ಶಿವಮೊಗ್ಗ : ನಗರದಲ್ಲಿ ಇತ್ತೀಚೆಗೆ ನಡೆದ ಅಮ್ಜದ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರೌಡಿಶೀಟರ್ ಮೇಲೆ ಪೊಲೀಸರು ಗುಂಡು ಹಾರಿಸಿದ ಘಟನೆ ನಡೆದಿದೆ.
ಆರೋಪಿಯನ್ನು ಬಂಧಿಸಲು ತೆರಳಿದ್ದಾಗ ಆತ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಕಾರಣ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ.

ರೌಡಿಶೀಟರ್ ಅಕ್ಬರ್ (೨೧) ಕಾಲಿಗೆ ಗುಂಡು ತಗುಲಿದ್ದು, ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿವಮೊಗ್ಗ ನಗರ ಹೊರವಲಯದ ಪುರಲೆ ಬಳಿ ಈ ಘಟನೆ ನಡೆದಿದೆ. ನ್ಯೂಮಂಡ್ಲಿಯ ನಿವಾಸಿ ಅಕ್ಬರ್ ಮೇಲೆ ಈಗಾಗಲೇ ನಾಲ್ಕಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಅಮ್ಜದ್ ಕೊಲೆ ಪ್ರಕರಣದಲ್ಲಿ ಸಹ ಆತ ಆರೋಪಿಯಾಗಿದ್ದಾನೆ.
ಪೊಲೀಸರ ಮೇಲೆಯೇ ಹಲ್ಲೆ ಯತ್ನ ಅಮ್ಜದ್ ಕೊಲೆ ಆರೋಪಿ ಅಕ್ಬರ್ನನ್ನು ಬಂಧಿಸಲು ದೊಡ್ಡಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿದ್ದರು. ದೊಡ್ಡಪೇಟೆ ಠಾಣೆ ಪಿಎಸ್ಐ ಮಂಜುನಾಥ್ ಅವರು ಅಕ್ಬರ್ಗೆ ಶರಣಾಗುವಂತೆ ಸೂಚಿಸಿದ್ದಾರೆ. ಈ ವೇಳೆ ಅಕ್ಬರ್ ಪೊಲೀಸ್ ಸಿಬ್ಬಂದಿ ಚಂದ್ರನಾಯ್ಕ್ ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ ಎನ್ನಲಾಗಿದೆ.

ಪಿಎಸ್ಐ ಮಂಜುನಾಥ್ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗತಿಗೆ ಸೂಚಿಸಿದ್ದರು. ಅವರ ಮಾತು ಧಿಕ್ಕರಿಸಿದ ಅಕ್ಬರ್ ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ತಿಳಿದು ಬಂದಿದೆ.

ಗಾಯಗೊಂಡ ರೌಡಿಶೀಟರ್ ಅಕ್ಬರ್ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ ಸಿಬ್ಬಂದಿ ಚಂದ್ರನಾಯ್ಕ್ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಎನ್.ಹೆಚ್. ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.