ಭದ್ರಾವತಿಯ ಕಾರೇಹಳ್ಳಿಯ ಬಿಜಿಎಸ್ ಕ್ರೀಡಾಂಗಣದಲ್ಲಿ ಆಯೋಜನೆ | ಕ್ರೀಡಾಹಬ್ಬಕ್ಕೆ ರಜತ ಮಹೋತ್ಸವ.
ಶಿವಮೊಗ್ಗ, ನ.೨೬:
ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ೨೫ನೇ ವರ್ಷದ ರಜತ ಚುಂಚಾದ್ರಿ ಕ್ರೀಡೋತ್ಸವವನ್ನು ಭದ್ರಾವತಿ ತಾಲ್ಲೂಕಿನ ಕಾರೆಹಳ್ಳಿಯ ಬಿಜಿಎಸ್ ಕೇಂದ್ರೀಯ ಶಾಲೆಯ ಬಿಜಿಎಸ್ ಕ್ರೀಡಾಂಗಣದಲ್ಲಿ ಡಿಸೆಂಬರ್ ೧ರಿಂದ ೩ರವರೆಗೆ ಕ್ರೀಡೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.

ಭೈರವೈಕ್ಯ ಪರಮಪೂಜ್ಯ ಜಗದ್ಗುರು ಪದ್ಮಭೂಷಣ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರು, ಮಕ್ಕಳು ಮಾನಸಿಕವಾಗಿ,ದೈಹಿಕವಾಗಿ ಸದೃಢವಾಗಬೇಕಾದರೆ ವಿದ್ಯೆಯ ಜೊತೆಗೆ ಕ್ರೀಡೆಯೂ ಬಹಳ ಮುಖ್ಯವೆಂದು ಭಾವಿಸಿದ್ದರು, ಆದ್ದರಿಂದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್( ರಿ ) ನ ವಿದ್ಯಾ ಸಂಸ್ಥೆಗಳಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ಎಲ್ಲಾ ಮಕ್ಕಳಲ್ಲಿಯೂ ಆರೋಗ್ಯಕರ ಸ್ಪರ್ಧಾ ಮನೋಭಾವನೆ ಬೆಳೆಸಬೇಕೆಂಬ ಸದುದ್ದೇಶದಿಂದ ೧೯೯೪ ರಿಂದ ಪ್ರತಿವರ್ಷ ಈ ಶಿಕ್ಷಣ ಸಂಸ್ಥೆಗಳ ರಾಜ್ಯ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಲು ಪೂಜ್ಯರು ಅನುವು ಮಾಡಿಕೊಟ್ಟರು.

ಈ ಕ್ರೀಡಾಕೂಟವು ಪ್ರಪ್ರಥಮವಾಗಿ ಪರಮಪೂಜ್ಯ ಜಗದ್ಗುರುಗಳ ಕೃಪಾಶೀರ್ವಾದದಿಂದ ಶಿವಮೊಗ್ಗದಲ್ಲಿಯೇ ಆರಂಭಗೊಂಡಿದ್ದು, ನಮಗೆ ಸಿಕ್ಕಂತಹ ಒಂದು ಅಪೂರ್ವ ಅವಕಾಶವೇ ಸರಿ.
ಈ ಶುಭ ಸಂದರ್ಭದಲ್ಲಿ ಅಮೆರಿಕಾದಲ್ಲಿ ವಾಸವಾಗಿದ್ದಂತಹ ಡಾ. ರಾಮು ದಂಪತಿಗಳು ಶಿವಮೊಗ್ಗ ಶಾಖಾ ಮಠಕ್ಕೆ ಪರಮಪೂಜ್ಯರ ಜೊತೆಯಲ್ಲಿ ಆಗಮಿಸಿದ್ದರು. ಶಿವಮೊಗ್ಗ ಶಾಲೆಯ ಮಕ್ಕಳ ಸಾಂಸ್ಕೃತಿಕ ಚಟುವಟಿಕೆಗಳನ್ನು ನೋಡಿ ಆನಂದಿಸಿದ ಡಾ.ರಾಮು ರವರು ತಮ್ಮ ಮಗನಾದ ಡಾ. ಸೂರ್ಯ ಪಾಲ್ ಅವರ ಸ್ಮರಣಾರ್ಥ ೨೫,೦೦೦ ರೂಪಾಯಿಗಳನ್ನು ನೀಡಿದ್ದರು. ಪರಮ ಪೂಜ್ಯರು ಈ ಹಣದಿಂದ ನಮ್ಮ ಸಂಸ್ಥೆ ಮಕ್ಕಳ ಕ್ರೀಡಾಕೂಟವನ್ನು ಆಯೋಜಿಸುವಂತೆ ಆದೇಶಿಸಿದ್ದರಿಂದ ಪ್ರಪ್ರಥಮ ಕ್ರೀಡಾಕೂಟವು ೧೯೯೪ ರಲ್ಲಿ ಶಿವಮೊಗ್ಗದಲ್ಲಿ ಆರಂಭಗೊಂಡಿತು.
ಪರಮಪೂಜ್ಯ ಜಗದ್ಗುರುಗಳು ಆರಂಭಿಸಿದ ಈ ಕ್ರೀಡೋತ್ಸವ ಇಂದು ೨೫ರ ಸಂಭ್ರಮದಲ್ಲಿದ್ದು, ಪರಮಪೂಜ್ಯ ಜಗದ್ಗುರು ಪದ್ಮಭೂಷಣ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾ ಸ್ವಾಮೀಜಿಯವರ ಕೃಪಾಶೀರ್ವಾದಗಳೊಂದಿಗೆ, ಈ ಕ್ರೀಡಾ ಕೂಟದ ದಿವ್ಯ ಸಾನ್ನಿಧ್ಯವನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ವಹಿಸಲಿದ್ದು, ಕ್ರೀಡಾ ಕೂಟದ ಉದ್ಘಾಟನೆಯನ್ನು ಸನ್ಮಾನ್ಯ ಶ್ರೀ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ, ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ದಿವ್ಯ ಉಪಸ್ಥಿತಿ ವಹಿಸುವರು. ಶಾಖಾ ಮಠದ ಪೂಜ್ಯ ಶ್ರೀಗಳು, ನಾಡಿನ ಸಾಧು ಸಂತರು, ಸಚಿವರು, ಸಂಸದರು, ಶಾಸಕರು, ಜನಪ್ರತಿನಿಧಿಗಳು, ಗಣ್ಯರು ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.


ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರತಿವರ್ಷ ಆಯೋಜಿಸುವ ಅಂತರ್ ಶಾಲಾ-ಕಾಲೇಜು ಕ್ರೀಡಾಕೂಟವನ್ನು ಈ ಬಾರಿ ಭದ್ರಾವತಿ ತಾಲೂಕು ಕಾರೇ ಹಳ್ಳಿಯಲ್ಲಿರುವ ಬಿಜಿಎಸ್ ಕೇಂದ್ರೀಯ ವಿದ್ಯಾಲಯದ ಬಿಜಿಎಸ್ ಕ್ರೀಡಾಂಗಣದಲ್ಲಿ ಡಿಸೆಂಬರ್ ೧ರಿಂದ ಮೂರು ದಿನಗಳ ಕಾಲ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ರಾಜ್ಯದ ಬಹುತೇಕ ಜಿಲ್ಲೆಗಳಿಂದ ಸಾವಿರಾರು ಮಕ್ಕಳು ಕ್ರೀಡಾ ಕೂಟದಲ್ಲಿ ಭಾಗವಹಿಸಲಿದ್ದಾರೆ.
ಮಕ್ಕಳಲ್ಲಿ ಅಡಗಿರುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಅನೇಕ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸುತ್ತಿದ್ದೇವೆ, ಈ ಕ್ರೀಡಾಕೂಟದ ಯಶಸ್ಸಿನಿಂದಾಗಿ ನಮ್ಮ ಶಿಕ್ಷಣ ಟ್ರಸ್ಟಿನ ಶಾಲಾ ಕಾಲೇಜುಗಳ ನೂರಾರು ಕ್ರೀಡಾಪಟುಗಳು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಸ್ಪರ್ಧಿಸಿದ್ದಾರೆ, ಸ್ಪರ್ಧಿಸುತ್ತಿದ್ದಾರೆ.
೨೦ ವಿಭಾಗಗಳಿಂದ ೪೫೦೦ ವಿದ್ಯಾರ್ಥಿಗಳು ಆಗಮಿಸುವ ನಿರೀಕ್ಷೆ ಇದ್ದು, ೧೮೦೦ ವಿದ್ಯಾರ್ಥಿನಿಯರು, ೨೭೦೦ ವಿದ್ಯಾರ್ಥಿಗಳು ಭಾಗವಹಿಸಿ ಅದ್ಭುತ ಪ್ರದರ್ಶನ ನೀಡುತ್ತಿವೆ. ಈ ಪಂದಾವಳಿಯಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿದ ಬಾಲಕ – ಬಾಲಕಿಯರಿಗೆ ಅತ್ಯಾಕರ್ಷಕ ಟ್ರೋಪಿ ನೀಡಿ, ಕ್ರೀಡಾಪಟುಗಳನ್ನು ಹುರಿ ದುಂಬಿಸಲಾಗುತ್ತದೆ. ವಿಜೇತ ತಂಡಗಳಿಗೆ ಆಕರ್ಷಕ ಪಾರಿತೋಷಕದೊಂದಿಗೆ, ವೈಯಕ್ತಿಕ ಬಹುಮಾನಗಳನ್ನು ನೀಡಲಾಗುತ್ತಿದೆ.

ಸುಸಜ್ಜಿತ ಅಂಕಣದ ವ್ಯವಸ್ಥೆ :-
ಆಟಗಾರರ ಅನುಕೂಲಕ್ಕಾಗಿ ಈಗಾಗಲೇ ಖೋ ಖೋ ೪ ಅಂಕಣಗಳನ್ನು, ವಾಲಿಬಾಲ್ ೫ ಅಂಕಣಗಳನ್ನು, ಕಬಡ್ಡಿ ೪ ಅಂಕಣಗಳನ್ನು, ಹ್ಯಾಂಡ್ ಬಾಲ್ ೨, ಡಾಡ್ಜ್ ಬಾಲ್ ೨ ಅಂಕಣಗಳಂತೆ ಸಿದ್ಧಪಡಿಸಿದ್ದು, ಕಾರೇ ಹಳ್ಳಿಯ ಬಿಜಿಎಸ್ ಕ್ರೀಡಾಂಗಣದಲ್ಲಿ ಹೊನಲು ಬೆಳಕಿನ ಪಂದ್ಯಾವಳಿಯನ್ನು ನಡೆಸಲಾಗುವುದು, ಎಲ್ಲಾ ಪಂದ್ಯಾವಳಿಗಳನ್ನೂ ನಾಕ್ ಔಟ್ ಮಾದರಿಯಲ್ಲಿ ನಡೆಸಲಾಗುವುದು. ಒಳಾಂಗಣದಲ್ಲಿ ಷಟಲ್ ಬ್ಯಾಡ್ಮಿಂಟನ್,೪೦೦ ಮೀಟರ್ ಟ್ರಾಕ್ ನಲ್ಲಿ ಅಥ್ಲೆಟಿಕ್ಸ್ ಆಟೋಟಗಳನ್ನು ಆಯೋಜಿಸಲಾಗಿದೆ.
ಯೋಗಾಸನ ಸ್ಪರ್ಧೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಯೋಗ ಸಭಾಂಗಣದಲ್ಲಿ ನಡೆಸಲಾಗುವುದು. ಕ್ರೀಡಾಪಟುಗಳಿಗೆ ಕಾಲೇಜಿನ ವಸತಿ ನಿಲಯಗಳಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.

ರಾಷ್ಟ್ರ ಮತ್ತು ರಾಜ್ಯ ಮಟ್ಟದ ಸುಮಾರು ೧೨೦ ನುರಿತ ಅನುಭವಿ ತೀರ್ಪುಗಾರರು ವಿವಿಧ ಜಿಲ್ಲೆಗಳಿಂದ ಆಗಮಿಸಲಿದ್ದು, ಅವರಿಗೆ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.
ಬಾಲಕಿಯರಿಗೆ ವಸತಿ ವ್ಯವಸ್ಥೆ :-
ವಿದ್ಯಾರ್ಥಿನಿಯರಿಗೆ ಭದ್ರಾವತಿ ಬೈಪಾಸ್ ರಸ್ತೆಯ ಬುಳ್ಳಾಪುರದಲ್ಲಿರುವ ಬಿಜಿಎಸ್ ಕಾಲೇಜು ಮತ್ತು ಬಿಜಿಎಸ್ ಬಾಲಕಿಯರ ಹಾಗೂ ಎಸ್ಎವಿ ಪ್ರೌಢಶಾಲೆ, ನ್ಯೂ ಟೌನ್ ಭದ್ರಾವತಿ ಇಲ್ಲಿ ಬಾಲಕಿಯರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ .
ಬಾಲಕರಿಗೆ ವಸತಿ ವ್ಯವಸ್ಥೆ :-
ಬಿಜಿಎಸ್ ಕೇಂದ್ರೀಯ ವಿದ್ಯಾಲಯ ಕಾರೆಹಳ್ಳಿ, ಎಸ್ ಎ ಇ ಶಾಲೆ ಕಾರೆಹಳ್ಳಿ, ಎಸ್ ಎ ವಿ ಸಂಯುಕ್ತ ಪದವಿ ಪೂರ್ವ ಕಾಲೇಜು, ಎಸ್ ಎ ವಿ ಆಂಗ್ಲ ಪ್ರಾಥಮಿಕ ಶಾಲೆ, ನ್ಯೂ ಟೌನ್ ಭದ್ರಾವತಿ. ಇಲ್ಲಿ ಬಾಲಕರಿಗೆ ವಸತಿ ವ್ಯವಸ್ಥೆಯನ್ನು ಮಾಡಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವ ಎಲ್ಲಾ ಕ್ರೀಡಾಪಟುಗಳಿಗೆ ವಸತಿ, ಊಟ ಮತ್ತು ಸಾರಿಗೆ ವ್ಯವಸ್ಥೆಯನ್ನು ಮಾಡಲಾಗಿದೆ.
ಈಗ ಬೈರವೈಕ್ಯ ಪರಮ ಪೂಜ್ಯ ಜಗದ್ಗುರುಗಳ ಕೃಪಾಶೀರ್ವಾದದಿಂದ ಹಾಗೂ ೭೨ನೇ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಯವರ ಆಶೀರ್ವಾದದಿಂದ ಬಿಜಿಎಸ್ ಕಾರೆಹಳ್ಳಿಯಲ್ಲಿ ಉತ್ತಮ ಕ್ರೀಡಾಂಗಣವು ಸಜ್ಜುಗೊಂಡಿದ್ದು, ಪ್ರಸ್ತುತ ಸಾಲಿನಲ್ಲಿ ೨೫ ನೇ ರಾಜ್ಯ ಮಟ್ಟದ ಚುಂಚಾದ್ರಿ ರಜತ ಮಹೋತ್ಸವದ ಕ್ರೀಡಾಕೂಟವನ್ನು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ನಡೆಯುತ್ತಿರುವುದು ಬಹಳ ಸಂತಸವನ್ನುಂಟು ಮಾಡಿದೆ.


ಈ ಹಿನ್ನೆಲೆಯಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಹಾಗೂ ಶಿವಮೊಗ್ಗ ಜಿಲ್ಲೆಯ ಆದಿಚುಂಚನಗಿರಿ ವಿದ್ಯಾ ಸಂಸ್ಥೆಗಳ ರೂವಾರಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಅತ್ಯಂತ ವಿಜ್ರಂಬಣೆಯಿಂದ ಹಾಗೂ ಸುವ್ಯವಸ್ಥಿತವಾಗಿ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು, ಶ್ರೀ ಮಠದ ಸದ್ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಶ್ರೀಮಠದ ವ್ಯವಸ್ಥಾಪಕರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.
