ಶಿವಮೊಗ್ಗ : ನಿಮ್ಮ ಭವಿಷ್ಯದ ಶಿಲ್ಪಿಗಳು ನೀವೇ ಆಗಬೇಕು ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಪುರಸ್ಕೃತ ಆರುಂಡಿ ಶ್ರೀನಿವಾಸ ಮೂರ್ತಿ ಹೇಳಿದರು.
ಅವರು ಶನಿವಾರ ಎಟಿಎನ್ಸಿ (ಆಚಾರ್ಯ ತುಳಸಿ ವಾಣಿಜ್ಯ ಕಾಲೇಜು)ಯ ಚಂದನ ಸಭಾಂಗಣದಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣ ಬಹಳ ಮಹತ್ವವಾದದ್ದು. ಎಲ್ಲಾ ಇಷ್ಟ-ಕಷ್ಟಗಳನ್ನು ದಾಟಿ, ಈಗ ಜವಾಬ್ದಾರಿ ಸ್ಥಾನದಲ್ಲಿ ವ್ಯಾಸಂಗ ಮಾಡುತ್ತಿರುವಿರಿ. ಅಂಕಗಳನ್ನು ಪಡೆಯುವುದಷ್ಟೇ ಮುಖ್ಯವಲ್ಲ, ಇದರ ಜೊತೆಗೆ ಮಾನವೀಯತೆ, ಅಂತಃಕರಣ ಬೆಳೆಸಿಕೊಳ್ಳಬೇಕು.

ನೀವು ಪಡೆದ ಶಿಕ್ಷಣ, ನೊಂದವರ ಕಣ್ಣೀರು ಒರೆಸುವಂತಾಗಬೇಕು. ಮಿತಿಮೀರಿದ ಆಕಾಂಕ್ಷೆಗಳು, ಅನಗತ್ಯ ಒತ್ತಡಗಳನ್ನು ಸೃಷ್ಟಿಸುತ್ತಿವೆ. ಅವುಗಳಿಂದ ಹೊರಬನ್ನಿ, ಭ್ರಮೆಗಳನ್ನು ಕಳಚಿಡಿ, ನಿಮ್ಮ ಭವಿಷ್ಯದ ಶಿಲ್ಪಿಗಳು ನೀವೇ ಆಗಿರುವಿರಿ ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ಜಿ. ವಿಜಯಕುಮಾರ್, ಎನ್.ಎಸ್.ಎಸ್. ವಿದ್ಯಾರ್ಥಿಗಳಲ್ಲಿ ನಾಯಕತ್ವ, ಸಹೋದರತೆ, ಮತ್ತು ಸಾಮರಸ್ಯತೆಯನ್ನು ಮೂಡಿಸುತ್ತದೆ. ಪಠ್ಯಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ರೋಟರಿಪೂರ್ವ ಕಾರ್ಯದರ್ಶಿ ಹಾಗೂ ನಿವೃತ್ತ ಪ್ರಾಂಶುಪಾಲ ಪ್ರೋ. ಧನಂಜಯ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಪ್ರಾಂಶುಪಾಲೆ ಪ್ರೊ. ಪಿ.ಆರ್. ಮಮತಾ ವಹಿಸಿದ್ದರು. ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ಸಂಚಾಲಕ ಪ್ರೊ. ಕೆ.ಎಂ. ನಾಗರಾಜ್, ಐಕ್ಯೂಎಸಿ ವಿಭಾಗದ ಪ್ರೊ. ಮಂಜುನಾಥ್ ಎನ್., ಪ್ರೊ. ಸೌರ್ಪಣಿಕಾ ಉಮೇಶ್, ಪ್ರೊ. ನವೀನ್ ತೇಲ್ಕರ್, ಪ್ರೊ. ಶೃತಿ ಕೆ., ಪ್ರೊ. ಶ್ರೀಲಲತಾ ಎಂ.ಕೆ. ಸೇರಿದಂತೆ ಹಲವರಿದ್ದರು.