ರಾಕೇಶ್ ಸೋಮಿನಕೊಪ್ಪ
ಶಿವಮೊಗ್ಗ ಜಿಲ್ಲೆಯ ಪೊಲೀಸ್ ಇಲಾಖೆ ’ಸದಾ ಜನರ ಸೇವೆಗೆ’ ಹಾಗೂ ಜನರಿಗೆ ಅರಿವು ಮೂಡಿಸುವ ಮೂಲಕ ’ಜನಸ್ನೇಹಿ ಪೊಲೀಸ್ ಇಲಾಖೆ’ ಯನ್ನಾಗಿ ಮಾಡಲು ಹೊರಟಿದೆ. ಸಂಚಾರಿ ಹಾಗೂ ನಮ್ಮ ನಡುವಿನ ಹಣಕಳೆದುಕೊಳ್ಳುವ ಮೋಸದ ಜಾಲತಾಣಗಳ ಮಾಹಿತಿ ನೀಡುವ ಸೈಬರ್ ಕ್ರೈಂ ವಿಷಯನ್ನು ಜನರಿಗೆ ಹೇಳುವ ಮೂಲಕ ಜಾಗೃತಿ ಮೂಡಿಸುತ್ತಿದೆ.
ಶಿವಮೊಗ್ಗ ಟ್ರಾಫಿಕ್ ಪೊಲೀಸರು ಒಂದಲ್ಲ ಒಂದು ಸುದ್ದಿಯಲ್ಲಿರುವ ಜೊತೆಗೆ ಶಿವಮೊಗ್ಗದಲ್ಲಿ ಟ್ರಾಫಿಕ್ನಲ್ಲಿ ಹೊಸ ಹೊಸ ಬದಲಾವಣೆಗಳನ್ನು ತರುವ ಜೊತೆಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಮುಂದಾಗಿರುವುದು ಸ್ವಾಗತಾರ್ಹ.
ಇದೇ ಮೊದಲ ಬಾರಿಗೆ ಪೊಲೀಸ್ ಇಲಾಖೆಯಿಂದ ಕೃಷಿ ಮೇಳದಲ್ಲಿ ಮಳಿಗೆಯನ್ನು ತೆರೆದು ಮೇಳಕ್ಕೆ ಬರುವ ರೈತರಿಗೆ, ಸಾರ್ವಜನಿಕರಿಗೆ, ಮಕ್ಕಳಿಗೆ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಉತ್ತಮ ಸಮರಿಟನ್ ಪ್ರಶಸ್ತಿ ನೀಡುವ ಯೋಜನೆಯ ಬಗ್ಗೆ ತಿಳಿಸಲಾಗುತ್ತಿದೆ.
-ಮಂಜುನಾಥ್, ಎಎಸ್ಐ, ಟ್ರಾಫಿಕ್
ಶಿವಮೊಗ್ಗದಲ್ಲಿ ನಾಲ್ಕು ದಿನಗಳವರೆಗೆ ನಡೆಯುತ್ತಿರುವ ’ಕೃಷಿಮೇಳ’ದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ ಟ್ರಾಫಿಕ್ ಪೊಲೀಸರಿಂದ ಇದೇ ಮೊದಲ ಬಾರಿಗೆ ಸ್ಟಾಲ್ವೊಂದನ್ನು ತೆರೆದು ಟ್ರಾಫಿಕ್ ನಿಯಮಗಳನ್ನು ರೈತರಿಗೆ, ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಕರಪತ್ರಗಳನ್ನು ಹಂಚುವ ಮೂಲಕ ಸಂಚಾರ ನಿಯಮಗಳ ಬಗ್ಗೆ ಅರಿವು ಮಾಡಿಸಲಾಗುತ್ತಿದೆ.
’ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ನಾಣುಡಿಯಂತೆ ಮಕ್ಕಳಿಗೆ ಚಿಕ್ಕವಯಸ್ಸಿನಲ್ಲಿಯೇ ಟ್ರಾಫಿಕ್ ನಿಯಮಗಳ ಅರಿವು ಮೂಡಿಸಿದರೆ ಶಾಲೆಗೆ ಹೋಗುವಾಗ, ಹೊರಗೆ ಆಟವಾಡುವಾಗ ಅಥವಾ ರಸ್ತೆ ದಾಟುವ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಸಂಚಾರ ನಿಯಮಗಳು ಮತ್ತು ಫಲಕಗಳ ಕುರಿತು ಹಾಗೂ ರಸ್ತೆ ಸುರಕ್ಷತಾ ನಿಯಮಗಳನ್ನು ಅವರಿಗೆ ಕಲಿಸುವುದು ಬುದ್ಧಿವಂತವಾಗಿದೆ. ಈ ಕೆಲಸವನ್ನು ಶಿವಮೊಗ್ಗ ಟ್ರಾಫಿಕ್ ಪೊಲೀಸರು ಮಾಡುತ್ತಿರುವುದು ಸ್ವಾಗತಾರ್ಹ.

ಮೇಳಕ್ಕೆ ಭೇಟಿ ನೀಡುವ ಸಾರ್ವಜನಿಕರಿಗೆ, ರೈತರಿಗೆ, ಮಕ್ಕಳಿಗೆ ಸಂಚಾರಿ ಪೊಲೀಸರು ಉಪಯೋಗಿಸುವ ಸಂಚಾರಿ ನಿಯಂತ್ರಣ ಉಪಕರಣಗಳ ಬಗ್ಗೆ ಮಹಿತಿ ನೀಡುವ ಜೊತೆಗೆ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಮತ್ತು ಕಾರು ಚಾಲಕರು ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು. ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸಬೇಡಿ, ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಕಾನೂನುಬಾಹಿರ ಮತ್ತು ಅಪಾಯಕಾರಿ, ದ್ವಿಚಕ್ರ ವಾಹನದಲ್ಲಿ ಇಬ್ಬರಿಗಿಂತ ಹೆಚ್ಚು ಜನರು ಪ್ರಯಾಣಿಸಬಾರದು, ಅಪ್ರಾಪ್ತರು ವಾಹನ ಚಾಲನೆ ಮಾಡುವುದು ಕಡ್ಡಾಯವಾಗಿ ನಿಷೇಧ ಸೇರಿದಂತೆ ಹಲವು ರಸ್ತೆ ಸುರಕ್ಷತಾ ನಿಯಮಗಳನ್ನು ಮೂಡಿಸುತ್ತಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.


ಶಿವಮೊಗ್ಗ ಸಿ.ಇ.ಎನ್. ಮತ್ತು ಅಪರಾಧ ಪೊಲೀಸ್ ಠಾಣೆಯ ವಿರೂಪಾಕ್ಷಪ್ಪ ಅವರು ಮಕ್ಕಳಿಗೆ ಸೈಬರ್ ಕ್ರೈಂ ಕುರಿತು ಅರಿವು ಮೂಡಿಸುತ್ತಿರುವುದು.
ಉತ್ತಮ ಸಮರಿಟನ್ಗೆ ಪ್ರಶಸ್ತಿ ನೀಡುವ ಯೋಜನೆ ಬಗ್ಗೆ ಮಾಹಿತಿ
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು “ಮೋಟಾರು ವಾಹನದಲ್ಲಿ ಸಂಭವಿಸಿದ ಮಾರಣಾಂತಿಕ ಅಪಘಾತದ ಸಂತ್ರಸ್ತರ ಜೀವವನ್ನು ಉಳಿಸಿದ ಉತ್ತಮ ಸಮರಿಟನ್ಗೆ ಪ್ರಶಸ್ತಿ ಪುರಸ್ಕಾರ” ಎಂಬ ಯೋಜನೆಯನ್ನು ಪ್ರಾರಂಭಿಸಿದೆ ಮತ್ತು ಅಪಘಾತದ ಸುವರ್ಣ ಗಂಟೆಯೊಳಗೆ ಆಸ್ಪತ್ರೆ /ಟ್ರಾಮಾ ಕೇರ್ ಸೆಂಟರ್ಗೆ ಧಾವಿಸಿ ವೈದ್ಯಕೀಯ ಚಿಕಿತ್ಸೆ ನೀಡಲು ಸಹಾಯ ಮಾಡುವುದು, ಅವರ ನೈತಿಕತೆಯನ್ನು ಹೆಚ್ಚಿಸುವುದು ಮತ್ತು ರಸ್ತೆ ಅಪಘಾತಕ್ಕೊಳಗಾದವರ ಜೀವಗಳನ್ನು ಉಳಿಸಲು ಇತರರನ್ನು ಪ್ರೇರೇಪಿಸುವುದು ಮತ್ತು ಪ್ರೇರೇಪಿಸುವವರಿಗೆ ಉತ್ತಮ ಸಮರಿಟನ್ಗೆ ಪ್ರಶಸ್ತಿ ನೀಡುವ ಯೋಜನೆ ಜಾರಿಗೆ ತಂದಿದ್ದು, ಇದರ ಬಗ್ಗೆ ಶಿವಮೊಗ್ಗ ಟ್ರಾಫಿಕ್ ಪೊಲೀಸರಿಂದ ಸಾರ್ವಜನಿಕರಿಗೆ ಅರಿವು ಮೂಡಿಲಾಗುತ್ತಿದೆ.