ಶಿವಮೊಗ್ಗ, ಜ.05:
ಶಿವಮೊಗ್ಗ ಅನುಪಿನಕಟ್ಟೆಯಲ್ಲಿರುವ ರಾಮಕೃಷ್ಣ ಆಂಗ್ಲ ಮಾಧ್ಯಮ ವಸತಿ ಗುರುಕುಲ ವಿದ್ಯಾಸಂಸ್ಥೆಯಲ್ಲಿ 2026-27ರ ಸಾಲಿನಲ್ಲಿ ವಿಜ್ಞಾನ ವಿಭಾಗದ ಪದವಿ ಪೂರ್ವ ಕಾಲೇಜುನ್ನು ಆರಂಭಿಸಲು ಸಕಲ ಸಿದ್ಧತೆ ನಡೆಸಲಾಗಿದ್ದು, ಕಟ್ಟಡ ಹಾಗೂ ಪಿಯು ಕಲಿಕೆಗೆ ಅಗತ್ಯದ ಎಲ್ಲಾ ಸೌಕರ್ಯಗಳನ್ನು ಸಿದ್ಧಪಡಿಸಲಾಗಿದೆ. ರಾಮಕೃಷ್ಣ ಗುರುಕುಲದಲ್ಲಿ ನಡೆದ ಜನ್ಮದಾತರ ಪಾದಪೂಜೆ ಸಮಾರಂಭದ ದಿವ್ಯಸಾನಿದ್ಯ ವಹಿಸಿದ್ದ ಆದಿಚುಂಚನಗಿರಿ ಮಹಾ ಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರು ರಾಮಕೃಷ್ಣ ವಿಜ್ಞಾನ ಪದವಿ ಪೂರ್ವ ಕಾಲೇಜು ಶಿರೋನಾಮೆಯನ್ನು ಉದ್ಘಾಟಿಸಿ, ಅತ್ಯಂತ ವ್ಯವಸ್ಥಿತವಾದ ಶಿಕ್ಷಣ ನೀಡುತ್ತಿರುವ ರಾಮಕೃಷ್ಣ ವಿದ್ಯಾಸಂಸ್ಥೆಯಲ್ಲಿ ಪಿಯು ವಿಭಾಗ ಆರಂಭಗೊಳ್ಳುತ್ತಿರುವುದು ಶ್ಲಾಘನೀಯ ಎಂದರು.

ಇಂದು ದೂರದ ಊರಿಗೆ ಹೋಗಿ ಮಕ್ಕಳು ಕಲಿಯುವ ಅಗತ್ಯವಿಲ್ಲ. ಉತ್ತಮ ಶಿಕ್ಷಣ ನಮ್ಮಲ್ಲೇ ಸಿಗುತ್ತಿದೆ. ಇಂದಿನ ಸ್ಪರ್ಧಾತ್ಮಕ ಶಿಕ್ಷಣ ಈ ಸಂಸ್ಥೆಯಿಂದ ದೊರೆಯುತ್ತದೆ ಎಂಬ ನಂಬಿಕೆ ಇದೆ. ಆ ನಿಟ್ಟಿನಲ್ಲಿ ವಿದ್ಯಾ ಸಂಸ್ಥೆ ಕೆಲಸ ಮಾಡಿದೆ ಎಂದರು.
ಪೋಷಕರು ಯಾವುದೇ ಅನುಮಾನ ಪಡದೇ ತಮ್ಮ ಮಕ್ಕಳನ್ನು ಇಲ್ಲಿನ ಪಿಯು ವಿಭಾಗಕ್ಕೆ ಸೇರಿಸುವಂತೆ ಅವರು ಪೋಷಕರಿಗೆ ಕರೆನೀಡಿದರು.
ಸಾವಿರಾರು ಮಕ್ಕಳನ್ನು ಹಾಗೂ ಅವರ ಪೋಷಕರನ್ನು ಒಂದೆಡೆ ಸೇರಿಸಿ ಜನ್ಮದಾತರ ಪಾದಪೂಜೆಯನ್ನು ಅತ್ಯಂತ ಯಶಸ್ವಿಯಾಗಿ ಕಳೆದ 19 ವರ್ಷಗಳಿಂದ ನಡೆಸುತ್ತಾ ಬಂದಿರುವ ಈ ಸಂಸ್ಥೆ ಆಧ್ಯಾತ್ಮಿಕ ಹಾಗೂ ವೈಜ್ಞಾನಿಕ ನಿಲುವುಗಳ ಜೊತೆಗೆ ಶಿಕ್ಷಣಕ್ಕೆ ಅತಿ ಹೆಚ್ಚಿನ ಆದ್ಯತೆಯನ್ನು ನೀಡಿರುವುದು ಶ್ಲಾಘನೀಯ ಎಂದರು.

ಇಲ್ಲಿನ ಕಲಿಕೆಯ ಮಕ್ಕಳು ಉತ್ತಮ ಭವಿಷ್ಯವನ್ನು ಪಡೆಯುತ್ತಾರೆ ಎಂದು ಅದಿಚುಂಚನಗಿರಿ ಶ್ರೀಗಳು ತಿಳಿಸಿದರು.