ಶಿವಮೊಗ್ಗ,ಆ,31:ಯೋಗ ಮತ್ತು ಚೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಯೋಗದಿಂದ ಆರೋಗ್ಯ ವೃದ್ಧಿ ಆದರೆ,ಚದುರಂಗದಿಂದ ಬುದ್ಧಿ ಮತ್ತು ಏಕಾಗ್ರತೆ ಹೆಚ್ಚಾಗುತ್ತದೆ ಎಂದು ತಾಲೂಕು ದೈಹಿಕ ಶಿಕ್ಷಣ ಅಧಿಕಾರಿಗಳಾದ ಸವಿತಾ ಕೆ.ವಿ. ಅಭಿಪ್ರಾಯಪಟ್ಟರು.

ಅವರು ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಶಿವಮೊಗ್ಗ ಹಾಗೂ ಪ್ರಿವೇಲ್ ಆಂಗ್ಲ ಪ್ರಾಥಮಿಕ ಶಾಲೆ ಊರುಗಡೂರು,ಶಿವಮೊಗ್ಗ. ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಅನುದಾನ ರಹಿತ ಹಿರಿಯ ಪ್ರಾಥಮಿಕ ಶಾಲೆಗಳ ಎ ಮತ್ತು ಬಿ ವಲಯಗಳ ವಲಯ ಮಟ್ಟದ ಯೋಗ ಮತ್ತು ಚೆಸ್ ಪಂದಾವಳಿಗೆ ಚಾಲನೆ ನೀಡಿ ಮಾತನಾಡುತ್ತಾ, ಕ್ರೀಡೆಯಿಂದ ಶಿಸ್ತು ಸಂಯಮ ಬೆಳೆಯುವುದು, ಸೋಲು ಗೆಲುವು ಮುಖ್ಯವಲ್ಲ ಕ್ರೀಡಾ ಮನೋಭಾವದಿಂದ ಭಾಗವಹಿಸುವುದು ಮುಖ್ಯ. ಇಲ್ಲಿ ಭಾಗವಹಿಸಿದ ಮಕ್ಕಳು ಜಿಲ್ಲೆ, ರಾಜ್ಯ,ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿ ದೇಶಕ್ಕೆ ಕೀರ್ತಿ ತರಲೆಂದು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಜಿಲ್ಲಾ ಅನುದಾನ ರಹಿತ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ರಾ. ಹ.ತಿಮ್ಮೇನಹಳ್ಳಿ ಮಾತನಾಡುತ್ತಾ,ಯೋಗದಿಂದ ನಮ್ಮ ಆರೋಗ್ಯ ಕಾಪಾಡುವ ಜೊತೆಗೆ ದೇಹ ಮತ್ತು ಮನಸ್ಸನ್ನು ಆರೋಗ್ಯ ವಾಗಿಟ್ಟುಕೊಂಡಾಗ ದಿನನಿತ್ಯದ ಕೆಲಸ-ಕಾರ್ಯಗಳನ್ನು ನಿರೀಕ್ಷೆಯಂತೆ ನಿರ್ವಹಿಸಲು, ಸದಾ ಲವ ಲವಿಕೆಯಿಂದಿರಲು ಸಾಧ್ಯವಾಗಲಿದೆ ಎಂದರು.

ಈ ನಿಟ್ಟಿನಲ್ಲಿ ಎಲ್ಲರೂ ಯೋಗಭ್ಯಾಸವನ್ನು ನಿಯಮಿತವಾಗಿ ರೂಢಿಸಿಕೊಳ್ಳುವುದು ಉತ್ತಮ, ಚೆಸ್ ಬುದ್ದಿವಂತಿಕೆಯ ಕ್ರೀಡೆ, ಪುರಾತನ ಕಾಲದಿಂದಲೂ ಪ್ರಚಲಿತವಿರುವ ಕ್ರೀಡೆ ಚದುರಂಗ,ಹಿಂದಿನ ಕಾಲದಿಂದಲೂ ರಾಜ ಮಹಾರಾಜರ ಕಾಲದಲ್ಲಿ ಪ್ರಸಿದ್ಧಿಯನ್ನು ಪಡೆದ ಕ್ರೀಡೆ. ಕೇವಲ ಭಾರತದಲ್ಲಿ ಅಷ್ಟೇ ಅಲ್ಲದೇ ಇಡೀ ವಿಶ್ವದಲ್ಲಿ ಯೋಗಕ್ಕೆ ಆದ್ಯತೆ ನೀಡಲಾಗುತ್ತಿದೆ. ಹಾಗಾಗಿ ಕ್ರೀಡಾಪಟುಗಳು ಯೋಗ ಮತ್ತು ಚೆಸ್ ಸತತ ಅಭ್ಯಾಸದಿಂದ
ಉತ್ತಮ ಸಾಧನೆ ಮಾಡಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಿವೇಲ್ ಶಾಲೆಯ ಅಧ್ಯಕ್ಷರ ನೇಮಾನ್ ಬೇಗ್ ಮಾತನಾಡುತ್ತಾ, ಕ್ರೀಡೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ ಎಂದು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಚೆಸ್ ತೀರ್ಪುಗಾರರಾಗಿ ಆಗಮಿಸಿದ್ದ ,ರಾಷ್ಟ್ರೀಯ ತಿರುಪುಗಾರರಾದ ಮಂಜುನಾಥ್ ಮಾತನಾಡುತ್ತಾ ಚದುರಂಗದಲ್ಲಿ ಶಿವಮೊಗ್ಗ ರಾಷ್ಟ್ರ ಮತ್ತು ಅಂತರಾಷ್ಟ್ರಮಟ್ಟದಲ್ಲಿ ಅನೇಕ ಕ್ರೀಡಾಪಟುಗಳನ್ನು ಕ್ರೀಡಾ ಕ್ಷೇತ್ರಕ್ಕೆ ನೀಡಿದೆ ಎಂದು ಸ್ಮರಿಸಿಕೊಂಡರು.
ಸಂಸ್ಥೆಯ ಕಾರ್ಯದರ್ಶಿ ಇರ್ಷಾದ್ ಅಲಿ, ಯೋಗಾಸನ ತೀರ್ಪುಗಾರರಾದ ಶ್ರೀಮತಿ ಸುನಿತಾ ಯೋಗಾಸನದ ನಿಯಮಗಳು ಮತ್ತು ಅದರಿಂದ ಆಗುವ ಪ್ರಯೋಜನಗಳ ಬಗ್ಗೆ ಮಾತನಾಡಿದರು .
ಕಾರ್ಯಕ್ರಮದಲ್ಲಿ ಕೆ. ಜಿ. ಮಠಪತಿ, ಸೋಮಶೇಖರ್ ಎಸ್. ಆರ್., ರವಿಕುಮಾರ್, ಪೋಷಕರು ಮತ್ತು ಕ್ರೀಡಾಪಟುಗಳು,ಇನ್ನೂ ಮುಂತಾದವರು ಉಪಸ್ಥಿತರಿದ್ದರು.