ಶಿವಮೊಗ್ಗ : ಬಿಜೆಪಿ ಶಾಸಕರನ್ನು ಆರು ತಿಂಗಳ ಕಾಲ ಅಮಾನತ್ತು ಮಾಡಿರುವುದೇ ಅಸಂವಿಧಾನ. ಇದು 348ರ ನಡುವಳಿಕೆಯ ಪ್ರಕಾರ ಸರಿಯಿಲ್ಲ ಎಂದು ಬಿಜೆಪಿ ಮಾಜಿ ಶಾಸಕ ಆರ್.ಕೆ. ಸಿದ್ದರಾಮಣ್ಣ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾಚ್ 21ರಂದು ಸದನ ನಡೆಯುವ ವೇಳೆ ಸದನಕ್ಕೆ ಅಗೌರವ ತೋರಿದ್ದಾರೆ ಎಂದು ಬಿಜೆಪಿಯ 18 ಶಾಸಕರನ್ನು ಆರು ತಿಂಗಳ ಕಾಲ ಅಮಾನತ್ತು ಮಾಡಲಾಗಿತ್ತು. ಸದನದ ನಿರ್ಣಯದಂತೆ ಅಮಾನತ್ತು ಮಾಡಿದ್ದರೂ ಕೂಡ ಇದರ ತೀರ್ಪನ್ನು ನೀಡಿರುವುದು ಸದನದ ಅಧ್ಯಕ್ಷರೇ ಆಗಿದ್ದಾರೆ. ಹಾಗಾಗಿ ಅಮಾನತ್ತು ವಾಪಾಸ್ಸು ಪಡೆಯುವ ಅಧಿಕಾರ ಕೂಡ ಅವರಿಗಿದೆ ಎಂದರು.

ಅಷ್ಟಕ್ಕೂ 348ರ ನಿಯಮಾವಳಿಯ ಪ್ರಕಾರ ಅವರನ್ನು ಆರು ತಿಂಗಳು ಅಮಾನತ್ತು ಇಡಲು ಬರುವುದಿಲ್ಲ. ಹೆಚ್ಚೆಂದರೆ ಆ ಸಮಯದ ಅಧಿವೇಶನ ಮುಕ್ತಾಯದ ವರೆಗೂ ಮಾತ್ರ ಅಮಾನತ್ತಿನಲ್ಲಿಡಬಹುದಾಗಿದೆ. ಆದರೆ ಸಭಾಧ್ಯಕ್ಷರು ಹಾಗೆ ಮಾಡದೆ, ಅವರನ್ನು ಆರು ತಿಂಗಳ ಕಾಲ ಅಮಾನತ್ತಿನಲ್ಲಿಟ್ಟಿರುವುದು ಅಸಂವಿಧಾನಿಕವಾಗಿದೆ ಎಂದರು.

ಇಷ್ಟರ ಮೇಲೆ ಅವರನ್ನು ಮೇ25ರಂದು ಸಭಾಧ್ಯಕ್ಷರು ಸಮಿತಿಯ ತೀರ್ಮಾನದಂತೆ ಅಮಾನತ್ತು ನಿರ್ಣಯವನ್ನು ವಾಪಾಸ್ಸು ತೆಗೆದುಕೊಂಡಿದ್ದಾರೆ. ಈ ಪ್ರಕರಣ ಮುಗಿದ ಅಧ್ಯಾಯವಾಗಿತ್ತು. ಆದರೆ ಕಾಂಗ್ರೆಸ್ಸಿನ ರಾಜ್ಯ ವಕ್ತಾರರಾದ ಆಯನೂರು ಮಂಜುನಾಥ್ರವರು ಈ ವಿಷಯವನ್ನು ಅಷ್ಟಕ್ಕೆ ಬಿಡದೆ ವಾಪಾಸ್ಸು ಪಡೆದಿರುವುದು ಸಂವಿಧಾನ ವಿರೋಧಿ ಎಂದು ಹೇಳಿರುವುದು, ಸಭಾಧ್ಯಕ್ಷರಿಗೆ ಪತ್ರ ಬರೆದಿರುವುದು, ರಾಜ್ಯ ಪಾಲರಿಗೂ ಪತ್ರ ಬರೆಯುವುದಾಗಿ ಹೇಳಿರುವುದು ನನಗೆ ಆಶ್ಚರ್ಯ ತರುತ್ತಿದೆ. ಆಯನೂರು ಮಂಜುನಾಥ್ ಅವರು ಸದನದ 348ರ ನಿಯಮಾವಳಿಯನ್ನು ಮತ್ತೊಮ್ಮೆ ಓದಲಿ ಎಂದರು.

ಸಭಾಧ್ಯಕ್ಷರು ಕೂಡ ಮುಂದಿನ ದಿನಗಳಲ್ಲಿ ಸದಸ್ಯರುಗಳನ್ನು ಅಮಾನತ್ತು ಮಾಡುವಾಗ, ಎಷ್ಟು ದಿನ ಮಾಡಬೇಕು, ಯಾರನ್ನು ಮಾಡಬೇಕು, ಮಾಡುವ ಮುನ್ನ ಅಮಾನತ್ತು ಮಾಡುವ ಶಾಸಕರ ಹೆಸರುಗಳನ್ನು ಹೇಳಲೇಬೇಕು. ಹೀಗೆ ಹಲವು ನಿಯಮಗಳಿವೆ. ಆದ್ದರಿಂದ ಆಚಾತುರ್ಯದ ನಿರ್ಧಾರ ಸರಿಯಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಡಿ.ಎಸ್. ಅರುಣ್, ಪ್ರಮುಖರಾದ ಎನ್.ಕೆ. ಜಗದೀಶ್, ಕೆ.ಜಿ. ಕುಮಾರಸ್ವಾಮಿ, ಎಸ್. ದತ್ತಾತ್ರಿ, ಎಸ್.ಎಸ್. ಜ್ಯೋತಿಪ್ರಕಾಶ್, ಕೆ.ವಿ. ಅಣ್ಣಪ್ಪ, ಚಂದ್ರಶೇಖರ್ ಇದ್ದರು.