ಶಿವಮೊಗ್ಗ : ಕೆ.ಎಸ್.ಈಶ್ವರಪ್ಪ ಅಭಿಮಾನಿ ಬಳಗದ ವತಿಯಿಂದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರ ೭೮ನೇ ಹುಟ್ಟುಹಬ್ಬದ ಅಂಗವಾಗಿ ಜೂ.೧೦ರಂದು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಿವಮೊಗ್ಗ ಭಜನಾ ಪರಿಷತ್ ಕಾರ್ಯದರ್ಶಿ ಶಬರೀಶ್ ಕಣ್ಣನ್ ತಿಳಿಸಿದರು.
ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮದ ‘ಸಂಗೀತಾಭಿನಂದನೆ’ಯ ಹೆಸರಿನಲ್ಲಿ ೫೦೦ ಕ್ಕೂ ಹೆಚ್ಚು ಮಾತೆಯರಿಂದ ಸಮೂಹ ಗಾಯನ ನಡೆಯಲಿದ್ದು, ವಿಶೇಷವಾಗಿ ಕೆ.ಎಸ್.ಈಶ್ವರಪ್ಪ ಅವರು ಧರ್ಮಜಾಗೃತಿ, ದೈವಭಕ್ತಿ ಮತ್ತು ರಾಷ್ಟ್ರಪ್ರೇಮದಲ್ಲಿ ಅಪಾರ ನಂಬಿಕೆ ಮತ್ತು ಕಳಕಳಿ ಹೊಂದಿರುವುದರಿಂದ ಅವರಿಗಾಗಿ ದೈವಭಕ್ತಿ ಮತ್ತು ರಾಷ್ಟ್ರಪ್ರೇಮವನ್ನು ಒಳಗೊಂಡ ಗೀತೆಗಳನ್ನೇ ಆಯ್ಕೆ ಮಾಡಿಕೊಂಡು ಹಾಡಿಸಲಾಗುವುದು ಎಂದರು.

‘ಸಂಗೀತಾಭಿನಂದನೆ’ಯ ಪೂರ್ವತಯಾರಿಯ ಮೊದಲ ಅಭ್ಯಾಸವರ್ಗ ಮೇ ೨೮, ೨೯ ಮತ್ತು ೩೦ ರಂದು ಶುಭಮಂಗಳ ಸಮುದಾಯ ಭವನದಲ್ಲಿ ಬೆ.೧೧ ರಿಂದ ನಡೆಯಲಿದೆ. ಎರಡನೇ ಅಭ್ಯಾಸವರ್ಗ ಜೂ.೧, ೨ ಮತ್ತು ೩ ರಂದು ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಬೆ.೧೧ ರಿಂದ ನಡೆಯಲಿದೆ ಎಂದರು.

ಈ ಕಾರ್ಯಕ್ರಮಕ್ಕೆ ಶಿವಮೊಗ್ಗ ನಗರದ ವಿವಿಧ ಭಜನಾ ಮಂಡಳಿಗಳ ಮಾತೆಯರು ಅಭ್ಯಾಸದಲ್ಲಿ ತೊಡಗಿದ್ದು, ಆಸಕ್ತ ಮಾತೆಯರು, ಮಹಿಳಾ ಮಂಡಳಿಯವರು ಸಹ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ೯೯೬೪೦೭೨೭೯೩ಗೆ ಸಂಪರ್ಕಿಸಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ಸುವರ್ಣಾಶಂಕರ್, ಪ್ರಮುಖರಾದ ಉಮಾಮೂರ್ತಿ, ಎಂ.ಜಿ. ಬಾಲು, ಮೋಹನ್ ಜಾದವ್ ಉಪಸ್ಥಿತರಿದ್ದರು.