ಶಿವಮೊಗ್ಗ, ಸೆ.12:
ಶಿವಮೊಗ್ಗದಾದ್ಯಂತ ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು, ಕಳೆದ 8 ತಿಂಗಳಲ್ಲಿ 9 ಕೋಟಿಗಿಂತ ಅಧಿಕ ಹಣವನ್ನು ಕಳೆದುಕೊಂಡ 86 ಪ್ರಕರಣಗಳನ್ನು ತನಿಖೆ ಮಾಡುತ್ತಿದ್ದೇವೆ. ಆದರೆ ಬಹುತೇಕ ದೂರು ನೋಂದಣಿ ವಿಳಂಬದಿಂದಾಗಿ ರೂ. ೫೦ ಲಕ್ಷಗಳನ್ನು ಮಾತ್ರ ರಿಕವರಿ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಸಬ್ಇನ್ಸ್ಪೆಕ್ಟರ್ ತಿಳಿಸಿದರು.
ಅವರು ಬಜಾಜ್ ಫೈನಾನ್ಸ್ ಲಿಮಿಟೆಡ್ ವತಿಯಿಂದ ಸೂರ್ಯ ಕಂಫರ್ಟ್ನಲ್ಲಿ ಆಯೋಜಿಸಲಾಗಿದ್ದ ’ನಾಕೌಟ್ ಡಿಜಿಟಲ್ ಫ್ರಾಡ್ ಸೈಬರ್

ವಂಚನೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, “ಕಳೆದ ವರ್ಷ144 ಪ್ರಕರಣಗಳು ದಾಖಲಾಗಿದ್ದು, ಜನರು 11 ಕೋಟಿಗೂ ಹೆಚ್ಚು ಹಣ ಕಳೆದುಕೊಂಡಿದ್ದಾರೆ. ಕೇವಲ 2 ಕೋಟಿ ಮೊತ್ತದ ಹಣ ಮಾತ್ರ ಹಿಂಪಡೆಯಲು ಸಾಧ್ಯವಾಗಿದೆ ಎಂದರು.

ವಂಚನೆಯ ನಂತರದ ಮೊದಲ 24 ಗಂಟೆಗಳನ್ನು ಗೋಲ್ಡನ್ ಸಮಯ ಎಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಅಪರಾಧಿಯನ್ನು ಪತ್ತೆಹಚ್ಚುವ ಮತ್ತು ಕಳೆದುಹೋದ ಹಣವನ್ನು ಮರುಪಡೆಯುವ ಸಾಧ್ಯತೆಗಳು ಹೆಚ್ಚಿರುತ್ತವೆ. ನಾಗರೀಕರು ಮುಂದೆ ಬಂದು, ದೂರುಗಳನ್ನು ತಕ್ಷಣ ನೋಂದಾಯಿಸಿಕೊಳ್ಳಬೇಕು ಮತ್ತು ಹೆಚ್ಚುತ್ತಿರುವ ಸೈಬರ್ ಅಪರಾಧದ ಬೆದರಿಕೆಯನ್ನು ಎದುರಿಸಲು ನಮ್ಮ ಸಹಾಯವನ್ನು ಪಡೆಯಬೇಕು ಎಶಂದು ಹೇಳಿದರು.

ಬಿಎಫ್ಎಲ್ನ ವಕ್ತಾರ ವೆಂಕಟೇಶನ್ ವಿ.ಎಸ್. ಮಾತನಾಡಿ, “ನಮ್ಮ ಗ್ರಾಹಕರ ಆರ್ಥಿಕ ಸುರಕ್ಷತೆ ನಮಗೆ ಅತ್ಯಂತ ಮುಖ್ಯವಾಗಿದೆ. ಪ್ರತಿಯೊಬ್ಬರೂ ಸೈಬರ್ ವಂಚನೆಗಳಿಂದ ಸುರಕ್ಷಿತವಾಗಿರಲು ಜಾಗೃತಿ ಮೂಡಿಸುತಿದ್ದೇವೆ. ದೇಶದ ೧೦೦ ಪ್ರಮುಖ ನಗರಗಳು ಮತ್ತು ಪಟ್ಟಣಗಳಲ್ಲಿ ಸಂವಾದಾತ್ಮಕ ಕಾರ್ಯಾಗಾರಗಳು, ಡಿಜಿಟಲ್ ಜಾಗೃತಿ ಅಭಿಯಾನಗಳು ಮತ್ತು ಸಮುದಾಯ ಸಂಪರ್ಕ ಕಾರ್ಯಕ್ರಮಗಳ ಸರಣಿಯನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸೈಬರ್ ಅಪರಾಧ ಪೊಲೀಸ್ ಠಾಣೆಯ ಸಹಾಯಕ ತನಿಖಾಧಿಕಾರಿ ರವಿ ಕುಮಾರ್ ಜಿ.ಎನ್. ನಿವೃತ್ತ ಪೊಲೀಸ್ ಉಪ ವರಿಷ್ಠಾಧಿಕಾರಿ ಎಂ.ಎನ್ ರುದ್ರಪ್ಪ ಸೇರಿದಂತೆ ಮತ್ತಿರರಿದ್ದರು.