ಶಿವಮೊಗ್ಗ : ಮಲೆನಾಡು ಹಾಗೂ ಕರಾವಳಿಯನ್ನು ಸಂಪರ್ಕಿಸುವ ಉಡುಪಿ ಮೂಲಕ ಮಲ್ಪೆವರೆಗಿನ ರಾಷ್ಟ್ರೀಯ ಹೆದ್ದಾರಿ 169ಎ ರಸ್ತೆಯನ್ನು ಚತುಷ್ಪಥ ಹೆದ್ದಾರಿಯನ್ನಾಗಿ ಉನ್ನತೀಕರಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, ಹೆಬ್ರಿಯಿಂದ ಕಾರ್ಕಳ, ಕರಾವಳಿ ಜಂಕ್ಷನ್ನಿಂದ ಮಲ್ವೆವರೆಗೂ ಇದನ್ನು ಸಂಪರ್ಕಿಸಲು ತೀರ್ಥಹಳ್ಳಿಯಿಂದ ಉಡುಪಿಯವರೆಗೂ (ಕರಾವಳಿ ಜಂಕ್ಷನ್ವರೆಗೂ) ಈಗಿರುವ ರಸ್ತೆಯನ್ನು ಉನ್ನತೀಕರಿಸಿ ನಾಲ್ಕು ಪಥದ ಹೆದ್ದಾರಿಯನ್ನಾಗಿ ಅಭಿವೃದ್ಧಿಪಡಿಸಲು ಅನುಮೋದನೆ ನೀಡಲಾಗಿದೆ. ಇದಕ್ಕಾಗಿ 355.72ಕೋಟಿ ರೂ.ಗಳ ಅನುದಾನಕ್ಕೆ ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ತೀರ್ಥಹಳ್ಳಿ ಹಾಗೂ ಸೋಮೇಶ್ವರ ನಡುವೆ ಇರುವ ಆಗುಂಬೆ ಘಾಟಿ ಪ್ರದೇಶದಲ್ಲಿ ಹೆದ್ದಾರಿಯನ್ನು ಯಾವ ರೀತಿ ಅಭಿವೃದ್ಧಿ ಮಾಡಲಾಗುತ್ತದೆ ಎಂಬ ಕುರಿತಾಗಿ ಇನ್ನೂ ಮಾಹಿತಿ ದೊರೆತಿಲ್ಲ. ಈ ಕುರಿತಂತೆ ವಿವರವಾದ ಯೋಜನಾ ವರದಿ ಬಿಡುಗಡೆಯ ನಂತರವಷ್ಟೇ ಮಾಹಿತಿ ತಿಳಿದುಬರಲಿದೆ. ಈ ಹೆದ್ದಾರಿ ಅಭಿವೃದ್ಧಿಯಿಂದ ಮಲೆನಾಡು ಹಾಗೂ ಕರಾವಳಿಯ ಸಂಪರ್ಕ ಅವಧಿ ಕಡಿಮೆಯಾಗಲಿದ್ದರೂ ಈ ಕಾಮಗಾರಿಯಿಂದ ಬಹಳಷ್ಟು ಅರಣ್ಯ ಪ್ರದೇಶ ನಾಶವಾಗುವ ಆತಂಕವೂ ಸಹ ಇದೆ.