
ಶಿವಮೊಗ್ಗ, ನ,15: ಮಕ್ಕಳ ಮನಸ್ಸು ನಿರ್ಮಲವಾಗಿರುತ್ತದೆ, ಮೇಲು ಕೀಳು ಎಂಬ ಭೇದ ಭಾವ ಇರುವುದಿಲ್ಲ, ಮಕ್ಕಳು ದೇಶದ ಭವಿಷ್ಯವನ್ನು ಪ್ರತಿನಿಧಿಸುವ ಅತ್ಯಮೂಲ್ಯವಾದ ಸಂಪತ್ತು. ಎಂದು ಶ್ರೀ ಆದಿಚುಂಚನಗಿರಿ ಮಠ, ಶಿವಮೊಗ್ಗ ಶಾಖೆಯ ಪೂಜ್ಯ ಶ್ರೀ ಸಾಯಿನಾಥ ಸ್ವಾಮೀಜಿ ಅಭಿಪ್ರಾಯ ಪಟ್ಟರು.


ಅವರು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆಯ ಗುರುಪುರದ ಬಿಜಿಎಸ್ ಶಾಲಾ ಕಾಲೇಜಿನ ಸಭಾ ಭವನದಲ್ಲಿ ಆಯೋಜಿಸಲಾಗಿದ್ದ ಮಕ್ಕಳ ದಿನಾಚರಣೆಯ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು, ಮಕ್ಕಳೆಲ್ಲರಿಂದ ಚಾಚಾ ನೆಹರೂ ಎಂದೇ ಕರೆಸಿಕೊಳ್ಳುತ್ತಿದ್ದ ಪಂಡಿತ್ ಜವಾಹರ್ ಲಾಲ್ ನೆಹರುರವರ ಜನ್ಮದಿನ ಇಂದು, ನೆಹರು ಅವರು ಮಕ್ಕಳ ಸಮೂಹಕ್ಕೆ ಅಕ್ಕರೆಯ ಪ್ರೀತಿಯ ಚಾಚಾ ಆಗಿದ್ದರು ಎಂದು ತಿಳಿಸಿದರು.


ಮುದ್ದು ಮಕ್ಕಳ ಕಣ್ಣುಗಳಲ್ಲಿ ನೆಹರು ಅವರ ಜೀವನದ ಆದರ್ಶ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಹೇಳಿದರು. ಜೀವನದಲ್ಲಿ ಬರುವ ಪ್ರತಿಯೊಂದು ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರು, ರಂಗಭೂಮಿ ಕಲಾವಿದರಾದ ಡಾ. ಚಿದಾನಂದ್ ಎನ್.ಕೆ. ಸೊರಬ ಮಾತನಾಡುತ್ತಾ, ಮಕ್ಕಳೊಂದಿಗೆ ಮಕ್ಕಳ ದಿನಾಚರಣೆ ಪ್ರಯುಕ್ತ ಭಕ್ತಿ ಗೀತೆಯನ್ನು ಮಕ್ಕಳಿಗೆ ಹೇಳಿಕೊಡುತ್ತಾ ಹಾಡಿ ರಂಜಿಸಿದರು. ನಿಮ್ಮ ಸರಿ ತಪ್ಪುಗಳನ್ನು ಪರಾಮರ್ಶೆ ಮಾಡುವವರು ನೀವಾಗಬೇಕು ಎಂದು ಹೇಳಿದರು.

ಇಂದಿನ ದಿನಮಾನಗಳಲ್ಲಿ ಮಕ್ಕಳು ಮೊಬೈಲ್, ಟಿವಿ ಬಳಕೆ ಅತಿಯಾದರೆ ಅದು ನಮ್ಮ ಜೀವನವನ್ನೇ ಹಾಳು ಮಾಡುತ್ತದೆ. ಅದನ್ನು ಹಿತ ಮಿತವಾಗಿ ಬಳಸಿದರೆ, ನಮ್ಮ ಜೀವನಕ್ಕೆ ಸಹಾಯ ಮಾಡುತ್ತದೆ. ಆದರೆ ವಿದ್ಯಾರ್ಥಿಗಳಾದ ನಿಮಗೆ ಅದರಲ್ಲಿ ಕೆಟ್ಟದ್ದನ್ನು ಬಳಸಿಕೊಳ್ಳುವ ಮನಸ್ಥಿತಿಯೇ ಹೆಚ್ಚಾಗಿರುತ್ತದೆ. ಆದ್ದರಿಂದ ಪರೀಕ್ಷೆ ಮುಗಿಯುವ ತನಕ ಮೊಬೈಲನ್ನು ಮುಟ್ಟದೇ, ಪುಸ್ತಕದ ಮೊರೆ ಹೋಗಿ ಅದು ನಿಮ್ಮ

ಭವಿಷ್ಯವನ್ನು ರೂಪಿಸುತ್ತದೆ ಎಂದ ಅವರು, ಪರೀಕ್ಷೆಗೆ ಕೆಲವೇ ದಿನಗಳು ಇರುವ ಈ ಸಂದರ್ಭದಲ್ಲಿ ಪ್ರತಿ ನಿಮಿಷವನ್ನೂ ಕೂಡ ವ್ಯಯಮಾಡದೇ, ಸದುಪಯೋಗ ಪಡಿಸಿಕೊಂಡು ಅಭ್ಯಾಸ ಮಾಡಿದ್ದೇ ಆದರೆ ಪರೀಕ್ಷೆಯಲ್ಲಿ ನಿಮ್ಮ ನಿರೀಕ್ಷೆಯ ಗೋಲನ್ನು ಮುಟ್ಟಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಕಾಲೇಜಿನ ಪ್ರಾಂಶುಪಾಲರಾದ ಸುರೇಶ್ ಎಸ್. ಎಚ್., ಉಪನ್ಯಾಸಕರು, ಅಧ್ಯಾಪಕ ವೃಂದದವರು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಇನ್ನು ಮುಂತಾದವರು ಉಪಸ್ಥಿತರಿದ್ದರು.