ನೆನ್ನೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯ 3 ನೇ ಅಭ್ಯರ್ಥಿ ಲೇಹರ್ಸಿಂಗ್ ಗೆಲ್ಲಲು , ಕಾಂಗ್ರೆಸ್ ಪಕ್ಷದ ಮುಸ್ಲೀಂ ಅಭ್ಯರ್ಥಿ ಸೋಲಲು ಮತ್ತು ಜೆಡಿಎಸ್ ಅಭ್ಯರ್ಥಿ ಸೋಲಲು ವಿಪಕ್ಷ ನಾಯಕ ಸಿದ್ದರಾಮಯ್ಯ ನೇರ ಕಾರಣ ಎಂದು ಮಾಜಿ ಸಚಿವ ಹಾಗೂ ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.

ಅವರು ಇಂದು ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದಿಂದ ಗೆದ್ದ ೩ ಅಭ್ಯರ್ಥಿಗಳಿಗೆ ಅಭಿನಂದಿಸುವೆ. ಅದರಂತೆ ಪಕ್ಷದ ೩ನೇ ಅಭ್ಯರ್ಥಿ ಗೆಲ್ಲಲು ಕಾರಣರಾಗಿರುವ ಸಿದ್ದರಾಮಯ್ಯ ಅವರಿಗೂ ಸಹ ಅಭಿನಂದಿಸುತ್ತೇನೆ ಎಂದು ಟಾಂಗ್ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯ ಘಟಕದ ಬೆಂಬಲ ಜೊತೆಗೆ ಮೋದಿ ಅವರ ರಾಷ್ಟ್ರಭಕ್ತಿ ಮತ್ತು ಸ್ಪೂರ್ತಿ ಬೆಂಬಲಕ್ಕೆ ನಿಂತಿದೆ ಎಂದ ಅವರು, ಕಾಂಗ್ರೆಸ್ ಪಕ್ಷದ ಮುಸ್ಲಿಂ ಅಭ್ಯರ್ಥಿ ಮನ್ಸೂರ್ ಅವರ ಸೋಲಿಗೆ ಕಾರಣರಾಗಿರುವ ಸಿದ್ದರಾಮಯ್ಯ ಮುಸ್ಲಿಂ ಸಮುದಾಯಕ್ಕೆ ದ್ರೋಹ ಬಗೆದಿರುವುದನ್ನು ಅ ಸಮುದಾಯ ಅರ್ಥ ಮಾಡಿಕೊಳ್ಳಬೇಕು ಎಂದರು.

ಬಿಜೆಪಿ ಕೋಮು ಶಕ್ತಿ ಎಂದು ಹೇಳುವುದನ್ನು ಕಾಂಗ್ರೆಸ್ ಸುಳ್ಳು ಮಾಡಿದೆ. ಮುಸ್ಲಿಂ ಅಭ್ಯರ್ಥಿ ಸೋಲಿಗೆ ಮಾತ್ರವಲ್ಲದೆ ಜೆಡಿಎಸ್ ಅಭ್ಯರ್ಥಿ ಸೋಲಿಗೂ ಕಾರಣವಾಗಿದೆ. ಸಿದ್ದರಾಮಯ್ಯ ಮತ್ತು ಡಿಕೆಶಿಯ ನಿಲುವಿನಿಂದ ಜತ್ಯಾತೀತ ಶಕ್ತಿಗೆ ಸೋಲುಂಟಾಗಿದೆ ಎಂದರು.

ಪಕ್ಷದ ಸಂಘಟನಾತ್ಮಕ ಶಕ್ತಿಯಿಂದ ಪಕ್ಷದ ೩ನೇ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ ಪೂರ್ಣಬಹುಮತ ಮತದಾರರು ನೀಡದೆ ಇದ್ದಿದ್ದರಿಂದ ರಾಜ್ಯದ ಅಭಿವೃದ್ಧಿಗೆ ಹಿನ್ನೆಯಾಗಿದೆ ಎಂದರು.

ಸಿದರಾಮಯ್ಯ ಯಾರಿಗೂ ಒಳ್ಳೆಯದನ್ನು ಮಾಡಿಲ್ಲ. ಕುರುಬ ಸಮಾಜದ ನಾಯಕರಾದ ಹೆಚ್.ವಿಶ್ವನಾಥ್, ವೈ.ಟಿ.ಮೇಟಿ, ಹೆಚ್.ಎಂ.ರೇವಣ್ಣ, ಎಂಟಿಬಿ ನಾಗರಾಜ್, ಭೈರತಿ ಬಸವರಾಜ್ ಅ ರವನ್ನು ಕೈ ಬಿಟ್ಟರು. ಬಾದಾಮಿ ಕ್ಷೇತ್ರವನ್ನು ಬಿಟ್ಟುಕೊಟ್ಟ ಚಿಮ್ಮನೆ ಕಟ್ಟಿಯವರನ್ನೇ ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಮೇಯರ್ ಶಂಕರ್ ಗನ್ನಿ, ಪಾಲಿಕೆ ಸದಸ್ಯರಾದ ಎಸ್.ಎನ್.ಚನ್ನಬಸಪ್ಪ, ಎಸ್.ಜನೇಶ್ವರ್, ಧೀರರಾಜ್ ಹೊನ್ನವಿಲೆ, ಪ್ರಮುಖರಾದ ಕೆ.ವಿ.ಅಣ್ಣಪ್ಪ, ಸುಧೀಂದ್ರಕಟ್ಟಿ, ಬಾಲು ಉಪಸ್ಥಿತರಿದ್ದರು.