ಶಿವಮೊಗ್ಗ : ಹೈಕೋರ್ಟ್ ಸಂಚಾರಿ ಪೀಠ ಶಿವಮೊಗ್ಗದಲ್ಲೇ ಸ್ಥಾಪನೆಯಾಗಬೇಕು ಎಂದು ಒತ್ತಾಯಿಸಿ ಜಿಲ್ಲಾ ವಕೀಲರ ಸಂಘ ಕಳೆದ ಏಳು ದಿನಗಳಿಂದ ನಡೆಸುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಇಂದು ಜಿಲ್ಲಾ ಜೆ.ಡಿ.ಎಸ್. ಬೆಂಬಲ ವ್ಯಕ್ತಪಡಿಸಿ ಧರಣಿಯಲ್ಲಿ ಪಾಲ್ಗೊಂಡಿತು.
ಈ ಸಂದರ್ಭದಲ್ಲಿ ಶಾಸಕಿ ಶಾರದಾ ಪೂರ್ಯಾನಾಯ್ಕ್ ಮಾತನಾಡಿ, ಜೆ.ಡಿ.ಎಸ್.ಪಕ್ಷ ಈ ಹೋರಾಟಕ್ಕೆ ಗುರಿ ತಲುಪುವವರೆಗೆ ಸದಾ ಬೆಂಬಲಿಸುತ್ತದೆ. ಜೂನ್ ೧ರಂದು ಮುಖ್ಯಮಂತ್ರಿಗಳು ಹಾಗೂ ಬಹುತೇಕ ಸಂಪುಟ ಸಚಿವರು ನಗರಕ್ಕೆ ಆಗಮಿಸುತ್ತಿದ್ದಾರೆ. ಈಗಾಗಲೇ ಮುಖ್ಯಮಂತ್ರಿಗಳಿಗೆ ಈ ಕುರಿತು ಮನವಿ ನೀಡಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲೆಯ ಜನಪ್ರತಿನಿಧಿಗಳು ಸಿ.ಎಂ.ಗಮನಕ್ಕೆ ತಂದಿದ್ದಾರೆ. ಆದರೂ ಕೂಡ ಸಿ.ಎಂ.ಇಲ್ಲಿಗೆ ಬಂದಾಗ ಇಲ್ಲಿನ ಎಲ್ಲಾ ಸಂಘ ಸಂಸ್ಥೆಗ, ರಾಜಕೀಯ ಮುಖಂಡರೊಂದಿಗೆ ಮತ್ತೊಮ್ಮೆ ಭೇಟಿಯಾಗಿ ಶಿವಮೊಗ್ಗಕ್ಕೆ ಯಾಕೆ ಹೈಕೋಟ್ ಪೀಠ ಬೇಕು ಮತ್ತು ಮಂಗಳೂರಿಗಿಂತ ಮಧ್ಯ ಕರ್ನಾಟಕದ ಶಿವಮೊಗ್ಗಕ್ಕೇ ನೀಡಿದರೆ ಯಾವ ರೀತಿ ಅನುಕೂಲವಾಗುತ್ತದೆ ಮತ್ತು ಮಾನ ದಂಡದ ಪ್ರಕಾರ ಶಿವಮೊಗ್ಗವೇ ಸೂಕ್ತವಾಗಿದೆ ಎಂಬುದರ ಬಗ್ಗೆ ಅವರಿಗೆ ವಿವರಿಸಲಾಗುವುದು. ಬರುವ ವಿಧಾನಮಂಡಲದ ಅಧಿವೇಶನದಲ್ಲೂ ಈ ಕುರಿತು ಪ್ರಸ್ತಾಪ ಮಾಡಿ ಒತ್ತಾಯಿಸುತ್ತೇನೆ ಎಂದರು.

ಮಾಜಿ ಶಾಸಕ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ ಮಾತನಾಡಿ, ಮುಖ್ಯಮಂತ್ರಿಗಳಿಗೆ ಒತ್ತಾಯಿಸುವುದು ಮಾತ್ರವಲ್ಲ. ಜನಪ್ರತಿನಿಧಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ರಾಜಿನಾಮೆ ನೀಡಲೂ ಸಿದ್ಧರಾಗಬೇಕು. ಆಗ ಹೈಕೋಟ್ ಪೀಠದ ಈ ಬೇಡಿಕೆಗೆ ಬಲ ಬರುತ್ತದೆ. ಹೋರಾಟ ಬಲಗೊಳ್ಳಬೇಕಾದರೆ ಇನ್ನೂ ಹೆಚ್ಚಿನ ರೀತಿಯಲ್ಲಿ ರಾಜಕೀಯ ಒತ್ತಡ ತಂತ್ರ ಅವಶ್ಯಕವಾಗಿದೆ. ಮಂಗಳೂರಿನಲ್ಲಿ ಹೈಕೋಟ್ ಪೀಠ ತೆರೆದು ಶಿವಮೊಗ್ಗವನ್ನು ಅಲ್ಲಿಗೆ ಸೇರಿಸುವುದು ಅವೈಜ್ಞಾನಿಕ ಮತ್ತು ಬಡವರ ಮೇಲೆ ಆರ್ಥಿಕ ಹೊರೆಯಾಗುವುದರಿಂದ ಇದರ ಗಂಭೀರತೆಯನ್ನು ಮನಗಂಡು ಇಲ್ಲಿಯೇ ಹೈಕೋಟ್ ಪೀಠ ಸ್ಥಾಪನೆಗೆ ಒಕ್ಕೊರಲ ಒತ್ತಾಯ ಜೆಡಿಎಸ್ ಮಾಡುತ್ತಿದ್ದು ಈ ಹೋರಾಟಕ್ಕೆ ಸದಾ ಬೆಂಬಲ ನೀಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಅಧ್ಯಕ್ಷರಾದ ಕೆ.ಬಸಪ್ಪಗೌಡ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಆರ್.ರಾಘವೇಂದ್ರಸ್ವಾಮಿ, ಪ್ರಮುಖರಾದ ವಕೀಲ ಕೆ.ಪಿ.ಶ್ರೀಪಾಲ್, ಜೆಡಿಎಸ್ ಪ್ರಮುಖರಾದ ಕೆ.ಎನ್.ರಾಮಕೃಷ್ಣ, ಶಾರದಾ ಅಪ್ಪಾಜಿ ಗೌಡ, ಕಡಿದಾಳ್ ಗೋಪಾಲ್, ಸಂಗಯ್ಯ, ಎಚ್.ಆರ್.ಹನುಮಂತಪ್ಪ, ಗಂಧದಮನೆ ನರಸಿಂಹ, ಗೀತಾ ಸತೀಶ್, ಎಸ್.ವಿ.ರಾಜಮ್ಮ, ತ್ಯಾಗರಾಜ್, ಮಂಜುನಾಥ ಬೊಮ್ಮನಕಟ್ಟೆ, ಸತೀಶ್, ದಾದಾಪೀರ್, ಎಸ್.ಎಲ್. ನಿಖಿಲ್, ಪ್ರೇಮ್ಕುಮಾರ್, ವಾಜಿದ್ ಮತ್ತಿತರರಿದ್ದರು.