ಶಿವಮೊಗ್ಗ: ನಗರದ ಪ್ರತಿಷ್ಟಿತ ರಾಷ್ಟ್ರೀಯ ಶಿಕ್ಷಣ ಸಮಿತಿಯ ಬಿ.ಆರ್.ಪ್ರಾಜೆಕ್ಟ್ನಲ್ಲಿರುವ ರಾಷ್ಟ್ರೀಯ ಸಂಯುಕ್ತ ಪದವಿಪೂರ್ವ ಕಾಲೇಜನ್ನು ರೋಟರಿಯ ಜಾಗತಿಕ ಅನುದಾನ ಹಾಗೂ ಎನ್ಇಎಸ್ ಸಂಸ್ಥೆಯ ಅನುದಾನದಲ್ಲಿ ಜಂಟಿಯಾಗಿ ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಸಂಪೂರ್ಣ ಮೇಲ್ದರ್ಜೆಗೆ ಏರಿಸಿ ನವೀಕರಿಸಲಾಗಿದ್ದು, ಫೆ.24 ರ ಸೋಮವಾರ ಬೆಳಗ್ಗೆ 10:00 ಗಂಟೆಗೆ ಕಾಲೇಜಿನ ಆವರಣದಲ್ಲಿ ಲೋಕಾರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

ರೋಟರಿ ಜಿಲ್ಲಾ ಗವರ್ನರ್ ರೊ.ಸಿ.ಎ.ದೇವಾನಂದ್, ಎನ್ಇಎಸ್ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದು, ಡಿಡಿಪಿಐ ಮಂಜುನಾಥ.ಎಸ್.ಆರ್, ಡಿಡಿಪಿಯು ಚಂದ್ರಪ್ಪ.ಎಸ್.ಗುಂಡಪಲ್ಲಿ, ಭದ್ರಾವತಿ ಬಿಇಓ ನಾಗೇಂದ್ರಪ್ಪ, ಗ್ರಾಮ ಪಂಚಾಯತಿ ಅಧ್ಯಕ್ಷೆ ಮಂಜುಳಮ್ಮ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶಿವಮೊಗ್ಗ ರೋಟರಿ ಕ್ಲಬ್ ಅಧ್ಯಕ್ಷರಾದ ಸೂರ್ಯನಾರಾಯಣ ಉಡುಪ, ಕಾರ್ಯದರ್ಶಿ ಎನ್.ಜಿ.ಉಷಾ, ಯೋಜನಾ ಸಂಪರ್ಕಾಧಿಕಾರಿ ಎನ್.ವಿ.ಭಟ್, ಎನ್ಇಎಸ್ ಉಪಾಧ್ಯಕ್ಷರಾದ ಸಿ.ಆರ್.ನಾಗರಾಜ, ಕಾರ್ಯದರ್ಶಿ ಎಸ್.ಎನ್. ನಾಗರಾಜ, ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಭಾಗವಹಿಸಲಿದ್ದಾರೆ.

ವಿದ್ಯಾಸಂಸ್ಥೆಯ ಕಟ್ಟಡವನ್ನು ಸಂಪೂರ್ಣವಾಗಿ ನವೀಕರಿಸಲಾಗಿದ್ದು, ನವೀಕೃತ ಶೌಚಾಲಯಗಳು, ಪೀಠೋಪಕರಣಗಳು ಹಾಗೂ ಕಂಪ್ಯೂಟರ್ ಲ್ಯಾಬ್ ರೂಪಿಸಲಾಗಿದೆ. 1962 ರಲ್ಲಿ ಪ್ರಾರಂಭಗೊಂಡ ಶಾಲೆಯು ನಂತರ 1983 ರಲ್ಲಿ ಪಿಯು ಕಾಲೇಜಿನೊಂದಿಗೆ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ಸುತ್ತಲಿನ ಗ್ರಾಮೀಣ ಪ್ರದೇಶದ ನೂರಾರು ವಿದ್ಯಾರ್ಥಿಗಳು ಈ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ್ದು, ಪ್ರಸ್ತುತ ಮೇಲ್ದೆರ್ಜೆಗೆ ಏರಿರುವ ಶಾಲೆ ಹಾಗೂ ಕಾಲೇಜಿನ ಮೂಲಕ ವಿದ್ಯಾರ್ಥಿಗಳ ಕಲಿಕೆಗೆ ಮತ್ತಷ್ಟು ಉನ್ನತ ಪ್ರೇರಣೆ ದೊರಕಲಿದೆ.