ಶಿವಮೊಗ್ಗ: ಮುಸ್ಲಿಂ ಸಮುದಾಯದ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುವ ಜೂನ್ 7 ರಂದು ರಾಷ್ಟ್ರಾದ್ಯಂತ ಬಿಡುಗಡೆಯಾಗಲಿರುವ ‘ಹಮ್ ದೋ ಹಮಾರೆ ಬಾರಾ’(ನಾವಿಬ್ಬರು -ನಮಗೆ ಹನ್ನೆರಡರು) ಎಂಬ ಸಿನಿಮಾವನ್ನು ಬಿಡುಗಡೆ ಮಾಡಬಾರದು. ಸಿನಿಮಾವನ್ನೇ ರದ್ದು ಮಾಡಬೇಕು ಎಂದು ನಗರದ ಸುನ್ನಿ ಜಾಮೀಯಾ ಮಸೀದಿ ಹಾಗೂ ಸುನ್ನಿ ಜಮಾಯತ್ ಉಲ್ಲಾ ಮಸೀದಿ ಮತ್ತು ಇನ್ನಿತರ ಸಂಘಟನೆಗಳು ಆಗ್ರಹಿಸಿವೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುನ್ನಿ ಜಾಮೀಯಾ ಮಸೀದಿಯ ಅಧ್ಯಕ್ಷ ಮುನಾವರ್ ಪಾಶಾ, ಜೀ ಸಿನಿಮಾ ವಾಹಿನಿಯು ಇತ್ತೀಚೆಗೆ ‘ಹಮ್ ದೋ ಹಮಾರೆ ಬಾರಾ’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದು, ಇದರಲ್ಲಿ ಅಲ್ಲಾಹುವಿನ ಪವಿತ್ರ ಗ್ರಂಥ ಖುರಾನ್ ಶರೀಫರಲ್ಲಿ ಇರುವ ‘ಸೂರೆ –ಎ-ಬಕರ’ ಸಾಲಿನಲ್ಲಿನ ಉಪದೇಶಗಳನ್ನು ಹಾಗೂ ಸಂದೇಶಗಳನ್ನು ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರು ತಪ್ಪಾಗಿ ಗ್ರಹಿಸಿ ಅಪಾರ್ಥ ಸೃಷ್ಠಿಸಿ ಪ್ರಚೋದನಾತ್ಮಕ ಹಾಗೂ ಅವಹೇಳನಕಾರಿಯಾಗಿ ಚಿತ್ರಿಸಿ ಸಮಾಜದಲ್ಲಿ ಧರ್ಮಗಳ ಮಧ್ಯೆ ಗೊಂದಲ ಉಂಟು ಮಾಡಿದ್ದಾರೆ ಎಂದರು.

ಯಾವುದೇ ಸಿನಿಮಾ ಒಂದು ಸಮುದಾಯವನ್ನು ಅವಹೇಳನ ಮಾಡಬಾರದು. ಸಿನಿಮಾ ಎಂದರೆ ಅದು ಮನರಂಜನೆ ಮಾತ್ರ. ಮನರಂಜನೆಯ ಮೂಲಕ ಉತ್ತಮ ಸಂದೇಶಗಳನ್ನು ನೀಡಬೇಕೆ ಹೊರತು ಕೆಟ್ಟ ಸಂದೇಶಗಳನ್ನಲ್ಲ. ಈ ಚಿತ್ರದ ಟ್ರೇಲರ್ ನೋಡಿದರೆ ಸಾಕು, ಇದು ಮುಸ್ಲಿಂ ಸಮುದಾಯವನ್ನೇ ಕೆಣಕುವಂತಿದೆ. ಒಬ್ಬ ಮಹಿಳೆಯ ಬಗ್ಗೆ ಈ ರೀತಿಯ ಕೆಟ್ಟ ಭಾವನೆಗಳನ್ನು

ಉಂಟು ಮಾಡಿ ಪ್ರಚೋದನೆಯನ್ನು ನೀಡಬಾರದು. ಆದ್ದರಿಂದ ಈ ಸಿನಿಮಾವನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬಾರದು ಎಂದ ಅವರು ಈಗಾಗಲೇ ಈ ಬಗ್ಗೆ ಅಖಿಲ ಭಾರತ ಚಿತ್ರೀಕರಣ ಮತ್ತು ವಾಣಿಜ್ಯ ಮಂಡಳಿ, ಚೆನ್ನೈ ಹಾಗೂ ಹಿಂದಿ ಚಲನಚಿತ್ರ ಹಾಗೂ ವಾಣಿಜ್ಯ ಮಂಡಳಿ ಹಾಗೂ ರಾಷ್ಟ್ರಪತಿ, ಪ್ರಧಾನ ಮಂತ್ರಿ, ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ ಎಂದರು.

ಕಾಶ್ಮೀರಿ ಫೈಲ್ಸ್ ಸಿನಿಮಾ ಬಂತು. ಆ ಬಗ್ಗೆ ನಾವು ತಲೆಕೆಡಿಸಿಕೊಳ್ಳಲಿಲ್ಲ. ನಂತರ ಕೇರಳ ಫೈಲ್ಸ್ ಬಂತು. ಆಗಲೂ ನಾವು ಮಾತನಾಡಲಿಲ್ಲ. ಉಗ್ರರಿಗೆ ಶಿಕ್ಷೆಯಾಗಬೇಕಾದುದು ನ್ಯಾಯವೇ ಇದೆ. ಆದರೆ ಉಗ್ರರು ಎಂದರೆ ಕೇವಲ ಮುಸಲ್ಮಾನರು ಎಂಬ ಭಾವನೆ ತೊಲಗಬೇಕು. ನಾವೆಲ್ಲರೂ ಮನುಷ್ಯರು. ಇಲ್ಲಿ ಮನುಷ್ಯತ್ವವೇ ಮುಖ್ಯ. ಮಾನವೀಯತೆ ಮಿಡಿಯದ ಸಿನಿಮಾಗಳು ಖಂಡಿತ ಸಮಾಜದಲ್ಲಿ ಇರಬಾರದು ಎಂದರು.

ಈ ಸಿನಿಮಾವನ್ನು ಕೇವಲ ಅಲ್ಲಾಹುವಿನ ಪವಿತ್ರ ಗ್ರಂಥವಾದ ಖುರಾನ್ ಶರೀಫರಲ್ಲಿ ಇರುವ ‘ಸೂರೆ –ಎ-ಬಕರ’ ಸಾಲಿನಿಂದ ತೆಗೆದುಕೊಳ್ಳಲಾಗಿದೆ. ಇದರ ಪೂರ್ಣ ಸಾಲುಗಳನ್ನು ಅವರು ಗಮನಿಸಿಯೇ ಇಲ್ಲ. ಮತ್ತು ಆ ಸೂಕ್ತಿಯನ್ನು ಇವರು ತಪ್ಪಾಗಿ ಅರ್ಥೈಸಿದ್ದಾರೆ. ಈ ಸಿನಿಮಾ ಬಿಡುಗಡೆಯಾದರೆ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಹಾಳಾಗುತ್ತದೆ. ಕೋಮುಗಲಭೆ ಸೃಷ್ಟಿಯಾಗಲು ಕಾರಣವಾಗುತ್ತದೆ. ಆದ್ದರಿಂದ ಈ ಸಿನಿಮಾ ಬಿಡುಗಡೆಯಾಗಬಾರದು. ಮತ್ತು ಈ ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆಶ್ರಫ್ ಅಹಮ್ಮದ್, ಸತ್ತಾರ್ ಬೇಗ್, ನಯಾಜ್ ಅಹಮ್ಮದ್ ಖಾನ್, ಹಸನ್ ಖಾನ್ ಅಫ್ರೀದಿ, ಮುಫ್ತಿ ಅಖಿಲ್ ರಝಾ, ಅಶ್ರಫ್ ಹುಸೇನ್ ಸಾಬ್, ಏಜಾಜ್ ಪಾಶಾ, ಮುಫ್ತಿ ಅಫಲ್ ಆಲೀಸ್ ಸಾಬ್ ಮತ್ತಿತರರು ಇದ್ದರು.