹಾರವಾಗಿದೆ. ವಿಶೇಷವಾಗಿ ಸಕ್ಕರೆ ಖಾಯಿಲೆ ಇರುವವರಿಗೆ ಒಳ್ಳೆಯ ಆಹಾರ. ಸಿರಿಧಾನ್ಯಗಳಿಗೆ ಉತ್ತೇಜನ ನೀಡುವುದರೊಂದಿಗೆ ಇದರ ಮೌಲ್ಯವರ್ಧನೆ ಸಹ ಅಷ್ಟೇ ಮುಖ್ಯವಾಗಿದೆ. ಆದ್ದರಿಂದ ಪ್ರತಿ ವರ್ಷ ಸಿರಿಧಾನ್ಯ ಖಾದ್ಯ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತಿದೆ.

ಜಿಲ್ಲೆಯಲ್ಲಿ ಸಿರಿಧಾನ್ಯ ಬೆಳೆ ತೀರಾ ಕಡಿಮೆ. ಆದರೆ ಬಳಕೆದಾರರ ಸಂಖ್ಯೆ ಹೆಚ್ಚಿದ್ದು, ಸಿರಿಧಾನ್ಯದ ವಿವಿಧ ರೀತಿಯ ಖಾದ್ಯಗಳ ತಯಾರಿಕೆ, ಬಳಕೆ ಮಾಡಲಾದ ಸಿರಿಧಾನ್ಯಗಳ ವಿವರ ಸೇರಿದಂತೆ ಖಾದ್ಯಗಳ ಸಂಪೂರ್ಣ ವಿವರಗಳೊಂದಿಗೆ ಸ್ಪರ್ಧಾಳುಗಳು ಉತ್ತಮವಾಗಿ ಖಾದ್ಯಗಳನ್ನು ಪ್ರದರ್ಶಿಸಿದ್ದಾರೆ. ಈ ರೀತಿಯ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಅತಿ ಮುಖ್ಯವಾಗಿದ್ದು, ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಅಭ್ಯರ್ಥಿಗಳು ಒಟ್ಟು 38 ಜನರು ಸ್ಪರ್ಧಿಸಿದ್ದಾರೆ.
ಮರೆತುಹೋದ ಖಾದ್ಯಗಳಲ್ಲಿ ಮಲೆನಾಡು ಭಾಗದಲ್ಲಿ ತಯಾರಿಸುವ ಬಾಣಂತಿಯರ ಖಾದ್ಯಗಳು ಎಲ್ಲರ ಗಮನ ಸೆಳೆದಿದ್ದು, ಜೋಳದ ಗುಗ್ಗರಿ, ನವಣೆ ಖಿಲ್ಸ, ಸಜ್ಜೆ ಮಾದಲಿ, ಸುಕ್ಕಿನುಂಡೆ, ಕಡುಬುಗಳು, ಗಾರ್ಗೆಯಂತಹ ಅನೇಕ ಮರೆತು ಹೋದ ಖಾದ್ಯಗಳನ್ನು ಸ್ಪರ್ಧಾಳುಗಳು ವಿಶೇಷವಾಗಿ ತಯಾರಿಸಿದ್ದಾರೆ. ಸ್ಪರ್ಧೆಯ ನಿಯಮದಂತೆ ತಿನಿಸುಗಳನ್ನು ಮನೆಯಲ್ಲಿಯೇ ತಯಾರಿಸಿ ಪಾಕ ಸ್ಪರ್ಧೆ ನಡೆಯುವ ಸ್ಥಳದಲ್ಲಿ ಪ್ರದರ್ಶಿಸಿದ್ದಾರೆ.

ಮರೆತು ಹೋದ ಖಾದ್ಯ, ಸಿರಿಧಾನ್ಯ ಸಿಹಿ ಮತ್ತು ಖಾರ ಮೂರು ವಿಭಾಗಗಳಲ್ಲಿ ಕ್ರಮವಾಗಿ ಪ್ರಥಮ ಸ್ಥಾನಕ್ಕೆ ರೂ.5000, ದ್ವಿತೀಯ ಸ್ಥಾನಕ್ಕೆ ರೂ.3000 ಹಾಗೂ ತೃತೀಯ ಸ್ಥಾನಕ್ಕೆ ರೂ.2000 ಬಹುಮಾನವನ್ನು ನೀಡಲಾಗುವುದು ಎಂದರು.
ಸ್ಪರ್ಧೆಯಲ್ಲಿ ಸಿರಿಧಾನ್ಯದ ಸಿಹಿ ಮಂಡಿಗೆ, ಹುರುಳಿ ಉಂಡೆ ಮತ್ತು ಸಾಮೆ ಅಡೆ ಪಾಯಸ, ಹುರುಳಿ ಲೇಹ್ಯಗಳು, ನವಣೆ ಕಡಬು, ಸಿರಿಧಾನ್ಯಗಳ ಮಫಿನ್, ಕೇಕ್ ಬಿಸ್ಕತ್ತು, ನವಣೆ ತೊಡೆದೇವು, ಸಿರಿಧಾನ್ಯ ಮಿಠಾಯಿಗಳು, ಕರಡಿ ಸೊಪ್ಪಿನ ಚಟ್ನಿ, ಬಾಳೆ ಮೂತಿ ಖಾರ(ಬಾಣಂತಿಯರಿಗೆ), ಪೊಂಗಲ, ಪರೋಟ, ಕಡುಬು, ಗಾರ್ಗೆ, ನವಧಾನ್ಯ ಮುದ್ದೆ, ಜೋಳ ಗುಗರಿ, ನವಣೆ ಖಿಲ್ಸ, ಸಿರಿಧಾನ್ಯ ಬರ್ಫಿ, ಮಾಲದಿ, ಸಿರಿಧಾನ್ಯ ಹೋಳಿಗೆ, ಉಂಡೆಗಳನ್ನು ತಯಾರಿಸಿ ಪ್ರದರ್ಶಿಸಿದ್ದು, ವೈವಿಧ್ಯಮಯವಾಗಿ ಅಲಂಕಾರಗೊಳಿಸಿ ಪ್ರದರ್ಶಿಸಿದ ರೀತಿ ಕಣ್ಮನ ಸೆಳೆದು, ಅಡುಗೆಯ ಘಮ ಬಾಯಲ್ಲಿ ನೀರೂರಿಸುವಂತಿತ್ತು.
ಕಾರ್ಯಕ್ರಮದಲ್ಲಿ ಉಪ ಕೃಷಿ ನಿದೇಶಕರಾದ ಮಂಜುಳಾ , ಲೋಕೇಶ್, ಸಹಾಯಕ ಕೃಷಿ ನಿರ್ದೇಶಕರಾದ ಕಾಶಿನಾಥ, ಸುನೀತಾ ಇತರೆ ಅಧಿಕಾರಿಗಳು, ಸ್ಪರ್ಧಿಗಳು ಪಾಲ್ಗೊಂಡಿದ್ದರು.