ಶಿವಮೊಗ್ಗ : ಶಿವಮೊಗ್ಗ ನಗರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ನಗರದಲ್ಲಿ ದೌರ್ಜನ್ಯ, ದರೋಡೆ, ಕೊಲೆ ಯತ್ನಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇತ್ತೀಚೆಗೆ ಆರ್ಎಂಎಲ್ ನಗರದಲ್ಲಿ ಹರೀಶ್ ಎಂಬುವವರ ಮೇಲೆ ಮುಸಲ್ಮಾನ್ ಗೂಂಡಾಗಳು ಮಾರಣಾಂತಿಕ ಹಲ್ಲೆ ನಡೆಸಿದ್ದು ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ನ.20ರ ಸಂಜೆಯೊಳಗೆ ಬಂಧಿಸದಿದ್ದರೆ ನ.21ರಂದು ಎಸ್ಪಿ ಕಛೇರಿ ಮುಂದೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರ ನೇತೃತ್ವದಲ್ಲಿ ರಾಷ್ಟ್ರಭಕ್ತರ ಬಳಗ ಧರಣಿ ನಡೆಸಲಿದೆ ಎಂದು ಬಳಗದ ಪ್ರಮುಖರಾದ ಕೆ.ಈ. ಕಾಂತೇಶ್ ಹೇಳಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶನಿವಾರ ರಾತ್ರಿ 11ಗಂಟೆಗೆ ಆರ್ಎಂಎಲ್ ನಗರದಲ್ಲಿ ಹರೀಶ್ ಎಂಬ ವ್ಯಕ್ತಿಯ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆಮಾಡಿದ್ದು ಹಲ್ಲೆಗೂ ಮುನ್ನ ಯಾವ ಧರ್ಮ ಎಂದು ಕೇಳಿದ್ದಾರೆ. ಈ ಘಟನೆ ಪಹಲ್ಗಾಮ್ ಉಗ್ರರ ಘಟನೆಯನ್ನು ನೆನಪಿಸುತ್ತದೆ. ಸ್ಥಳೀಯ ಹಿಂದೂಗಳು ಭಯದ ವಾತಾವರಣದಲ್ಲಿ ಜೀವಿಸುತ್ತಿದ್ದಾರೆ. ಘಟನೆ ನಡೆದು ಮೂರು ದಿನಗಳಾದರೂ ಶಿವಮೊಗ್ಗ ಪೊಲೀಸ್ ಕಾರಣರಾದವರನ್ನು ಬಂಧಿಸಿಲ್ಲ. ವೀಡಿಯೋ ಸಾಕ್ಷ್ಯಿ ನೀಡಿದ್ದರೂ ನಿರ್ಲಕ್ಷ್ಯಧೋರಣೆ ತಳೆದಿದ್ದಾರೆ.

ಮುಸ್ಲಿಂ ಬಾಹುಳ್ಯ ಪ್ರದೇಶದಲ್ಲಿ ಹಿಂದೂಗಳು ವಾಸಿಸುವುದೇ ಕಷ್ಟವಾಗಿದೆ. ಗೃಹಸಚಿವರಿಗೆ ಏನು ಕೇಳಿದರೂ ಗೊತ್ತಿಲ್ಲ ಎನ್ನುತ್ತಾರೆ. ಕೂಡಲೇ ಅವರು ನಗರಕ್ಕೆ ಭೇಟಿನೀಡಿ ಶಾಂತಿ, ಸುವ್ಯವಸ್ಥೆ ಪರಿಶೀಲಿಸಿ ಕಟ್ಟುನಿಟ್ಟಿನ ಕ್ರಮಕ್ಕೆ ಪೊಲೀಸ್ ಇಲಾಖೆಗೆ ಸೂಚನೆಯನ್ನು ನೀಡಬೇಕು. ನಗರದೆಲ್ಲೆಡೆ ಗಾಂಜಾ, ಓಸಿ, ಹೆಚ್ಚಾಗಿದೆ. ಅಮಾಯಕರ ಮೇಲೆ ವಿನಾಕಾರಣ ಹಲ್ಲೆಮಾಡಿ, ಲೂಟಿಮಾಡುವ ಕಿಡಿಗೇಡಿಗಳು ಹೆಚ್ಚಾಗಿದ್ದು ಜಿಲ್ಲೆಯಲ್ಲಿ ಆಡಳಿತ ಕುಸಿದಿದೆ. ಹಿಂದೂ ತಾಯಂದಿರುವ ಸಂಜೆ 6 ಗಂಟೆಯ ಮೇಲೆ ಆರ್ಎಂಎಲ್ ನಗರದಲ್ಲಿ ಓಡಾಡುವುದೇ ಕಷ್ಟವೆಂದು ಅಳಲು ತೋಡುತ್ತಿದ್ದಾರೆ. ಮೊನ್ನೆಯ ಘಟನೆ ದೂರು ನೀಡಿದ ನಂತರ ತಡವಾಗಿ ಎಫ್ಐಆರ್ ದಾಖಲಿಸಿದ್ದು, ಅಮಾಯಕ ಹಿಂದೂಗಳನ್ನು ಕೂಡ ಘಟನೆಯಲ್ಲಿ ಸೇರಿಸುವ ಕೆಲಸ ಪೊಲೀಸ್ ಇಲಾಖೆ ಮಾಡುತ್ತಿದೆ. ನೈಜ ಆರೋಪಿಗಳನ್ನು ನಾಳೆ ಸಂಜೆಯೊಳಗೆ ಬಂಧಿಸದಿದ್ದರೆ ಎಸ್ಪಿ ಕಛೇರಿ ಮುಂದೆ ರಾಷ್ಟ್ರಭಕ್ತರ ಬಳಗ ನ.21ರಂದು ಧರಣಿ ಮಾಡುತ್ತದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಾತ್ರೆ ಮಂಜಣ್ಣ, ಜಾದವ್, ರವಿ, ರಾಚಯ್ಯ, ಹರಿಗೆ ಶಿವು, ಬಾಲು, ಕುಬೇರಪ್ಪ, ಜಗದೀಶ್, ಶಶಿಕಲಾ, ರಾಜೇಶ್ವರಿ, ಅನಿತಾ, ಶಿವಾಜಿ, ಮುರುಗೇಶ್, ಟಾಕ್ರಾನಾಯ್ಕ, ಚಿದಾನಂದ ಮತ್ತಿತರರಿದ್ದರು.