ರೋಟರಿ ಉತ್ತರ 3182 ಹಾಗೂ ಅಂತಾರಾಷ್ಟ್ರೀಯ ರೋಟರಿ ಮೊಡೆಷ್ಟೋ ಯುನೈಟೆಡ್ ಸ್ಟೇಟ್ಸ್ ನ ಆಶ್ರಯದಲ್ಲಿ ರೋಟರಿ ಕ್ಲಬ್ ಕೈಗೊಂಡ ತುಂಗಾ ಮೇಲ್ದಡೆ ಜೀವ ವೈವಿಧ್ಯ ಅರಣ್ಯ ಯೋಜನೆಯಲ್ಲಿ ಅಧಿಕಾರಿಗಳನ್ನು ತರಬೇತಿ ನೀಡುವ ಒಂದು ದಿನದ ಕಾರ್ಯಾಗಾರವನ್ನು ರೋಟರಿ ಬ್ಲಡ್ ಬ್ಯಾಂಕ್ ನಲ್ಲಿ ಏರ್ಪಡಿಸಲಾಗಿದ್ದು, ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ

ಯೋಜನೆಯ ಸಂಯೋಜನಾಧಿಕಾರಿಯಾದ ಡಾ. ಶುಭಾ ಮರವಂತೆಯವರು, ” ಪಶ್ಚಿಮಘಟ್ಟಗಳ ಸಮೃದ್ಧಿ ಜೀವ ವೈವಿಧ್ಯತೆಯ ಕಕ್ಷೆ ನಮ್ಮ ಶಿವಮೊಗ್ಗ ಜಿಲ್ಲೆಯು ಪರಿಸರ ಸಂರಕ್ಷಣೆಯ ವಿಷಯದಲ್ಲಿ ತುಂಬಾ ಅಪಾಯದಲ್ಲಿದೆ. ನಿರಂತರ ಕಾಡು ನಾಶದಿಂದಾಗಿ ಪರಿಸದ ಜೀವ ಸಂಕುಲಗಳು ಅಳಿವಿನ ಅಂಚಿಗೆ ತಲುಪಿವೆ. ಮನುಷ್ಯನ ಸ್ವಾರ್ಥ, ದುರಾಸೆಗಳಿಂದಾಗಿ ಅತಿಯಾದ ಹವಾಮಾನ ವೈಪರಿತ್ಯಗಳನ್ನು

ಎದುರಿಸುತ್ತಿದ್ದೇವೆ. ಇಂದು ಪರಿಸರ ಉಳಿಸಿಕೊಳ್ಳುವ ಬಹುದೊಡ್ಡ ಹೊಣೆಗಾರಿಕೆಗೆ ನಾವು ಮುಂದಾಗಬೇಕಿದೆ. ಅದಕ್ಕಾಗಿ ನಮಗೆ ಪ್ರಬಲ ಇಚ್ಛಾ ಶಕ್ತಿ ಬೇಕಾಗುತ್ತದೆ ” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಉತ್ತರದ ಅಧ್ಯಕ್ಷರಾದ ಶ್ರೀ ಆರ್.ಬಸವರಾಜಪ್ಪನವರು ” ತುಂಗಾ ಮೇಲ್ದಡೆ ಯೋಜನೆಯ ಪರಿಸರವನ್ನು ಜೀವ ವೈವಿಧ್ಯತೆಯ ತಾಣವಾಗಿ ರೂಪಿಸಲು ನಾವೆಲ್ಲರೂ ಶ್ರಮಿಸಬೇಕಾಗಿದೆ. ರೋಟರಿ ಹಾಗು ಇತರ ಪರಿಸರಾಸಕ್ತರು ಮತ್ತು ಕುವೆಂಪು ವಿವಿ ಯ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿಗಳು ಹಾಗೂ ಸ್ವಯಂಸೇವಕರ ಸಹಯೋಗದಲ್ಲಿ ಕಾರ್ಯಯೋಜನೆ ರೂಪಿಸಲಾಗುತ್ತಿದೆ ” ಎಂದರು.

ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಕುವೆಂಪು ವಿವಿಯ ಪರಿಸರ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊ. ಯೋಗೀಂದ್ರ ಅವರು ಪರಿಸರ ಸಂರಚನೆಯ ಮೂಲ ಪರಿಕಲ್ಪನೆಗಳನ್ನು ವಿವರಿಸಿದರು. ಉಪ ಅರಣ್ಯಾಧಿಕಾರಿಗಳಾದ ಶ್ರೀ ಶರತ್ ಜೀವವೈವಿಧ್ಯತೆ ಹಾಗೂ ಸಂರಕ್ಷಣೆಯ ಕುರಿತು ಮಾತನಾಡಿದರು. ಕೃಷಿ ವಿವಿಯ ಪ್ರಾಧ್ಯಾಪಕರಾದ ಡಾ. ಉಲ್ಲಾಸ್ ನವಿಲೆಯವರು ಕಳೆ ನಿರ್ವಹಣೆ ಕುರಿತು ಮಾತನಾಡಿದರು.

ರೋಟರಿ ಸಹ ಗವರ್ನರ್ ಆದ ರೊ.ಕೆ. ಪಿ. ಶೆಟ್ಟಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ರೊ. ವಿಜಯ ಕುಮಾರ್, ರೊ. ಹರ್ಷ ಕಾಮತ್, ರೊ. ವಾರಿಜ ಜಗದೀಶ್ ಮೊದಲಾದವರು ಉಪಸ್ಥಿತರಿದ್ದರು. ರೊ. ಜಗದೀಶ ಸರ್ಜಾ ಎಲ್ಲರನ್ನೂ ಸ್ವಾಗತಿಸಿದರು. ರೊ. ಪ್ರೊ.ಎ. ಎಸ್. ಚಂದ್ರಶೇಖರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರೊ.ರವೀಂದ್ರ ಐತಾಳ್ ಕಾರ್ಯಕ್ರಮ ನಿರೂಸಿದರು. ರೊ. ಆನಂದಮೂರ್ತಿ ವಂದನಾರ್ಪಣೆ ಮಾಡಿದರು. ಮಾಜಿ ಅಧ್ಯಕ್ಷರುಗಳಾದ ಎಚ್ ಎಂ ಎಸ್ ರಾವ್. ವೀರಣ್ಣ ಹುಗ್ಗಿ. ಹಾಗೂ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು